ADVERTISEMENT

ಆರ್‌ಸಿಬಿ ವಿಜಯೋತ್ಸವ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 9:15 IST
Last Updated 6 ಜೂನ್ 2025, 9:15 IST
ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ    

ಬೆಂಗಳೂರು: ‘ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟಿರುವ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ವಿಜಯೋತ್ಸವ ಬೇಡ ಎಂದು ಪೊಲೀಸರು ಹೇಳಿದ್ದರೂ, ಕಾರ್ಯಕ್ರಮ ನಡೆಸಲೇಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದರು’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಶುಕ್ರವಾರ  ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯೋತ್ಸವ ಆಚರಣೆಗೆ ಅನುಮತಿ ನೀಡಿ ಎಂದು ಆರ್‌ಸಿಬಿಯವರು ಸಲ್ಲಿಸಿದ್ದ ಮನವಿಯನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ತಿರಸ್ಕರಿಸಿದ್ದರು. ಕಾರ್ಯಕ್ರಮ ಆಯೋಜಿಸಬೇಡಿ ಎಂದು ಹೇಳಿದ್ದರು’ ಎಂದರು.

‘ನಂತರ ಆರ್‌ಸಿಬಿಯವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಒಬ್ಬರನ್ನು ಕರೆದುಕೊಂಡು, ಸಿದ್ದರಾಮಯ್ಯ ಅವರ ಬಳಿಗೆ ಹೋದರು. ವಿಧಾನಸೌಧದ ಬಳಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಪ್ರಸ್ತಾಪಿಸಿದರು. ಪೊಲೀಸ್‌ ಕಮಿಷನರ್ ಅವರನ್ನು ಕರೆಸಿದ ಮುಖ್ಯಮಂತ್ರಿ, ‘ನಾನು ಹೇಳುತ್ತಿದ್ದೇನೆ. ಅನುಮತಿ ನೀಡಿ, ಭದ್ರತೆ ಒದಗಿಸಿ’ ಎಂದು ತಾಕೀತು ಮಾಡಿದರು. ಹೀಗಾಗಿ ಸಿದ್ದರಾಮಯ್ಯ ಅವರನ್ನೇ ಇದರಲ್ಲಿ ತಪ್ಪಿತಸ್ಥನನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸಿದ್ದರಾಮಯ್ಯಗೆ ಎಲ್ಲಿ ಹೆಸರು ಬಂದು ಬಿಡುತ್ತದೆಯೋ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಕಪುರದಿಂದ ಓಡಿ ಬಂದರು. ಆರ್‌ಸಿಬಿ ಆಟಗಾರರನ್ನು ಸ್ವತಃ ತಾವೇ ಬರಮಾಡಿಕೊಂಡರು. ವಿಧಾನಸೌಧಕ್ಕೂ ಕರೆದುಕೊಂಡು ಬಂದರು. ಅಲ್ಲಿ ಸನ್ಮಾನದ ಬದಲಿಗೆ ಆಟಗಾರರಿಗೆ ಅವಮಾನ ಮಾಡಿದರು. ತಾವು ಮತ್ತು ತಮ್ಮ ಮಕ್ಕಳು, ಮೊಮ್ಮಕಳ ಫೋಟೊಶೂಟ್‌ ನಡೆಸಿದರು’ ಎಂದರು.

‘ಜನರು ಸಾಯುತ್ತಿದ್ದಾಗಲೂ ರಾಜ್ಯದ ಉಪ ಮುಖ್ಯಮಂತ್ರಿ ಟ್ರೋಫಿಗೆ ಮುತ್ತಿಡುತ್ತಿದ್ದರು. ಮುಖ್ಯಮಂತ್ರಿ ತಮ್ಮ ಮೊಮ್ಮಗನ ಜತೆಗೆ ಸಿಹಿ ತಿನ್ನಲು ಜನಾರ್ಧನ ಹೋಟೆಲ್‌ಗೆ ಹೋಗಿದ್ದರು. ಜನ ಸತ್ತ ವಿಚಾರ ತಮಗೇ ಗೊತ್ತೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅದು ನಿಜವೇ ಆಗಿದ್ದರೆ, ಆಡಳಿತದ ಮೇಲೆ ಅವರಿಗೆ ಎಂತಹ ಹಿಡಿತ ಇದೆ? ಇದು ಗುಪ್ತಚರ ಇಲಾಖೆಯ ವೈಫಲ್ಯ ಅಲ್ಲವೇ’ ಎಂದು ಪ್ರಶ್ನಿಸಿದರು.

‘ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲು ಒತ್ತಡ ತಂದ ರಾಜಕೀಯ ಕಾರ್ಯದರ್ಶಿಯನ್ನು ಮೊದಲು ಆ ಹುದ್ದೆಯಿಂದ ಕಿತ್ತುಹಾಕಿ. ನೈತಿಕತೆ ಇದ್ದದ್ದೇ ಆದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಇಲ್ಲವೇ ಕಾಂಗ್ರೆಸ್‌ ಹೈಕಮಾಂಡ್‌ ಈ ಮೂರನ್ನೂ ಕೊತ್ತೊಗೆಯಬೇಕು’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಈ ಪ್ರಕರಣದಲ್ಲಿ ನಿಜವಾದ ತಪ್ಪಿತ್ತಸ್ಥರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ. ಇವರನ್ನು ಎ1, ಎ2 ಮತ್ತು ಎ3 ಆಗಿಸಿ ಹೊಸ ಎಫ್‌ಐಆರ್ ದಾಖಲಿಸಬೇಕು. ಆದರೆ ಪೊಲೀಸ್‌ ಅಧಿಕಾರಿಗಳನ್ನು ಬಲಿಕೊಟ್ಟಿದ್ದಾರೆ’ ಎಂದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ‘ಈ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಮನವಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಾಜವಾದಿ, ದಲಿತ ಪರ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯ ಅವರು ಇಂದು, ಒಬ್ಬ ಪರಿಶಿಷ್ಟ ಪಂಗಡದ ಪೊಲೀಸ್‌ ಅಧಿಕಾರಿಯನ್ನು ಬಲಿಕೊಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.