ADVERTISEMENT

ದುಬಾರಿ ಕಾರಿನ ಆಸೆಗೆ ಬಿದ್ದು ₹ 7 ಲಕ್ಷ ಕಳೆದುಕೊಂಡ ಮಂಡ್ಯದ ರೈತ

ಮಂಡ್ಯ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 15:41 IST
Last Updated 18 ಜನವರಿ 2023, 15:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೇಲುಕೋಟೆ (ಮಂಡ್ಯ ಜಿಲ್ಲೆ): ಮಹೀಂದ್ರ ಎಸ್‌ಯುವಿ ಗೆದ್ದಿರುವುದಾಗಿ ನಂಬಿಸಿದ ಸೈಬರ್‌ ವಂಚಕರು ರೈತರೊಬ್ಬರಿಂದ ₹ 7.23 ಲಕ್ಷ ಹಣ ಪಡೆದು ವಂಚಿಸಿದ್ದಾರೆ.

ಹೊಸ ಕಾರ್‌ ಆಸೆಗೆ ಬಿದ್ದ ಕನ್ನಗೋನಹಳ್ಳಿ ಗ್ರಾಮದ ಸಂಜೀವ್‌ಗೌಡ ಹಣ ಕಳೆದುಕೊಂಡವರು. ವಂಚನೆಯಾಗಿರುವುದು ತಿಳಿದ ನಂತರ ಅವರು ಜ.12ರಂದು ಮಂಡ್ಯ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

ಸಂಜೀವ್ ಗೌಡರ ಪತ್ನಿ ಆನ್‌ಲೈನ್‌ ಆ್ಯಪ್‌ಗಳ ಮೂಲಕ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದರು. ಈಚೆಗೆ ರೈತನ ಮನೆಗೆ 1 ಕೂಪನ್‌ ಬಂದಿದೆ. ಅದನ್ನು ತೆರೆದು ನೋಡಿದಾಗ, ಆನ್‌ಲೈನ್‌ ಶಾಪಿಂಗ್‌ ಮಾಡಿರುವ ಕಾರಣ ₹ 30 ಲಕ್ಷದ ಮಹೀಂದ್ರ ಎಸ್‌ಯುವಿ ಗೆದ್ದಿರುವುದಾಗಿ ತಿಳಿಸಿದ್ದಾರೆ. ‘ಕಾರ್‌ ಬೇಕಾ ಅಥವಾ ಹಣ ಬೇಕಾ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಇದನ್ನು ನಂಬಿದ ರೈತ ಹಣ ಬೇಕು ಎಂದು ಕೇಳಿದ್ದಾರೆ. ವಂಚಕರು ₹ 29.60 ಲಕ್ಷದ ನಕಲಿ ಚೆಕ್‌ಗಳನ್ನು ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸಿದ್ದಾರೆ. ಖಾತೆಗೆ ಹಣ ವರ್ಗಾವಣೆಗೂ ಮೊದಲು ಸೇವಾ ಶುಲ್ಕ ಪಾವತಿಸಬೇಕು ಎಂದು ಸೈಬರ್‌ ವಂಚಕರು ಒತ್ತಾಯಿಸಿದ್ದಾರೆ. ಇದನ್ನು ನಂಬಿದ ರೈತ ಮನೆಯಲ್ಲಿದ್ದ ಚಿನ್ನಾಭರಣ ಗಿರಿವಿ ಇಟ್ಟು ಸೆಪ್ಟೆಂಬರ್‌, ಡಿಸೆಂಬರ್‌ ತಿಂಗಳ ನಡುವೆ ಹಂತಹಂತವಾಗಿ ₹ 7.23 ಲಕ್ಷ ಹಣವನ್ನು ವಂಚಕರ ಖಾತೆಗೆ ಹಾಕಿದ್ದಾರೆ.

ವಂಚಕರು ಪದೇಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕಾರಣ ರೈತರನಿಗೆ ಅನುಮಾನ ಬಂದಿದೆ. ಕೆಲವರೊಂದಿಗೆ ಮಾಹಿತಿ ಹಂಚಿಕೊಂಡಾಗ ವಂಚನೆಯಾಗಿರುವ ವಿಷಯ ಗೊತ್ತಾಗಿದೆ. ನಂತರ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಸೈಬರ್‌ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸೈಬರ್‌ ವಂಚಕರ ಕುರಿತು ಜಾಗೃತಿ ಬಿತ್ತಿ ಪತ್ರವನ್ನು ಪೊಲೀಸರು ಜಿಲ್ಲೆಯ ವಿವಿಧೆಡೆ ಅಂಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.