ADVERTISEMENT

‘ರಾಜಕುಮಾರ’ನ ಹಣೆಗೆ ಮುತ್ತಿಟ್ಟ ಸಿ.ಎಂ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 21:45 IST
Last Updated 31 ಅಕ್ಟೋಬರ್ 2021, 21:45 IST
ಪುನೀತ್‌ ಹಣೆಗೆ ಮುತ್ತಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪುನೀತ್‌ ಹಣೆಗೆ ಮುತ್ತಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವುಕತೆಯಿಂದ ಪುನೀತ್‌ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರವನ್ನು ಬಾರದ ಲೋಕಕ್ಕೆ ಬೀಳ್ಕೊಟ್ಟರು.

ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿದ್ದಪುನೀತ್‌ ಮೃತದೇಹವಿದ್ದ ಗಾಜಿನ ಪೆಟ್ಟಿಗೆ ಬಳಿ ಬರುವ ಮುನ್ನ ತಾವು ಹಾಕಿಕೊಂಡಿದ್ದ ಚಪ್ಪಲಿಗಳನ್ನು ದೂರದಲ್ಲೇ ಕಳಚಿದ ಅವರು ನಂತರ ತದೇಕಚಿತ್ತದಿಂದ ಅಪ್ಪುವಿನ ಮೊಗವನ್ನು ನೋಡಿ ಕೈಮುಗಿದರು.

ಅಲ್ಲೆ ನಿಂತಿದ್ದ ಶಾಸಕ ರಾಜುಗೌಡಗೆ ಶವಪೆಟ್ಟಿಗೆ ತೆರೆಯುವಂತೆ ಸೂಚಿಸಿದ ಅವರು ಪುನೀತ್‌ ಹಣೆಗೆ ಎರಡು ಬಾರಿ ಮುತ್ತಿಟ್ಟರು. ಬಲಗೈಯಿಂದ ತಲೆಯನ್ನು ನೇವರಿಸಿದರು. ಎರಡೂ ಕೈಗಳಿಂದ ಎದೆಯನ್ನು ಸ್ಪರ್ಶಿಸಿದರು. ಬಳಿಕ ಮತ್ತೆ ತಲೆ ನೇವರಿಸಿದರು. ಎರಡೂ ಕೈಗಳಿಂದ ಕೆನ್ನೆಯನ್ನು ಸವರುವ ವೇಳೆ ಗದ್ಗದಿತರಾದರು. ಅವರಿಗೆ ಅರಿವಿಲ್ಲದ ಹಾಗೆಯೇ ಕಣ್ಣುಗಳು ಹನಿಗೂಡಿದ್ದವು. ಬಳಿಕ ಕೈಜೋಡಿಸಿ ಮತ್ತೊಮ್ಮೆ ಪಾರ್ಥಿವ ಶರೀರಕ್ಕೆ ನಮಿಸಿದರು.

ADVERTISEMENT

ಅಲ್ಲಿಂದ ನೇರವಾಗಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಳಿ ಹೋಗಿ ಅವರಿಗೆ ಧೈರ್ಯ ಹೇಳಿದರು. ಆ ದೃಶ್ಯ ನೋಡುಗರ ಕಣ್ಣುಗಳನ್ನು ತೇವಗೊಳಿಸುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.