ಬೆಂಗಳೂರು: ನಾನು ಸುಮ್ಮನೆ ಕುಳಿತುಕೊಳ್ಳುವ ಶಿವಕುಮಾರ್ ಅಲ್ಲ, ಹೋರಾಟ ಮಾಡುತ್ತೇನೆ. ನನ್ನದೇನಿದ್ದರೂ ನೇರಾ ನೇರ ಹೋರಾಟ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಜೈಲಿಗೆ ಹೋಗಿ ನನ್ನ ಮನೋಸ್ಥೈರ್ಯ ಮತ್ತಷ್ಟು ಗಟ್ಟಿಯಾಗಿದೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ನಗುತ್ತಲೇ ಉತ್ತರಿಸಿದ ಡಿ.ಕೆ.ಶಿವಕುಮಾರ್,
ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಕಾನೂನಿನ ಅಡಿಯಲ್ಲಿ ಏನೇ ಶಿಕ್ಷೆ ಕೊಟ್ಟರೂ ನಾನು ಶಿಕ್ಷೆ ಅನುಭವಿಸಲು ಸಿದ್ಧ. ಜೈಲಿನಲ್ಲಿ ಇದ್ದಷ್ಟು ದಿನ ನನ್ನ ಮನಸ್ಸು ಗಟ್ಟಿಯಾಗಿದೆ. ಯಾವುದೇ ಕಾರಣಕ್ಕೂ ಬಲಹೀನನಾಗುವುದಿಲ್ಲ. ಮತ್ತಷ್ಟು ಬಲಶಾಲಿಯಾಗಿದ್ದೇನೆ.
ಬಿಜೆಪಿಗೆ ಏನಾದರೂ ಹೇಳಲು ಬಯಸುವಿರಾ ಎಂದು ಕೇಳಿದ ಪ್ರಶ್ನೆಗೆ ಅದೆಲ್ಲವನ್ನೂ ಈಗ ಹೇಳಲು ಸಾಧ್ಯವಿಲ್ಲ. ಯಾರಾರೋ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ನಾನು ಬಲ್ಲೆ. ಆದರೆ, ನಾನು ಯಾವುದೇ ರೀತಿಯಲ್ಲಿಯೂ ಮೋಸ ಮಾಡಿಲ್ಲ. ಆದಾಯ ತೆರಿಗೆಯ ಪ್ರಕರಣದಲ್ಲಾಗಲೀ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆಯ ಪ್ರಕರಣದಲ್ಲಾಗಲೀ ನನ್ನ ಮೇಲೆ ಏನೆಲ್ಲಾ ಪ್ರಕರಣಗಳನ್ನು ಹೂಡಲಿ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದರು.
ನನ್ನ ವಿಲ್ ಪವರ್ ಹಿಂದಿಗಿಂತ ಮತ್ತಷ್ಟು ಜಾಸ್ತಿಯಾಗಿದೆ. ವೀಕ್ ಆಗುವ ಪ್ರಶ್ನೆಯೇ ಇಲ್ಲ. ನನ್ನ ವಕೀಲರ ತಂಡದಲ್ಲಿರುವ ಅಭಿಷೇಕ್ ಸಿಂಗ್ವಿ, ಸಿದ್ದಾರ್ಥ ಲೂತರ್, ಮುಕುಲ್ ರೋಹಟಗಿ, ಶಂಕರ್, ಶಶಿಕಿರಣ್ ಶೆಟ್ಟಿ, ಶೇಷಾಚಲ ಶ್ಯಾಂಸುಂದರ್ ಎಲ್ಲರೂ ನನ್ನ ಪರವಾಗಿ ವಾದ ಮಾಡಿದ್ದಾರೆ. ಮುಂದೆ ನನ್ನ ಪಕ್ಷದ ಅಧ್ಯಕ್ಷರು ಹೇಳಿದಂತೆ ಪಕ್ಷದ ಕೆಲಸದಲ್ಲಿ ತೊಡಗುತ್ತೇನೆ. ಅವರ ಆದೇಶದಂತೆ ಕೆಲಸ ಮಾಡುತ್ತೇನೆ.
ಸಂಚಾರದ ಅಡಚಣೆಗಾಗಿ ಸಾರ್ವಜನಿಕರಲ್ಲಿ ಕ್ಷಮೆ ಕೋರುತ್ತೇನೆ
ನನ್ನ ಬಂಧನವಾದಾಗ, ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ಕಚೇರಿಗೆ ಬರುವಾಗ ಕೆಲ ಸಮಯ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಎಷ್ಟೋ ಜನರಿಗೆ ತೊಂದರೆಗಳಾಗಿದೆ. ಇದಕ್ಕಾಗಿ ನಾನು ಎಲ್ಲರಲ್ಲೂ ಕ್ಷಮೆ ಕೋರುತ್ತೇನೆ. ಇದು ಪ್ರಜಾಪ್ರಭುತ್ವದಲ್ಲಿ ಜನರು ಹೊರಗೆ ಬಂದಾಗ ಇವೆಲ್ಲವನ್ನೂ ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ನಾನು ಎಲ್ಲರಲ್ಲೂ ಕ್ಷಮೆ ಕೋರುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.