ADVERTISEMENT

ಕಟ್ಟಡ ದುರಂತ ಪ್ರಕರಣ: ನಾಲ್ಕು ದಿನಗಳ ಬಳಿಕ ಸಾವು ಗೆದ್ದು ಬಂದ ಸೋಮನಗೌಡ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 6:32 IST
Last Updated 22 ಮಾರ್ಚ್ 2019, 6:32 IST
   

ಹುಬ್ಬಳ್ಳಿ: ಧಾರವಾಡದ ಬಹುಮಹಡಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಸೋಮನಗೌಡ ರಾಮನಗೌಡರ ನಾಲ್ಕು ದಿನಗಳ ನಂತರಜೀವಂತವಾಗಿ ಬದುಕಿ ಬಂದಿದ್ದಾನೆ.

ಈತ ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿಯಾಗಿದ್ದು, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ ಜಮನಾಳ ಕಚೇರಿ ಸಹಾಯಕನಾಗಿದ್ದ. ಮಧ್ಯಾಹ್ನ ಕಟ್ಟಡ ಕುಸಿದ ಸಂದರ್ಭದಲ್ಲಿ ಕಚೇರಿಯಲ್ಲಿಯೇ ಇದ್ದ.

ಅವಶೇಷಗಳಡಿ ಹಲವರು ಬದುಕಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಈತನನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಈತ ಸುರಕ್ಷಿತವಾಗಿ ಬದುಕಿ ಬರಲೆಂದು ಪೋಷಕರು ಹಾಗೂ ಸಂಬಂಧಿಕರು ಕಳೆದ ನಾಲ್ಕು ದಿನಗಳಿಂದ ಸ್ಥಳದಲ್ಲಿಯೇ ಅನ್ನ ನೀರು ಬಿಟ್ಟು ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದರು.

ಅನೇಕರು ಈಗಲೂ ತಮ್ಮವರು ಸುರಕ್ಷಿತವಾಗಿ ಬದುಕಿ ಬರಲೆಂದುಎದುರು ನೋಡುತ್ತಿದ್ದಾರೆ.ಕಟ್ಟಡದೊಳಗೆ ಇನ್ನೂ ಹಲವರು ಸಿಲುಕಿರುವ ಶಂಕೆ ಇದೆ. ಸ್ಥಳದಲ್ಲಿ ದುರ್ವಾಸನೆ ಬರಲಾರಂಭಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದೇ ಎಂಬ ಅನುಮಾನ ಕಾಡಲಾರಂಭಿಸಿದೆ.

ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಎಂಟು ವರ್ಷದ ಬಾಲಕಿ ಸೇರಿದಂತೆ ಒಟ್ಟು ಏಳು ಮೃತ ದೇಹಗಳನ್ನು ಗುರುವಾರ ಹೊರತೆಗೆಯಲಾಯಿತ್ತು. ಈವರೆಗೆ 57 ಮಂದಿಯನ್ನು ರಕ್ಷಿಸಲಾಗಿದೆ.

ಉಳಿದವರನ್ನು ಜೀವಂತವಾಗಿ ಹೊರ ತೆಗೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌), ಎಸ್‌ಡಿಆರ್‌ಎಫ್‌ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.