ADVERTISEMENT

ಗ್ರಾಮ ಸ್ವರಾಜ್ಯದ ನಿಜ ಉದ್ದೇಶ ಸಾಕಾರವಾಗಲಿ: ಕುಮಾರಸ್ವಾಮಿ

ಬಿಜೆಪಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 11:32 IST
Last Updated 3 ಡಿಸೆಂಬರ್ 2020, 11:32 IST
   

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಆಯೋಜಿಸಲು ಮುಂದಾಗಿದೆ. ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಯಾಗಿರುವ ‘ಗ್ರಾಮ ಸ್ವರಾಜ್ಯ’ದ ನಿಜವಾದ ಉದ್ದೇಶ ಈಡೇರಲಿ ಎಂದು ಆಶಿಸಿದ್ದಾರೆ.

‘ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಬಿಜೆಪಿ ‘ಗ್ರಾಮ ಸ್ವರಾಜ್ಯ’ ಸಮಾವೇಶಗಳನ್ನು ನಡೆಸುತ್ತಿದೆ. ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆಕೊಟ್ಟಿದ್ದು ಸಂತೋಷದಾಯಕ. ಸಂಘಟನೆ ಉದ್ದೇಶದ ಈ ಸಮಾವೇಶಗಳು ಗ್ರಾಮಗಳನ್ನು ವಿಶ್ವಾಸಕ್ಕೆ ಪಡೆಯುಲು, ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಲಿ. ಈ ಮೂಲಕ ಗ್ರಾಮ ಸ್ವರಾಜ್ಯದ ನಿಜ ಉದ್ದೇಶ ಸಾಕಾರವಾಗಲಿ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಬಿಜೆಪಿಯ ಗ್ರಾಮ ಸ್ವರಾಜ್ಯ ಎಂಬುದು ಸಂಘಟನೆ ಉದ್ದೇಶದ ಸಮಾವೇಶವಾದರೂ, ಅವುಗಳನ್ನು ಹಳ್ಳಿಗಳ ಹಂತಕ್ಕೆ ಕೊಂಡೊಯ್ಯಬೇಕು ಎಂದು ನಾನು ಒತ್ತಾಯಿಸುತ್ತೇನೆ. ಆ ಮೂಲಕವಾದರೂ ನಮ್ಮ ಹಳ್ಳಿಗಳ ಜ್ವಲಂತ ಸಮಸ್ಯೆಗಳು ಬಿಜೆಪಿ ಸಚಿವರು, ಶಾಸಕರು ಮತ್ತು ಸರ್ಕಾರದ ಅರಿವಿಗೆ ಬರಲಿ. ಹಾಗಾದರೂ ಹಳ್ಳಿ ಜನರ ಸಮಸ್ಯೆಗಳು ಶಾಶ್ವತವಾಗಿ ನೀಗಲಿ ಎಂದು ಆಶಿಸುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ಮತ್ತೊಂದು ಟ್ವೀಟ್‌ನಲ್ಲಿ, ‘‘ಗ್ರಾಮ ಸ್ವರಾಜ್ಯ' ಸಮಾವೇಶಗಳು ಕೇವಲ ಪಕ್ಷ ಸಂಘಟನೆಗಷ್ಟೇ ಸೀಮಿತವಾದರೆ ಅದು ಸ್ವಾರ್ಥವಾಗುತ್ತದೆ. ಗ್ರಾಮಗಳನ್ನು ಸಶಕ್ತಗೊಳಿಸಲು ಈ ಕಾರ್ಯಕ್ರಮವನ್ನು ಬಿಜೆಪಿ ಬಳಸಿಕೊಂಡಿದ್ದೇ ಆದರೆ, ಗ್ರಾಮ ಸ್ವರಾಜ್ಯದ ಹೆಸರಿಗೆ ಅರ್ಥ ಸಿಗುತ್ತದೆ. ಹಳ್ಳಿ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂಬುದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಲಿ’ ಎಂದು ಸಲಹೆ ನೀಡಿದ್ದಾರೆ.

‘ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳು ನೆರೆ ಪೀಡಿತ ಗ್ರಾಮಗಳನ್ನು ಕೇಂದ್ರೀಕರಿಸುವುದು ಅಗತ್ಯ. ಬಿಜೆಪಿ ನಾಯಕರು ಆ ಗ್ರಾಮಗಳಿಗೆ ಭೇಟಿ ನೀಡಲಿ. ಅಲ್ಲಿನ ಸಮಸ್ಯೆಗಳು, ಮನೆಗಳನ್ನು ಕಳೆದುಕೊಂಡ ನಿರಾಶ್ರಿತರ ಪರದಾಟ, ದುಃಖ ದುಮ್ಮಾನಗಳನ್ನು ಕಣ್ಣಾರೆ ಕಂಡು ಅವರಿಗೆ ಪರಿಹಾರ ಒದಗಿಸಬೇಕೆಂದು ಬಯಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.