
ಸುವರ್ಣ ವಿಧಾನಸೌಧ (ಬೆಳಗಾವಿ): ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಮೂರು ಪ್ರವರ್ಗಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ನೀಡುವ ಸರ್ಕಾರದ ಆದೇಶಕ್ಕೆ ಕಾನೂನು ಬಲ ನೀಡಲು ರೂಪಿಸಿದ ಮಸೂದೆಗೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು.
‘ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಮಸೂದೆ–2025’ಯನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಪರ್ಯಾಲೋಚನೆಗಾಗಿ ಮಂಡಿಸಿದರು.
ಚರ್ಚೆ ವೇಳೆ ಮಾತನಾಡಿದ ಬಹುತೇಕ ಸದಸ್ಯರು, ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಿರುವ ಒಟ್ಟು ಮೀಸಲಾತಿಯನ್ನು ಶೇ 17ರಿಂದ ಶೇ 18ಕ್ಕೆ ಹೆಚ್ಚಿಸಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿದರು.
ಎಚ್.ಸಿ. ಮಹದೇವಪ್ಪ ಮಾತನಾಡಿ, ‘ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಘೋಷಿಸಲಾಗಿತ್ತು. ಅದರಂತೆ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಒಳಮೀಸಲಾತಿ ನೀಡುವ ಸಂಬಂಧ 2024ರ ಆ. 1ರಂದು ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಯಿತು. ಒಳಮೀಸಲಾತಿಗೆ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಆಯೋಗವು ಐದು ಪ್ರವರ್ಗಗಳ ನಡುವೆ ಮೀಸಲಾತಿ ಹಂಚಿಕೆ ಮಾಡಿ ವರದಿ ನೀಡಿತ್ತು’ ಎಂದರು.
‘ವರದಿ ಆಧರಿಸಿ 101 ಉಪಜಾತಿಗಳನ್ನು ಮೂರು ಪ್ರವರ್ಗಗಳನ್ನಾಗಿ ವಿಂಗಡಿಸಿ ‘ಪ್ರವರ್ಗ ಎ’ನಲ್ಲಿ 16 ಜಾತಿಗಳನ್ನು ಸೇರಿಸಿ ಶೇ 6, ‘ಪ್ರವರ್ಗ ಬಿ’ನಲ್ಲಿ 19 ಜಾತಿಗಳನ್ನು ಸೇರಿಸಿ ಶೇ 6 ಹಾಗೂ ‘ಪ್ರವರ್ಗ ಸಿ’ನಲ್ಲಿ 63 ಜಾತಿಗಳನ್ನು ಸೇರಿಸಿ ಶೇ 5 ಮೀಸಲಾತಿ ಹಂಚಿಕೆ ಮಾಡಲಾಗಿದೆ. ಈ ಮಸೂದೆಯಿಂದ ಯಾರಿಗಾದರೂ ಅನ್ಯಾಯವಾಗಿದ್ದರೆ, ಆ ಬಗ್ಗೆ ಮನವಿ ಸಲ್ಲಿಸಿದರೆ ಸರಿಪಡಿಸುವ ಕೆಲಸ ಮಾಡುತ್ತೇವೆ’ ಎಂದರು.
ಬಿಜೆಪಿಯ ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಡು, ಕೃಷ್ಣಾ ನಾಯ್ಕದ್, ಜೆಡಿಎಸ್ನ ಎಚ್.ಡಿ. ರೇವಣ್ಣ, ಶಾರದಾ ಪೂರ್ಯಾನಾಯ್ಕ್, ಕಾಂಗ್ರೆಸ್ನ ಬಸವರಾಜ ರಾಯರಡ್ಡಿ, ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಎಲ್ಲರೂ, ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 18ಕ್ಕೆ ಹೆಚ್ಚಿಸಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಮಸೂದೆಯ ಮೇಲೆ ಚರ್ಚೆ ನಡೆಸಲು ಇನ್ನಷ್ಟು ಶಾಸಕರು ಕಾಯುತ್ತಿದ್ದರು ಮತ್ತು ಮೀಸಲಾತಿ ಹೆಚ್ಚಳದ ಕುರಿತು ಸಚಿವರ ಉತ್ತರದ ನಿರೀಕ್ಷೆಯಲ್ಲಿದ್ದರು. ಅಷ್ಟರೊಳಗೆ ಸಭಾಧ್ಯಕ್ಷ ಯು.ಟಿ. ಖಾದರ್, ಮಸೂದೆಯ ಪರ್ಯಾಲೋಚನೆಗಾಗಿ ರೂಲಿಂಗ್ ನೀಡಿದರು. ಅದರಿಂದ ಆಕ್ರೋಶಗೊಂಡ ಜೆಡಿಎಸ್ನ ಶಾರದಾ ಪೂರ್ಯಾನಾಯಕ್, ನೇಮಿರಾಜ್ ನಾಯಕ್ ಸೇರಿ ಹಲವರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಬಂದು ಪ್ರತಿಭಟಿಸಿದರು. ಕಾಂಗ್ರೆಸ್ನ ಕೆ.ಆರ್. ಕೃಷ್ಣಮೂರ್ತಿ ಮಸೂದೆಯನ್ನು ಧ್ವನಿಮತಕ್ಕೆ ಹಾಕಿದಾಗ, ‘ನನ್ನ ಒಪ್ಪಿಗೆ ಇಲ್ಲ’ ಎಂದು ಕೂಗಿದರು.
‘ಮೀಸಲಾತಿ ಪ್ರಮಾಣ ಶೇ 75 ಆಗಬೇಕು’
ಮೀಸಲಾತಿ ಪ್ರಮಾಣವನ್ನು ಶೇ 75ರಷ್ಟು ಮಾಡಬೇಕು ಎಂಬುದು ನನ್ನ ವೈಯಕ್ತಿಕ ನಿಲುವು. ಬೊಮ್ಮಾಯಿ ಸರ್ಕಾರ ಪರಿಶಿಷ್ಟ ಜಾತಿಗೆ ಶೇ 17 ರಷ್ಟು ಮತ್ತು ಶೇ 7 ರಷ್ಟು ಮೀಸಲಾತಿ ನಿಗದಿ ಮಾಡಿದ್ದನ್ನು ನಾನು ಎಂದೂ ವಿರೋಧ ಮಾಡಿರಲಿಲ್ಲ. ನಾನು ವಿರೋಧ ಮಾಡಿದ್ದೇನೆ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ. ಅದಕ್ಕೆ ದಾಖಲೆ ಇದ್ದರೆ ಕೊಡಲಿ. ಒಳಮೀಸಲಾತಿ ಕುರಿತು ನಾನೂ ಹೋರಾಟ ಮಾಡಿದ್ದೇನೆ.ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಅಲೆಮಾರಿಗಳಿಗೆ ಅನ್ಯಾಯ’
ಈ ಮಸೂದೆಯಲ್ಲಿ ನೇಮಕಾತಿಯಲ್ಲಿ ಮೀಸಲಾತಿ ವಿಚಾರ ಇದೆ. ಆದರೆ ಬಡ್ತಿಯಲ್ಲಿ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸಿಲ್ಲ. ಆ ಬಗ್ಗೆ ಒಂದು ಸಾಲು ಕೂಡ ಇಲ್ಲ. ಎಸ್ಸಿಪಿ ಟಿಎಸ್ಪಿಯಲ್ಲೂ ಒಳಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ, ಬಲಾಢ್ಯರೇ ಅದರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಅಲೆಮಾರಿ ಸಮುದಾಯಕ್ಕೆ ಶೇ 1 ಮೀಸಲಾತಿ ನೀಡುವ ಪ್ರಸ್ತಾಪವಿಲ್ಲ. ಅವರನ್ನು ಕಡೆಗಿಸಲಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಈ ವರ್ಗಕ್ಕೆ ಶೇ 1 ಮೀಸಲಾತಿ ನೀಡಿತ್ತು. 2013 ರಿಂದ 2018 ರ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಮೌನವಾಗಿತ್ತು. ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತರ ರೀತಿಯಲ್ಲಿ ಮೀಸಲಾತಿ ಹಂಚಿಕೆ ಮಾಡಿತ್ತು. ಅದರ ಆಧಾರದಲ್ಲಿ ಈಗಿನ ಸರ್ಕಾರ ತನ್ನ ಪ್ರಯತ್ನ ಮುಂದುವರಿಸಿದೆ
-ಅರವಿಂದ ಬೆಲ್ಲದ, ಉಪನಾಯಕ, ವಿರೋಧ ಪಕ್ಷ
****
‘ಕಾಂಗ್ರೆಸ್ ಹಠಾವೋ ಅಭಿಯಾನ’
ಅಲೆಮಾರಿಗಳನ್ನು ‘ಪ್ರವರ್ಗ ಸಿ’ಯಲ್ಲಿ ಸೇರಿಸಿರುವುದು ಅನ್ಯಾಯ. ಈ ಹಿಂದೆ ಬಿಜೆಪಿ ಸರ್ಕಾರ ನಾಲ್ಕು ಪ್ರವರ್ಗ ರಚಿಸಿ ಶೇ 6, ಶೇ 5.5, ಶೇ 4.5 ಮತ್ತು ಅಲೆಮಾರಿಗಳಿಗೆ ಶೇ 1 ಒಳ ಮೀಸಲು ನಿಗದಿಪಡಿಸಿತ್ತು. ನಾಗಮೋಹನ್ ದಾಸ್ ವರದಿಯಲ್ಲೂ ಅದೇ ಅಂಶಗಳಿದ್ದವು. ಆದರೆ, ಈಗ ‘ಪ್ರವರ್ಗ ಸಿ’ಯಲ್ಲಿ ಬಂಜಾರ, ಕೊರಚ, ಕೊರಮ, ಬೋವಿ ಸಮುದಾಯಗಳ ಜೊತೆಗೆ ಅಲೆಮಾರಿ, ಅರೆ ಅಲೆಮಾರಿ ಜಾತಿಗಳನ್ನೂ ಸೇರಿಸಲಾಗಿದೆ. ಅಲೆಮಾರಿಗಳಿಗೆ ಹೆಚ್ಚುವರಿಯಾಗಿ ಶೇ 1 ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆ ವೇಳೆಗೆ ‘ಕಾಂಗ್ರೆಸ್ ಹಠಾವೊ-ತಾಂಡಾ ಬಚಾವೊ’ ಅಭಿಯಾನ ಆರಂಭವಾಗಲಿದೆ.
-ಚಂದ್ರು ಲಮಾಣಿ, ಬಿಜೆಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.