ಬೆಂಗಳೂರು: ತಂತ್ರಜ್ಞಾನ ಬೆಳೆದಂತೆ ಆನ್ಲೈನ್ ವಂಚನೆಯ ಜಾಲವೂ ವಿಸ್ತಾರವಾಗುತ್ತಿದ್ದು, ಅನಕ್ಷರಸ್ಥರು ಮಾತ್ರವಲ್ಲದೇ ಶಿಕ್ಷಿತರೂ ಈ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ ವರ್ಷ (2024) 21,984 ಪ್ರಕರಣಗಳು ದಾಖಲಾಗಿದ್ದು, ₹2,120 ಕೋಟಿ ಸೈಬರ್ ಕಳ್ಳರ ಪಾಲಾಗಿದೆ. ಅಂಕಿ ಅಂಶಗಳ ಪ್ರಕಾರ ಬೆಂಗಳೂರು ಒಂದರಲ್ಲೇ 2023ರಲ್ಲಿ ₹673.03 ಕೋಟಿ ಕಳೆದುಕೊಂಡಿದ್ದ ಜನರು, 2024ರಲ್ಲಿ ₹1,998 ಕೋಟಿ ಕಳೆದುಕೊಂಡಿದ್ದಾರೆ. ನಿತ್ಯ ಸರಾಸರಿ 48 ಪ್ರಕರಣ ದಾಖಲಾಗುತ್ತಿದ್ದು, ಸೈಬರ್ ವಂಚಕರಿಂದ ಹಣ ಕಳೆದುಕೊಳ್ಳುವವರ ಸಂಖ್ಯೆ ಒಂದೇ ವರ್ಷದಲ್ಲಿ ನಗರದಲ್ಲಿ ಮೂರು ಪಟ್ಟು ಹೆಚ್ಚಳ ಆಗಿದೆ.
ವಂಚಕರು ಹೂಡಿಕೆ ಹೆಸರಿನಲ್ಲಿ ಕಳುಹಿಸಿದ ಲಿಂಕ್ ಒತ್ತಿದ ಎಡವಟ್ಟಿಗೆ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ₹15 ಲಕ್ಷ ಕಳೆದುಕೊಂಡರೆ, ಸಾಫ್ಟ್ವೇರ್ ಉದ್ಯೋಗಿಯೊಬ್ಬರು ಮನೆ ಮಾರಾಟದಿಂದ ಬಂದ ₹1.48 ಕೋಟಿ ಹಣವನ್ನು ಷೇರು ಹೂಡಿಕೆಯಲ್ಲಿ ತೊಡಗಿಸಿ ಕಳೆದುಕೊಂಡರು. ಇದು ಉದಾಹರಣೆಯಷ್ಟೇ.
ಹೀಗೆ ಹಲವು ವರ್ಷಗಳಿಂದ ದುಡಿದು ಕೂಡಿಟ್ಟಿದ್ದ ಹಣವನ್ನು ಉದ್ಯಮಿಗಳು, ವ್ಯಾಪಾರಿಗಳು, ನಿವೃತ್ತ ಸರ್ಕಾರಿ ಅಧಿಕಾರಿಗಳು, ಮಹಿಳೆಯರು ಸೇರಿದಂತೆ ಇತರರು ಕಳೆದುಕೊಳ್ಳುತ್ತಿದ್ದಾರೆ.
ಇಂಟರ್ನೆಟ್, ಖಾಸಗಿ ಕಂಪನಿಗಳ ಆ್ಯಪ್, ಸಾಮಾಜಿಕ ಜಾಲತಾಣ, ಹಣ ದ್ವಿಗುಣ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ಮೊಬೈಲ್ಗಳಿಗೆ ನಕಲಿ ಲಿಂಕ್ಗಳನ್ನು ಕಳುಹಿಸಿ ವಂಚನೆ ಮಾಡುತ್ತಿದ್ದಾರೆ.
ನಿತ್ಯ ಒಂದಿಲ್ಲೊಂದು ಹೊಸ ಮಾದರಿಯ ಮೂಲಕ ಸಾರ್ವಜನಿಕರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿರುವ ವಂಚಕರು, ತನಿಖೆಗೂ ಸವಾಲಾಗಿ ಪರಿಣಮಿಸುತ್ತಿದ್ದಾರೆ. ಸೈಬರ್ ವಂಚಕರ ಕುರಿತು ನಿರಂತರವಾಗಿ ಅರಿವು ಮೂಡಿಸುತ್ತಿದ್ದರೂ ಅವುಗಳ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಸೈಬರ್ ಪೊಲೀಸರು ಪ್ರಕರಣ ಬೆನ್ನಟ್ಟಿ ಹೋದರೂ ಯಶಸ್ಸಿನ ಪ್ರಮಾಣ ಮಾತ್ರ ಕಡಿಮೆ. ನಕಲಿ ಬ್ಯಾಂಕ್ ಖಾತೆಗಳನ್ನು ಹೊಂದಿರುವುದು, ವಿದೇಶಿ ಕಂಪನಿಗಳ ಮಾಹಿತಿ ಸಿಗದಿರುವುದು, ವಿಪಿಎನ್ ಬಳಕೆ ಹಾಗೂ ಕ್ರಿಪ್ಟೋ ಕರೆನ್ಸಿ ಬಳಸುತ್ತಿರುವ ಕಾರಣ ಆರೋಪಿಗಳನ್ನು ಪತ್ತೆ ಮಾಡಿ ಜಪ್ತಿ ಮಾಡಲು ಆಗುತ್ತಿಲ್ಲ.
ಅಲ್ಲದೇ ವಂಚನೆಗೆ ಒಳಗಾದವರು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿರುವುದರಿಂದ ಬ್ಯಾಂಕ್ಗಳಿಂದ ಮಾಹಿತಿ ಬರುವುದು ತಡವಾಗುತ್ತಿರುವುದು ವಂಚಕರ ಪತ್ತೆಗೆ ಅಡ್ಡಿಯಾಗಿದೆ. ದುಬೈ, ಕಾಂಬೋಡಿಯಾ, ಥಾಯ್ಲೆಂಡ್, ಹಾಂಕಾಂಗ್, ಚೀನಾ ಮೂಲದ ಸೈಬರ್ ಅಪರಾಧಿಗಳು ಹೆಚ್ಚಾಗಿದ್ದು, ಅವರ ಮೂಲ ತಲುಪುವುದು ಕಷ್ಟವಾಗಿದೆ.
‘ಮಕ್ಕಳ ಶಿಕ್ಷಣ, ಮದುವೆ, ಮನೆ ನಿರ್ಮಾಣ, ಸಾಲ ಮಾಡಿ ತಂದ ಹಣ.. ಹೀಗೆ ಕೂಡಿಟ್ಟ ಹಣವನ್ನು ಅಪರಿಚಿತರ ಕರೆ ಸ್ವೀಕರಿಸಿ ಒಟಿಪಿ ಹೇಳುವುದರಿಂದ, ಕೆಲವು ಲಿಂಕ್ಗಳನ್ನು ಒತ್ತುವುದರ ಮೂಲಕ ಕಳೆದುಕೊಳ್ಳುವುದು ನಿತ್ಯ ನಡೆಯುತ್ತಿದೆ. ಷೇರಿನಲ್ಲಿ ಹಣ ಹೂಡಿಕೆ ಮಾಡಿ, ಒಂದೇ ತಿಂಗಳಲ್ಲಿ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳುತ್ತಾರೆ. ನಂಬಿಕೆ ಬರುವ ಸಲುವಾಗಿ ಕೆಲವು ಮಂದಿಗೆ ಹೆಚ್ಚಿನ ಹಣ ಪಾವತಿಸಿ ನಂಬಿಕೆ ಮೂಡಿಸಿ ಬಳಿಕ ವಂಚನೆ ಮಾಡುತ್ತಾರೆ’ ಎಂದು ಸೆನ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದರು.
‘ಸೈಬರ್ ಅಪರಾಧ ನಡೆದ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ, ಬ್ಯಾಂಕ್ ಖಾತೆ, ಯುಪಿಐ, ವಂಚಕರು ಕಳುಹಿಸಿದ್ದ ಲಿಂಕ್, ದೂರವಾಣಿ ಸಂಖ್ಯೆಯನ್ನು ಪೊಲೀಸರಿಗೆ ಕೊಡಬೇಕು. ಅಪರಿಚಿತರ ಕರೆ ಬಗ್ಗೆ ಪೂರ್ವಾಪರ ವಿಚಾರಿಸಬೇಕು. ಡೀಪ್ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ಧ್ವನಿಗಳನ್ನು ನಕಲು ಮಾಡಿ, ಹಣಕ್ಕೆ ಬೇಡಿಕೆ ಇಡಲಾಗುತ್ತದೆ. ಲಾಟರಿ, ಕ್ರೆಡಿಟ್ ಕಾರ್ಡ್, ಬಹುಮಾನ, ನಕಲಿ ಆ್ಯಪ್ ಮತ್ತು ವೆಬ್ಸೈಟ್ ಸೇರಿ ವಿವಿಧ ಮಾರ್ಗಗಳಲ್ಲಿ ವಂಚನೆ ನಡೆಯುತ್ತಿದೆ’ ಎಂದು ಎಚ್ಚರಿಸಿದರು.
ಮೊಬೈಲ್ ಕೊಟ್ಟು ಹಣ ದೋಚಿದರು..
ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಸೈಬರ್ ವಂಚಕರು ಸಾಫ್ಟ್ವೇರ್ ಎಂಜಿನಿಯರ್ಗೆ ಕರೆ ಮಾಡಿ ಮೊಬೈಲ್ ಅನ್ನು ಕೊಡುಗೆಯಾಗಿ ಕಳುಹಿಸಿ ಅವರ ಬ್ಯಾಂಕ್ ಖಾತೆಯಿಂದ ₹2.80 ಕೋಟಿ ದೋಚಿದ್ದಾರೆ. ಮೊಬೈಲ್ನಲ್ಲಿ ಕೆಲ ಆ್ಯಪ್ ಇನ್ಸ್ಟಾಲ್ ಮಾಡಿದ್ದರು. ಮೊಬೈಲ್ಗೆ ಸಿಮ್ ಕಾರ್ಡ್ ಹಾಕಿ ಆ್ಯಕ್ಟಿವೇಟ್ ಮಾಡುತ್ತಿದ್ದಂತೆ ವಂಚಕರು ಆ ಮೊಬೈಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ಹಣ ಕಡಿತವಾದಾಗ ಮೊಬೈಲ್ ಇ–ಮೇಲ್ಗೆ ಸಂದೇಶ ಹೋಗದಂತೆ ಸೆಟ್ ಮಾಡಿದ್ದರು ಎಂಬುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.
ವಂಚನೆಗೆ ಒಳಗಾದ ತಕ್ಷಣವೇ ಸಹಾಯವಾಣಿ 1930ಕ್ಕೆ ಕರೆ ಮಾಡಬೇಕು ಅಥವಾ ಠಾಣೆಗೆ ಮಾಹಿತಿ ನೀಡಿದರೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯ. ಬಹುತೇಕರು ಹಣ ಕಳೆದುಕೊಂಡ 2–3 ದಿನ ಬಳಿಕ ಬಂದು ದೂರು ನೀಡುತ್ತಿದ್ದಾರೆ.-ಬಿ.ದಯಾನಂದ, ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.