ADVERTISEMENT

Kannada Teacher: ಹೊರನಾಡು ಕನ್ನಡಿಗನ ಭಾಷಾ ಪ್ರೇಮ

ಅಕ್ಕಲಕೋಟ ಶಿಕ್ಷಕರ ನೆರವು; 309 ಮಂದಿ ಕೆ–ಸೆಟ್‌ ಪಾಸ್‌

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 0:30 IST
Last Updated 16 ಡಿಸೆಂಬರ್ 2025, 0:30 IST
<div class="paragraphs"><p>ದಾನಯ್ಯ</p></div>

ದಾನಯ್ಯ

   

ಕಲಬುರಗಿ: ಮಹಾರಾಷ್ಟ್ರದ ಅಕ್ಕಲಕೋಟದ ಶಿಕ್ಷಕ ದಾನಯ್ಯ ಕೌಟಗಿಮಠ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪಾಠ ಮಾಡಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ನೆರವಾಗಿದ್ದಾರೆ. ಈ ಮೂಲಕ ‘ಕನ್ನಡ ಭಾಷಾ ಪ್ರೇಮ’ ಮೆರೆಯುತ್ತಿದ್ದಾರೆ.

ಸೊಲ್ಲಾಪುರ ಜಿಲ್ಲೆಯ ಅಕ್ಕಲ ಕೋಟದ ಕೆ.ಎಲ್.ಇ. ಮಂಗರುಳೆ ಹೈಸ್ಕೂಲ್‌ನಲ್ಲಿ ದಾನಯ್ಯ ಶಿಕ್ಷಕ
ರಾಗಿದ್ದಾರೆ. ಅವರ ಮಾರ್ಗದರ್ಶನ ಪಡೆದ 309 ವಿದ್ಯಾರ್ಥಿಗಳು, ಇದೇ ನವೆಂಬರ್ 21ರಂದು ನಡೆದ ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಕೆ–ಸೆಟ್‌)–2025ರಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

ಸ್ವತಃ ದಾನಯ್ಯ ಕೌಟಗಿಮಠ, ದೇಶದ ವಿವಿಧ ರಾಜ್ಯಗಳಲ್ಲಿನ ಸೆಟ್, ನೆಟ್, ಟಿಇಟಿ ಮತ್ತಿತರ ಅರ್ಹತಾ ಪರೀಕ್ಷೆ ಗಳಲ್ಲಿ ಒಟ್ಟು 79 ಬಾರಿ ಉತ್ತೀರ್ಣ ರಾಗಿದ್ದಾರೆ. ಸಾಮಾನ್ಯ ವಿದ್ಯಾರ್ಥಿ ಕೂಡ ಕೆ–ಸೆಟ್‌ ಉತ್ತೀರ್ಣನಾಗಬೇಕು ಎಂದು ಸಂಕಲ್ಪ ಮಾಡಿ, ಯೂಟ್ಯೂಬ್ ಚಾನೆಲ್‌ ಮೂಲಕ ಈ ಬಾರಿಯಕೆ–ಸೆಟ್‌ ಪರೀಕ್ಷಾಂಕ್ಷಿಗಳಿಗೆ ಮಾರ್ಗ ದರ್ಶನ ನೀಡಿದ್ದರು.‌

ಬಡ ಕುಟುಂಬಗಳ ವಿದ್ಯಾರ್ಥಿಗಳು, ಕಾರ್ಮಿಕರು, ಗುಮಾಸ್ತರು, ಭದ್ರತಾ ಸಿಬ್ಬಂದಿ, ಪೆಟ್ರೋಲ್ ಬಂಕ್ ನೌಕರರು, ಮಹಿಳೆಯರು, ವಿಶೇಷ ಚೇತನರು ಸೇರಿದಂತೆ ಹಲವರು ಹೀಗೆ ಮಾರ್ಗದರ್ಶನ ಪಡೆದು ಕೆ–ಸೆಟ್‌ ಉತ್ತಿರ್ಣರಾಗಿದ್ದಾರೆ.

‘ನಾನು ಮೈಸೂರು ಸ್ಯಾಂಡಲ್ ಫ್ಯಾಕ್ಟರಿಯಲ್ಲಿ ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದೇನೆ. ದಾನಯ್ಯ ಕೌಟಗಿಮಠ ಸರ್‌ ವಿಡಿಯೊಗಳನ್ನು ನೋಡಿ ಪ್ರೇರಣೆ ಸಿಕ್ಕಿತು. ಹಠಕ್ಕೆ ಬಿದ್ದು ಓದಿ ಕೆ–ಸೆಟ್ ಪಾಸ್ ಆಗಿದ್ದೇನೆ’ ಎಂದು ಮೈಸೂರಿನ ರೇವಣ ಸಿದ್ದಪ್ಪ ‘‌ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಮಹಾರಾಷ್ಟ್ರದ ಅಕ್ಕಲಕೋಟ, ಸೊಲ್ಲಾಪುರ, ಸಾಂಗ್ಲಿ ನಗರಗಳಲ್ಲಿ ಮಾತ್ರವಲ್ಲದೇ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಕರ್ನಾಟಕದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಇವರ ಉಪನ್ಯಾಸಗಳ ಲಾಭ ಪಡೆದುಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಪ್ರಸ್ತುತ 52 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದಾನಯ್ಯ ಅವರ ಉಪನ್ಯಾಸಗಳನ್ನು ಅನುಸರಿಸುತ್ತಿದ್ದಾರೆ.

‘ಭಾಷಾ ಪ್ರೇಮವೇ ಕಾರಣ’

‘ನಾನು ಗಡಿನಾಡು ಕನ್ನಡಿಗ. ಹೊರನಾಡಿನಲ್ಲಿ ಉದ್ಯೋಗ ಸಿಕ್ಕಿತು. ಕನ್ನಡ ಭಾಷಾ ಶಿಕ್ಷಕನಾಗಿದ್ದು, ಮಾತೃಭಾಷೆ ಕೂಡಾ ಕನ್ನಡ. ಕನ್ನಡ ಮಾಧ್ಯಮದಲ್ಲಿಯೇ ನಾನು ಓದಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಲಿ ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ. ಕನ್ನಡ ಭಾಷಾ ಪ್ರೇಮವೇ ಅದಕ್ಕೆ ಕಾರಣ’ ಎಂದು ದಾನಯ್ಯ ಕೌಟಗಿಮಠ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೌಟಗಿಮಠ ಸರ್‌ ವಿಡಿಯೊಗಳನ್ನು ನಾನು ನಿತ್ಯ ವೀಕ್ಷಿಸಿ, ನೋಟ್ಸ್ ಮಾಡಿಕೊಂಡೆ. ಅದರ ಫಲವಾಗಿ ನಾನು ಕೆ–ಸೆಟ್ ಉತ್ತೀರ್ಣನಾಗಿದ್ದೇನೆ
ಅರುಣ, ಪೆಟ್ರೋಲ್ ಪಂಪ್ ನೌಕರ, ಬೆಂಗಳೂರು
ದಾನಯ್ಯ ಸರ್‌ ವಿಡಿಯೊಗಳನ್ನು ನಿಯಮಿತವಾಗಿ ನೋಡುತ್ತಿದ್ದೆ. ಆತ್ಮವಿಶ್ವಾಸ ಹೆಚ್ಚಾಯಿತು. ಮೂರನೇ ಪ್ರಯತ್ನದಲ್ಲಿಯೇ ಕೆ–ಸೆಟ್‌ನಲ್ಲಿ ಉತ್ತೀರ್ಣಳಾಗಿದ್ದೇನೆ
ಜ್ಯೋತಿ, ವಿಶೇಷಚೇತನ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.