ADVERTISEMENT

ಜನಾಶೀರ್ವಾದ ಯಾತ್ರೆಯಲ್ಲಿ ಬಂದೂಕಿನಿಂದ ಸಿಡಿಮದ್ದು!

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 19:46 IST
Last Updated 18 ಆಗಸ್ಟ್ 2021, 19:46 IST
ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಬಳಿ ಬಂದೂಕಿನಿಂದ ಸಿಡಿಮದ್ದು ಹಾರಿಸಿ ಕೇಂದ್ರ ಸಚಿವರನ್ನು ಸ್ವಾಗತಿಸಲಾಯಿತು.
ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಬಳಿ ಬಂದೂಕಿನಿಂದ ಸಿಡಿಮದ್ದು ಹಾರಿಸಿ ಕೇಂದ್ರ ಸಚಿವರನ್ನು ಸ್ವಾಗತಿಸಲಾಯಿತು.   

ಯಾದಗಿರಿ: ಜನಾಶೀರ್ವಾದ ಯಾತ್ರೆಯಲ್ಲಿ ಬಂದ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಜಿಲ್ಲೆಯ ಗಡಿ ಗ್ರಾಮ ಯರಗೋಳದಲ್ಲಿ ಬುಧವಾರ ಸ್ವಾಗತಿಸುವ ಮೆರವಣಿಗೆಯಲ್ಲಿ ಕೆಲವರು ಪರವಾನಗಿ ಹೊಂದಿರುವ ಬಂದೂಕಿನಿಂದ ಗಾಳಿಯಲ್ಲಿ ‘ಸಿಡಿಮದ್ದು’ ಹಾರಿಸಿದರು.

ಇದೇ ವೇಳೆ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಬಂದೂಕು ಹಿಡಿದು ಫೋಟೋಗೆ ಪೋಸ್‌ ಕೊಟ್ಟಿರುವುದು ವಿಡಿಯೊದಲ್ಲಿ ದಾಖಲಾಗಿದೆ.

‘ಜನಾಶೀರ್ವಾದ ಯಾತ್ರೆ ಸ್ವಾಗತಿಸುವ ಸಮಯದಲ್ಲಿ ಸಿಂಗಲ್‌ ಬ್ಯಾರಲ್‌ ಬಂದೂಕಿನಲ್ಲಿ ಮದ್ದು ತುಂಬಿ ಕೆಲವರು ಹಾರಿಸಿದ್ದಾರೆ. ಆದರೆ, ಅವುಗಳಲ್ಲಿ ಗುಂಡು ಬಳಸಿಲ್ಲ.ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಯರಗೋಳ ಗ್ರಾಮದ ಶರಣಪ್ಪ ಗುಂಡಪ್ಪ ಭೀಮಳ್ಳಿ, ಮೋನಪ್ಪ ದುರ್ಗಪ್ಪ ಮಾನೆಗಾರ, ನಿಂಗಪ್ಪ ಚಂದಪ್ಪ ಹತ್ತಿಕುಣಿ, ದೇವಿಂದ್ರ ಹಣಮಂತ ಎಂಬವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ADVERTISEMENT

ಸಮರ್ಥನೆ: ‘ನಾಡ ಬಂದೂಕಿನಿಂದ ಸಿಡಿಮದ್ದು ಹಾರಿಸಿದ್ದು, ಇದು ಯಾರಿಗೂ ಯಾವುದೇ ಹಾನಿ ಮಾಡಿಲ್ಲ. ಹಿಂದಿನ ಕಾಲದಲ್ಲಿ ಇದನ್ನು ಪಟಾಕಿಯಂತೆ ಸಿಡಿಸುತ್ತಿದ್ದರು’ ಎಂದು ಸಚಿವ ಭಗವಂತ ಖೂಬಾ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ತಮ್ಮ ಭಾಷಣದಲ್ಲಿ ಸಮರ್ಥಿಸಿಕೊಂಡರು.

‘ಕೋವಿಡ್‌ ಕಾರಣ ಆಗಸ್ಟ್‌ 30ರ ವರೆಗೆ ಜಿಲ್ಲೆಯಲ್ಲಿ ಸಭೆ, ಸಮಾರಂಭಗಳಿಗೆ ನಿಷೇಧ ಹೇರಿದ್ದೇವೆ. ಜನಾಶೀರ್ವಾದ ಯಾತ್ರೆಗೆ ಪರವಾನಗಿ ಪಡೆದಿಲ್ಲ. ಕೋವಿಡ್‌ ನಿಯಮ ಉಲ್ಲಂಘನೆಯಾಗಿದ್ದರೆ ತನಿಖೆ ನಡೆಸಿ ಕಾರ್ಯಕ್ರಮ ಆಯೋಜಕರಿಗೆ ನೋಟಿಸ್‌ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಪ್ರತಿಕ್ರಿಯಿಸಿದರು.

ಮತ್ತೆ ಕರ್ಫ್ಯೂ ಉಲ್ಲಂಘನೆ: ರಾಯಚೂರಿನಲ್ಲಿ ಬುಧವಾರ ರಾತ್ರಿ ಜನಾಶೀರ್ವಾದ ಯಾತ್ರೆ ನಡೆಸಿದ ಕೇಂದ್ರ ಸಚಿವ ಖೂಬಾ, ಕರ್ಫ್ಯೂ ಉಲ್ಲಂಘಿಸಿ ರಾತ್ರಿ 9 ಗಂಟೆಯ ನಂತರವೂ ಮೆರವಣಿಗೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.