ADVERTISEMENT

ಹೈಕಮಾಂಡ್‌ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ: ಪುನರುಚ್ಚರಿಸಿದ ಸಿ.ಎಂ, ಡಿಸಿಎಂ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:47 IST
Last Updated 2 ಡಿಸೆಂಬರ್ 2025, 6:47 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ&nbsp;ಡಿ.ಕೆ. ಶಿವಕುಮಾರ್‌</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

   

ಬೆಂಗಳೂರು: ‘ಹೈಕಮಾಂಡ್‌ ಹೇಳಿದಂತೆ, ರಾಹುಲ್‌ ಗಾಂಧಿ ಏನು ತೀರ್ಮಾನ ಮಾಡುತ್ತಾರೊ ಅದರಂತೆ ನಾವಿಬ್ಬರೂ ನಡೆದುಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್‌ ಅವರ ಮನೆಯಲ್ಲಿ ಮಂಗಳವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. 

ADVERTISEMENT

‘ಸಮಯ ಸಿಕ್ಕಿದರೆ, ಅವರು (ಹೈಕಮಾಂಡ್‌) ನಮಗೆ ಅವಕಾಶ ನೀಡಿದರೆ ನಾವು ಭೇಟಿ ಮಾಡುತ್ತೇವೆ’ ಎಂದೂ ಹೇಳಿದರು.

‘ನಾವು ಯಾವಾಗಲೂ ಒಗ್ಗಟ್ಟಾಗಿದ್ದೇವೆ. ಇವತ್ತು ಒಗ್ಗಟ್ಟಾಗಿ ಇರುವುದಲ್ಲ, ಮೊನ್ನೆ ಒಗ್ಗಟ್ಟಾಗಿ ಇರುವುದಲ್ಲ. ನಾವು ಯಾವಗಲೂ ಒಂದೇ ಪಕ್ಷ, ಒಂದೇ ಸಿದ್ಧಾಂತ ಹೊಂದಿವರು. ಒಟ್ಟಿಗೆ ಕೆಲಸ ಮಾಡುತ್ತೇವೆ. 2028ರಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ’ ಎಂದರು.

‌‘ಮೊನ್ನೆಯೇ ನಮ್ಮ ಮನೆಗೆ ಡಿಕೆಶಿ ಬಂದಿದ್ದರಲ್ಲ. ಆವಾಗಲೇ, ಅವರ ಮನೆಗೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಬರುತ್ತೇನೆ ಎಂದು ನಾನು ಹೇಳಿದ್ದೆ. ಮಂಗಳವಾರ ಬನ್ನಿ ಅಂದಿದ್ದರು. ಹೀಗಾಗಿ ಬಂದಿದ್ದೇನೆ’ ಎಂದರು,

‘ಪಕ್ಷದ ವಿಚಾರಗಳನ್ನು ನಾವಿಬ್ಬರೂ ಚರ್ಚೆ ಮಾಡಿದ್ದೇವೆ. ಇದೇ 8ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತದೆ. ಎರಡು ವಾರ ಅಧಿವೇಶನ ನಡೆಯಲಿದೆ. ಅಲ್ಲಿ ನಮ್ಮ ಕಾರ್ಯತಂತ್ರ, ರಣನೀತಿ ಹೇಗಿರಬೇಕೆಂದು ಚರ್ಚೆ ಮಾಡಿದ್ದೇವೆ’ ಎಂದರು. 

‘ಬಿಜೆಪಿ– ಜೆಡಿಎಸ್‌ನವರು ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದ್ದಾರೆ ಎನ್ನುವುದು ಪತ್ರಿಕೆಗಳಿಂದ ಗೊತ್ತಾಗಿದೆ. ಅಲ್ಲದೆ, ಬೇರೆ ವಿಚಾರಗಳನ್ನೂ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ನವರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಅವರನ್ನು ಎದುರಿಸಲು ನಾವು ತಯರಾಗಿದ್ದೇವೆ’ ಎಂದರು.

‘ನಾವು ಕೂಡಾ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕಬ್ಬಿನ ವಿಚಾರ ಇರಬಹುದು, ಮೆಕ್ಕೆಜೋಳದ ವಿಚಾರ ಇರಬಹುದು. ಕಬ್ಬು ಬೆಳೆಗಾರರ ಜೊತೆ , ರೈತ ಮುಖಂಡರ ಜೊತೆ ಚರ್ಚೆ ಮಾತನಾಡಿದ್ದೇನೆ. ಮೆಕ್ಕೆಜೋಳದ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ಡಿಸ್ಟಿಲರಿ ಮಾಲೀಕರ ಜೊತೆಗೂ ಮಾತನಾಡಿದ್ದೇನೆ. ಸಂಸದರ ಸಭೆ ಕರೆಯಲು ನಿರ್ಧರಿಸಿದ್ದೇನೆ. 8ನೇ ತಾರೀಕಿನಿಂದ ಸಂತಾಪ ಸೂಚನೆಯ ಬಳಿಕ ಸದನ ಮುಂದೂಡುವ ಸಾಧ್ಯತೆಯಿದೆ, ಅಂದೇ ಸಂಸದರ ಸಭೆ ಕರೆಯಲು ನಿರ್ಧರಿಸಿದ್ದೇವೆ’ ಎಂದರು.

ನಾನು ಮತ್ತು ಕೆ.ಸಿ. ವೇಣುಗೋಪಾಲ್‌ ಮಂಗಳೂರಿನಲ್ಲಿ ಬುಧವಾರ ಜೊತೆಗೆ ಇರುತ್ತೇವೆ’ ಎಂದೂ ಹೇಳಿದರು.

ನಮ್ಮದು ಒಂದೇ ಧ್ವನಿ: ‘ನಾವು ಪಕ್ಷದ ವಿಷಯ, ಅಧಿವೇಶನದ ವಿಷಯವನ್ನು ಚರ್ಚೆ ಮಾಡಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ನಮ್ಮದು ಒಂದೇ ಧ್ವನಿ. ಒಂದೇ ಆಚಾರ, ವಿಚಾರ. ಅವರು (ಬಿಜೆಪಿ, ಜೆಡಿಎಸ್‌) ಅವಿಶ್ವಾಸ ನಿರ್ಣಯವಲ್ಲ, ಏನೇ ತಂದರೂ ನಾವು ಅದನ್ನು ಸಮರ್ಥವಾಗಿ ಎದುರಿಸುತ್ತೇವೆ’ ಎಂದರು.

‘ಸಂಸದರ ಜೊತೆ ಚರ್ಚೆ ನಡೆಸಲು ಇದೇ 8ರಂದು ದೆಹಲಿಗೆ ಹೋಗಲು ಚಿಂತನೆ ನಡೆಸಿದ್ದೇವೆ’ ಎಂದೂ ಹೇಳಿದರು. 

‘ನಮ್ಮ ಮಧ್ಯೆ ಯಾವುದೇ ಗೊಂದಲ ಇಲ್ಲ. ನಾವು ಇಬ್ಬರೂ ಜೊತೆಯಾಗಿ ಸರ್ಕಾರವನ್ನು ಮುನ್ನಡೆಸುತ್ತೇವೆ’ ಎಂದರು. 

ಅಧಿಕಾರ ಹಸ್ತಾಂತರ ಗೊಂದಲ ನಿವಾರಿಸಲು ಹೈಕಮಾಂಡ್‌ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಶನಿವಾರ (ನ. 29) ನಡೆದ ಉಪಾಹಾರ ಸಭೆಯ ಮುಂದುವರೆದ ಭಾಗವಾಗಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸದಾಶಿವನಗರದಲ್ಲಿರುವ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೆಳಿಗ್ಗೆ ಉಪಾಹಾರ ಸೇವಿಸಿದರು. ಸಿದ್ದರಾಮಯ್ಯ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಡಿ.ಕೆ. ಶಿವಕುಮಾರ್‌ ಅವರ ಮನೆಯಲ್ಲಿ ಇದ್ದರು. ತಮ್ಮ ಮನೆಗೆ ಬಂದ ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಸಿದ್ದರಾಮಯ್ಯ ಅವರು ನಾಟಿ ಕೋಳಿ ಸಾರ್ ಮತ್ತು ಇಡ್ಲಿ ಸವಿದರು. ಡಿ.ಕೆ. ಶಿವಕುಮಾರ್ ಅವರ ತಮ್ಮ ಡಿ.ಕೆ. ಸುರೇಶ್‌, ಶಾಸಕ ಕುಣಿಗಲ್‌ ರಂಗನಾಥ್ ಕೂಡಾ ಉಭಯ ನಾಯಕರ ಜೊತೆಗೆ ಉಪಾಹಾರ ಸೇವಿಸಿದರು.