ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಯಾವ ಗೊಂದಲಗಳೂ ಇಲ್ಲ. ಗೊಂದಲಗಳಿದ್ದರೆ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ, ಬಗೆಹರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ದೆಹಲಿಗೆ ತೆರಳುವ ಮುನ್ನ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಬಹುತೇಕ ನಾಯಕರು ಭೇಟಿ ಮಾಡಿದ್ದಾರೆ. ಎಲ್ಲವನ್ನೂ ಮಾಧ್ಯಮಗಳಿಗೆ ಹೇಳಿ ಮಾಡಬೇಕಾ ಎಂದು ಪ್ರಶ್ನಿಸಿದರು.
ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, ದೆಹಲಿಯಲ್ಲಿ ಡಿ.27ರಂದು ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ವೀರಪ್ಪ ಮೊಯಿಲಿ, ಬಿ.ಕೆ.ಹರಿಪ್ರಸಾದ್ ಭಾಗವಹಿಸುತ್ತಿದ್ದಾರೆ. ಹಿಂದೆ ನಾನು ಸದಸ್ಯನಾಗಿದ್ದೆ. ಈಗ ಇಲ್ಲ. ಹಾಗಾಗಿ, ಆಹ್ವಾನ ಬಂದಿಲ್ಲ ಎಂದರು.
ವಿಜಯೇಂದ್ರ ಮಾತಿಗೆ ಪ್ರಿಯಾಂಕ್ ಟೀಕೆ: ರಾಜ್ಯದ ಜನರು ಕಾಂಗ್ರೆಸ್ಗೆ ಐದು ವರ್ಷಗಳು ಅಧಿಕಾರ ನೀಡಿದ್ದಾರೆ. ಬಿಜೆಪಿ ಬಯಸಿದ ತಕ್ಷಣ ಚುನಾವಣೆ ನಡೆಯುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿ ಚುನಾವಣೆಯನ್ನು ಯಾರ ನಾಯಕತ್ವದಲ್ಲಿ ನಡೆಸುತ್ತದೆ? ಅವರಿಗೆ ಸದನದಲ್ಲಿ ನಿಳುವಳಿ ಸೂಚನೆ ಕುರಿತು ಅರ್ಧ ಗಂಟೆ ಮಾತನಾಡಲು ಬರುವುದಿಲ್ಲ. ಆಳಂದದಲ್ಲಿ ₹70, ₹80ಕ್ಕೆ ಮತಗಳವು ಮಾಡಿದ್ದರ ಬಗ್ಗೆ ಮೊದಲು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
‘ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ ಬಿಜೆಪಿ ನಮ್ಮ ಸರ್ಕಾರದ ವೈಫಲ್ಯ ತೋರಿಸಬಹುದಿತ್ತು. ಸರ್ಕಾರದ ವಿರುದ್ಧ ಧ್ವನಿ ಎತ್ತಲೂ ಅವರಿಗೆ ಆಗಲಿಲ್ಲ. ಕರ್ನಾಟಕದಲ್ಲಿ ಇರುವುದು ದುರ್ಬಲ ವಿರೋಧ ಪಕ್ಷ, ಎರಡು ಅವಧಿಯಲ್ಲಿ ಐದು ಮುಖ್ಯಮಂತ್ರಿ ಕೊಟ್ಟ ಬಿಜೆಪಿಯಿಂದ ಹಿತವಚನ ಕೇಳಬೇಕಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.