ADVERTISEMENT

ಚರ್ಚೆ ಆಹ್ವಾನ ಲೆಕ್ಕಿಸದ ಬಿಜೆಪಿ: ಮುತ್ತಿಗೆ ಹಾಕುವ ವೇಳೆ ನಾಯಕರು ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 8:41 IST
Last Updated 16 ಜೂನ್ 2019, 8:41 IST
   

ಬೆಂಗಳೂರು: ಜಿಂದಾಲ್‌ ಸಂಸ್ಥೆಗೆ ಭೂಮಿ ಮಂಜೂರು ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ನಾಯಕರು ಇಂದು ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದರು.

ಬೆಂಗಳೂರಿನಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆಯುತ್ತಿದ್ದ ಆಹೋರಾತ್ರಿ ಧರಣಿ ಸ್ಥಳದಿಂದ ಬಿಜೆಪಿ ನಾಯಕರು ಮುಖ್ಯಮಂತ್ರಿ ಗೃಹ ಕಚೇರಿ ಬಳಿಗೆ ಮೆರವಣಿಗೆ ಮೂಲಕ ತೆರಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಈ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಸಿಎಂ ಗೃಹ ಕಚೇರಿಯತ್ತ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಗಾಂಧಿ ಭವನದ ಬಳಿಯೇ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಕರೆದೊಯ್ದರು.

ಪ್ರತಿಭಟನೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ, ಶಾಸಕರಾದಆರ್.ಅಶೋಕ್, ರೇಣುಕಾಚಾರ್ಯ, ಕರುಣಾಕರ ರೆಡ್ಡಿ ಮತ್ತಿತರರುಇದ್ದರು. ಮೆರವಣಿಗೆ ಸಮಯದಲ್ಲಿ ತಳ್ಳಾಟ ನಡೆದು, ಅಶೋಕ್ ಹೆಬ್ಬೆರಳಿಗೆ ಗಾಯವಾಯಿತು.ಬಿಜೆಪಿ ಮೆರವಣಿಗೆಯಿಂದಾಗಿ ಶೇಷಾದ್ರಿಪುರಂ ಭಾಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಇದಕ್ಕೂ ಮೊದಲು, ಜಿಂದಾಲ್‌, ಬರ, ಸಾಲ ಮನ್ನಾ ಕುರಿತು ಚರ್ಚೆಗೆ ಬರುವಂತೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದರು. ಈ ಬಗ್ಗೆ ಶನಿವಾರ ರಾತ್ರಿಯೇ ಟ್ವೀಟ್‌ ಮಾಡಿದ್ದ ಸಿಎಂ, ಭಾನುವಾರ ಬೆಳಗ್ಗೆ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದರು. ಇದ್ಯಾವುದನ್ನೂ ಪರಿಗಣಿಸಿದ ಬಿಜೆಪಿ ನಾಯಕರು ಹೋರಾಟ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.