ADVERTISEMENT

‘ಪ್ರವಾಹ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕೌನ್ಸಲಿಂಗ್‌ ಅವಕಾಶ ಇಲ್ಲ’

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 10:42 IST
Last Updated 24 ಆಗಸ್ಟ್ 2018, 10:42 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್    

ಬೆಂಗಳೂರು: ‘ಕೇರಳ ಹಾಗೂ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿಗೆ ಸಿಲುಕಿ, ಸಿಇಟಿ ಕೌನ್ಸೆಲಿಂಗ್‌ಗೆ ಭಾಗಿಯಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶವಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಶನಿವಾರ ದಿಢೀರ್‌ ಭೇಟಿ ನೀಡಿದ ಸಚಿವರು ಕೊನೆಯ ದಿನದ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ ಪ್ರಕ್ರಿಯೆ ವೀಕ್ಷಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸೆಪ್ಟೆಂಬರ್‌ 30ರೊಳಗೆ ಕಾಲೇಜುಗಳು ಪ್ರಾರಂಭಿಸಬೇಕೆಂಬ ಗಡುವು ಇದೆ. ಈ ವೇಳೆ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ. ಅಲ್ಲದೆ, ಪ್ರವಾಹಕ್ಕೆ ಸಿಲುಕಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂಬ ಯಾವ ಮನವಿಯೂ ವಿದ್ಯಾರ್ಥಿಗಳಿಂದ ಬಂದಿಲ್ಲ. ಒಂದು ವೇಳೆ ಈಗ ಬಂದರೂ ಸರ್ಕಾರ ಏನೂ ಮಾಡಲು ಆಗುವುದಿಲ್ಲ’ ಎಂದರು.

ADVERTISEMENT

‘ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ನಾನು ತಲೆಹಾಕಬಾರದು ಎಂದು ಕೊನೆಯ ದಿನ ಬಂದಿದ್ದೇನೆ. ಇಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಒಟ್ಟು 49 ವೈದ್ಯಕೀಯ ಕಾಲೇಜುಗಳ 6,260 ವೈದ್ಯಕೀಯ ಸೀಟುಗಳಿಗೆ ಕೌನ್ಸೆಲಿಂಗ್‌ ನಡೆದಿದ್ದು, 740 ಸೀಟುಗಳು ಉಳಿದ್ದವು. ಎಲ್ಲಿಯೂ ಮೋಸ ಆಗಿಲ್ಲ. ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಉಳಿದಿರುವ 772 ಸೀಟುಗಳಿಗೆ ಸೆ.15ರೊಳಗೆ ಮಾಪ್‌ಅಪ್‌ ಸುತ್ತಿನ ಕೌನ್ಸೆಲಿಂಗ್‌ ನಡೆಸಲಾಗುತ್ತದೆ’ ಎಂದು ಹೇಳಿದರು.

ವೈದ್ಯರಾದ ಮೇಲೆ ಎಷ್ಟು ದುಡಿಯುತ್ತಾರೆ ಗೊತ್ತಾ?: ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವನ್ನು ಏಕಾಏಕಿ ₹50 ಸಾವಿರಕ್ಕೆ ಹೆಚ್ಚಿಸಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ‘ನರ್ಸರಿಗೆ 50 ಸಾವಿರ ಕೊಟ್ಟು ಮಕ್ಕಳನ್ನು ಸೇರಿಸುತ್ತೀರಿ. ವೈದ್ಯಕೀಯ ಕೋರ್ಸ್‌ಗೆ ಸೇರಿಸಲು ಆಗುವುದಿಲ್ಲವೇ. ಅವರು ವೈದ್ಯರಾದ ಮೇಲೆ ಎಷ್ಟು ಸಂಪಾದಿಸುತ್ತಾರೆ ಅಂತ ಗೊತ್ತ ನಿಮಗೆ. ₹50 ಸಾವಿರ ಕೊಡಲು ಏನೂ ಕಷ್ಟ ಆಗಲ್ಲ’ ಎಂದು ಪ್ರತಿಕ್ರಿಯಿಸಿದರು.

ಸುಪ್ರೀಂಕೋರ್ಟ್‌ ಮೊರೆ: ‘ಮಾನ್ಯತೆ ರದ್ದಾಗಿರುವ ಆಕಾಶ್‌, ಆಕ್ಸ್‌ಫರ್ಡ್‌, ಸಂಭ್ರಮ ಹಾಗೂ ಶ್ರೀದೇವಿ ಕಾಲೇಜುಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಈ ಕಾಲೇಜುಗಳಲ್ಲಿ 600 ಸೀಟುಗಳಿವೆ. ಒಂದು ವೇಳೆ ಆ ಕಾಲೇಜುಗಳಿಗೆ ಅನುಮತಿ ನೀಡಿದರೆ, ಆ ಸೀಟುಗಳಿಗೂ ಕೌನ್ಸೆಲಿಂಗ್‌ ನಡೆಸುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.