ADVERTISEMENT

ನನ್ನ ಕುಟುಂಬಕ್ಕೆ ಕೈಹಾಕಿದರು, ನಾನು ಮನೆಯವರಿಂದ ದೂರಾದೆ: ವಕೀಲ ಜಗದೀಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2021, 11:59 IST
Last Updated 31 ಮಾರ್ಚ್ 2021, 11:59 IST
ವಕೀಲ ಜಗದೀಶ್ ಫೇಸ್ಬುಕ್ ಲೈವ್ ವಿಡಿಯೊ ಸ್ಕ್ರೀನ್ ಶಾಟ್ 
ವಕೀಲ ಜಗದೀಶ್ ಫೇಸ್ಬುಕ್ ಲೈವ್ ವಿಡಿಯೊ ಸ್ಕ್ರೀನ್ ಶಾಟ್    

ಬೆಂಗಳೂರು: ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಪರ ವಾದಿಸುತ್ತಿರುವ ವಕೀಲ ಕೆ.ಎನ್‌.ಜಗದೀಶ್‌ಕುಮಾರ್‌ ಅವರು ‘ತಮಗೆ ಬಿಜೆಪಿ ಮುಖಂಡ ಮತ್ತು ಪೊಲೀಸರು ಕೊಟ್ಟ ಕಾಟದಿಂದ ಕುಟುಂಬದಿಂದ ದೂರಾದೆ’ ಎಂದು ಆರೋಪಿಸಿದ್ದಾರೆ.

‘ಕೊಡಿಗೇಹಳ್ಳಿ ಲೋಕ ಕಲ್ಯಾಣ ಟ್ರಸ್ಟ್ ಜಮೀನು ಪರಭಾರೆ ಮಾಡಿದ್ದ ಆರ್. ಅಶೋಕ ಭಾಮೈದರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ನನ್ನ ಕುಟುಂಬಕ್ಕೆ ಕೈಹಾಕಿದರು. 13 ಕೇಸ್ ಹಾಕಿದರು. ಅವರು ಕೊಟ್ಟ ಹಿಂಸೆಯಿಂದ ನನ್ನ ಹೆಂಡತಿ ದೂರಾದಳು. ನನ್ನ ಬೆಳೆದ ಮಗ, ತಮ್ಮಂದಿರು ದೂರಾದರು. ನನ್ನ ತಾಯಿ ಕ್ಯಾನ್ಸರ್ ಬಂದು ಮೃತಪಟ್ಟರು. ಒಂಟಿಯಾಗಿ ಈ ಷಡ್ಯಂತ್ರಗಳ ವಿರುದ್ಧ ಹೋರಾಟ ಮಾಡಿದ್ದೇನೆ’ ಎಂದಿದ್ದಾರೆ.

‘ನನಗೆ ವಿಷ ಹಾಕಿದ್ದರು. ಮಾತು ನಿಂತುಹೋಗಿತ್ತು. ಹಿಮಾಲಯಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದೇನೆ.’ ಎಂದು ವಕೀಲ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಒಬ್ಬ ಸಂತ್ರಸ್ತ ಯುವತಿ ಪರ ನಿಲ್ಲುವವನು ರೌಡಿ ಶೀಟರ್ ಎನ್ನುವುದಾದರೆ ನಾನು ರೆಡಿ. ಬಿಟ್ಟು ಹೋದ ಮಗ, ಕಳೆದು ಹೋದ ದಿನಗಳ ಬಗ್ಗೆ ಚಿಂತೆ ಇಲ್ಲ. ನಾನು ಹಾಳಾಗುವುದಕ್ಕೆ ರೆಡಿ ಆಗಿದ್ದೇನೆ. ನೀವು ಸಿದ್ದರಿದ್ದೀರಾ?’ಎಂದು ಸವಾಲು ಹಾಕಿದ್ದಾರೆ.

‘ಎಲ್ಲ ಪ್ರಕರಣಗಳನ್ನು ನಾನೇ ನಿಂತು ವಾದ ಮಾಡಿ ಖುಲಾಸೆ ಮಾಡಿಕೊಂಡಿದ್ದೇನೆ. ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರ ರೂವಾರಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಅಶ್ವತ್ಥ್ ನಾರಾಯಣಗೌಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು, ಇದೇ ಕಾರಣಕ್ಕೆ ಬಿಜೆಪಿ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ, ಆರ್. ಅಶೋಕ್ ಅವರನ್ನು ಕೇಳಿ, ಇಲ್ಲಿದ್ದ ಮಾಜಿ ಡಿಸಿಪಿಯನ್ನು ಕೇಳಿ, ಇನ್ಸ್‌ಪೆಕ್ಟರ್ ಪುನೀತ್‌ನನ್ನು ಕೇಳಿ. ನ್ಯಾಯಾಲಯವೇ ನನ್ನನ್ನು ಖುಲಾಸೆಗೊಳಿಸಿದೆ. ಆದರೆ, ನೀವು ನಾನು ರೌಡಿ ಶೀಟರ್ ಎಂದು ಟ್ವೀಟ್ ಮಾಡುತ್ತಿದ್ದೀರಾ? ಹಾಗಾದರೆ, ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ? ನಾನು ನಂದಿಯಲ್ಲ, ಜಗದೀಶ. ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ’ ಎಂದು ಸವಾಲು ಹಾಕಿದ್ದಾರೆ.

‘2010ರಲ್ಲಿ ಆಸ್ತಿ ವಿವರಣೆ ಸಲ್ಲಿಸದ 51 ಐಪಿಎಸ್ ಅಧಿಕಾರಿಗಳು ಬ್ಲಾಕ್ ಲಿಸ್ಟ್‌ಗೆ ಸೇರಿದ್ದರು. ಅದಕ್ಕೆ ನಾನೇ ಕಾರಣ’ ಎಂದು ಜಗದೀಶ್ ಕೆ ಎನ್ ಮಹದೇವ್ ಹೇಳಿದ್ದಾರೆ. ‘ಪಾವಿತ್ರ್ಯತೆ ಬಗ್ಗೆ ಮಾತಾಡ್ತೀರಲ್ಲ, ನಾನು ನಿಮ್ಮ ಪಾವಿತ್ರ್ಯತೆಯನ್ನು ಹೊರಗಿಡಲೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.