ADVERTISEMENT

ಜಮೀರ್ ಅಹಮದ್: ಐಎಂಎ ಪ್ರಕಣದಲ್ಲಿ ಇಡಿ ಸಮನ್ಸ್‌ ‍ಪಡೆದ ಮೊದಲ ರಾಜಕಾರಿಣಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 9:33 IST
Last Updated 29 ಜೂನ್ 2019, 9:33 IST
   

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಮನ್ಸ್‌ ಜಾರಿ ಮಾಡಿದೆ. ದೇಶದ ಗಮನ ಸೆಳೆದ ಈ ಹಗರಣದಲ್ಲಿ ಹಲವು ರಾಜಕಾರಿಣಿಗಳು ಮತ್ತು ಅಧಿಕಾರಿಗಳ ಹೆಸರು ಕೇಳಿ ಬರುತ್ತಿದೆ. ಜಾರಿ ನಿರ್ದೇಶನಾಲಯದ ಸಮನ್ಸ್‌ ಪಡೆದ ಮೊದಲ ರಾಜಕಾರಿಣಿ ಜಮೀರ್ ಎನ್ನುವುದು ಗಮನಾರ್ಹ ಅಂಶ.

ಜುಲೈ 5ರಂದು ವಿಚಾರಣೆಗೆ ಹಾಜರಾಗುವಂತೆಸಮನ್ಸ್ ನೀಡಲುಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವೊಂದು ಸಚಿವರ ಮನೆಗೆ ಭೇಟಿ ನೀಡಿತ್ತು. ಜಮೀರ್ ಅವರು ಮನೆಯಲ್ಲಿ ಇರಲಿಲ್ಲ, ಹೀಗಾಗಿ ಅವರ ಕುಟುಂಬದ ಸದಸ್ಯರಿಗೆ ಅಧಿಕಾರಿಗಳ ತಂಡವುಸಮನ್ಸ್‌ ನೀಡಿತು.

ಸಮನ್ಸ್‌ ಕುರಿತು ಪ್ರತಿಕ್ರಿಯಿಸಿದ ಜಮೀರ್,‘ಐಎಂಎ ಸ್ಥಾಪಕ ಮೊಹಮದ್ ಮನ್ಸೂರ್ ಖಾನ್ ಅವರೊಡನೆ ನಡೆಸಿದ ಹಣಕಾಸು ವಹಿವಾಟಿಗೆ ಸಂಬಂಧಿಸಿದ ವಿವರಣೆಗಳನ್ನುಜಾರಿ ನಿರ್ದೇಶನಾಲಯವು ಕೇಳಿದೆ. ರಿಚ್‌ಮಂಡ್ ಸರ್ಕಲ್‌ನಸರ್ಪಂಟೈನ್ ರಸ್ತೆಯಲ್ಲಿರುವ ಆಸ್ತಿಯೊಂದನ್ನು 2017–18ರಲ್ಲಿ ನಾನು ಮನ್ಸೂರ್ ಅವರಿಗೆ ಮಾರಾಟ ಮಾಡಿದ್ದೆ. ಈ ವಹಿವಾಟಿಗೆ ಸಂಬಂಧಿಸಿದಂತೆ ಎಲ್ಲ ತೆರಿಗೆಗಳನ್ನೂ ನಾನು ಪಾವತಿಸಿದ್ದೇನೆ’ ಎಂದು ಜಮೀರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ನೊಟೀಸ್ ನೀಡುವುದರಲ್ಲಿ ತಪ್ಪೇನಿದೆ? ಅಧಿಕಾರಿಗಳು ಕೇಳಿರುವ ವಿವರ ಮತ್ತು ದಾಖಲೆಗಳನ್ನು ನಾನು ಒದಗಿಸುತ್ತೇನೆ. ತನಿಖೆಗೆ ನಾನು ಸಂಪೂರ್ಣ ಸಹಕರಿಸುತ್ತೇನೆ. ಯಾವುದೇ ಸಂಸ್ಥೆ ತನಿಖೆ ನಡೆಸಿದರೂ ನಾನು ಸ್ವಾಗತಿಸುತ್ತೇನೆ. ಮುಖ್ಯವಾಗಿ ಹೂಡಿಕೆ ಮಾಡಿರುವವರಿಗೆ ಹಣ ವಾಪಸ್ ಸಿಕ್ಕರೆ ಸಾಕು’ ಎಂದು ಜಮೀರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಐಎಂಎ ಅಕ್ರಮದ ಬಗ್ಗೆ ನನಗೆ ಮೊದಲೇ ಗೊತ್ತಿದ್ದರೆಆಸ್ತಿವಹಿವಾಟಿನ ಬಗ್ಗೆ ನಾನು ಚುನಾವಣಾ ಆಯೋಗಕ್ಕೆ ಸಲ್ಲಿಸಿದಪ್ರಮಾಣ ಪತ್ರದಲ್ಲಿ (ಅಫಿಡವಿಟ್) ಉಲ್ಲೇಖಿಸುತ್ತಲೇ ಇರಲಿಲ್ಲ’ ಎಂದು ಜಮೀರ್ ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.