
ಬೆಂಗಳೂರು: ಸತತ ಎರಡನೇ ದಿನವೂ ವಿರೋಧ ಪಕ್ಷಗಳ ಸದಸ್ಯರ ಧರಣಿಯೊಂದಿಗೆ ಆರಂಭವಾದ ವಿಧಾನ ಪರಿಷತ್ತಿನ ಗುರುವಾರದ ಕಲಾಪವು, ಯಾವುದೇ ಚರ್ಚೆ ಇಲ್ಲದೆ ಕೊನೆಯಾಯಿತು. ಈ ಮಧ್ಯೆ, ಕಲಾಪದ ವೇಳೆ ಅಸಂಸದೀಯ ಪದಗಳನ್ನು ಬಳಸಿದ್ದಕ್ಕೆ ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಅವರು ವಿಷಾದ ವ್ಯಕ್ತಪಡಿಸಿದರು.
ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಎದುರು ಧರಣಿಗೆ ಮುಂದಾದರು. ಇದರಿಂದ ಅಸಮಾಧಾನಗೊಂದ ಸಭಾಪತಿ ಬಸವರಾಜ ಹೊರಟ್ಟಿ, ‘ಯಾತಕ್ಕಾಗಿ ಇಲ್ಲಿ ಬಂದು ನಿಂತಿದ್ದೀರಿ’ ಎಂದು ಕಟುವಾಗಿ ಪ್ರಶ್ನಿಸಿದರು.
ವಿರೋಧ ಪಕ್ಷಗಳ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಇದು ವಂದನಾ ನಿರ್ಣಯವೋ ಅಥವಾ ನಿಂದನಾ ನಿರ್ಣಯವೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಸತತ ಮೂರನೇ ದಿನವೂ ತಕರಾರು ಎತ್ತಿದರು.
ಆಗ ಹೊರಟ್ಟಿ ಅವರು ಸಿಟ್ಟಿನಿಂದ, ‘ಕಲಾಪ ನಡೆಯಬಾರದಾ? ಈಗಾಗಲೇ ಇತ್ಯರ್ಥವಾಗಿರುವುದನ್ನು ಮತ್ತೇಕೆ ಕೆದಕುತ್ತೀರಿ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭಾಪತಿ ಪೀಠದ ಎದುರು ನಿಂತಿದ್ದ ವಿರೋಧ ಪಕ್ಷಗಳ ಸದಸ್ಯರು ಸರ್ಕಾರಕ್ಕೆ ಧಿಕ್ಕಾರ ಕೂಗಲಾರಂಭಿಸಿದರು. ಹೊರಟ್ಟಿ ಅವರು, ‘ಪೀಠದ ಎದುರು ನಿಂತಿದ್ದಾಗ ಮಾತನಾಡಬಾರದು. ಸದನ ನಡೆಯುವುದು ನಿಮಗೆ ಬೇಕಾಗಿಲ್ಲ ಎಂದು ಕಾಣುತ್ತದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಡಿ.ಎಸ್.ಅರುಣ್, ‘ಇದೇ 23ರಂದು ಸದನದಲ್ಲಿ ಮಾತನಾಡುವಾಗ ಬಿ.ಕೆ.ಹರಿಪ್ರಸಾದ್ ಅಸಂಸದೀಯ ಪದಗಳನ್ನು ಬಳಸಿದ್ದಾರೆ. ರಾಜ್ಯಪಾಲರಿಗೆ ಕೈತೋರಿಸಿ ಬೆದರಿಕೆ ಹಾಕಿದ್ದಾರೆ. ಸದನ ನಡೆಯದಿರಲು ಅವರೇ ಕಾರಣ’ ಎಂದರು. ಹರಿಪ್ರಸಾದ್ ಅವರು ತಾವು ಕುಳಿತಲ್ಲಿಂದಲೇ ಅಸಂಸದೀಯ ಪದ ಬಳಸಿ ಪ್ರತಿಕ್ರಿಯಿಸಿದರು. ಸಿ.ಟಿ.ರವಿ ಅವರು ಹರಿಪ್ರಸಾದ್ ಅವರ ಆ ಮಾತನ್ನು ಉಲ್ಲೇಖಿಸಿ, ಆಕ್ಷೇಪ ಎತ್ತಿದರು. ವಿರೋಧ ಪಕ್ಷಗಳ ಸದಸ್ಯರೆಲ್ಲರೂ ಹರಿಪ್ರಸಾದ್ ಅವರಿಗೆ ಧಿಕ್ಕಾರ ಕೂಗಲಾರಂಭಿಸಿದರು. ಹೊರಟ್ಟಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿದರು.
ನಂತರ ವಿರೋಧ ಪಕ್ಷಗಳ ಸದಸ್ಯರೆಲ್ಲರೂ ಒಟ್ಟುಗೂಡಿ ಸಭಾಪತಿ ಹೊರಟ್ಟಿ ಅವರ ಕೊಠಡಿಗೆ ಹೋಗಿ ಹರಿಪ್ರಸಾದ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಹರಿಪ್ರಸಾದ್ ಅವರನ್ನು ಕರೆಯಿಸಿದ ಹೊರಟ್ಟಿ ಅವರು ಸುಮಾರು ಎರಡು ತಾಸು ಮಾತುಕತೆ ನಡೆಸಿದರು.
ಮಧ್ಯಾಹ್ನ 2ರ ಹೊತ್ತಿಗೆ ಕಲಾಪ ಆರಂಭವಾದಾಗ ಹರಿಪ್ರಸಾದ್, ‘ನನ್ನ ಮಾತಿನಿಂದ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಹೇಳಿದರು. 23ರ ಶುಕ್ರವಾರ ಮತ್ತು ಗುರುವಾರದ ಕಲಾಪದಲ್ಲಿ ಅವರು ಆಡಿದ್ದ ಮಾತುಗಳು ಅಸಂಸದೀಯವಾಗಿದ್ದು, ಅವುಗಳನ್ನು ಕಡತದಿಂದ ತೆಗೆದುಹಾಕಲು ಹೊರಟ್ಟಿ ಅವರು ಆದೇಶಿಸಿದರು. ಇದಕ್ಕೆ ತೃಪ್ತರಾಗದ ವಿರೋಧ ಪಕ್ಷಗಳ ಸದಸ್ಯರು ಹರಿಪ್ರಸಾದ್ ಅವರ ಅಮಾನತಿಗೆ ಒತ್ತಾಯಿಸಿ ಧಿಕ್ಕಾರ ಕೂಗಿದರು. ಸಭಾಪತಿ ಅವರು ತಕ್ಷಣವೇ ಕಲಾಪವನ್ನು ದಿನದಮಟ್ಟಿಗೆ ಮುಂದೂಡಿದರು.
ವಿರೋಧ ಪಕ್ಷಗಳ ಸದಸ್ಯರ ನಡೆಯನ್ನು ನೋಡಿದರೆ ಕಲಾಪ ನಡೆಯುವುದು ಬೇಕಿಲ್ಲ ಎನಿಸುತ್ತದೆ. ನಡೆಯಬಾರದು ಎಂದಿದ್ದರೆ ಅದನ್ನು ಹೇಳಿಬಿಡಿಬಸವರಾಜ ಹೊರಟ್ಟಿ ವಿಧಾನ ಪರಿಷತ್ತಿನ ಸಭಾಪತಿ
ವಿರೋಧ ಪಕ್ಷಗಳ ಸದಸ್ಯರು ನಿನ್ನೆಯಿಂದಲೂ ಒಂದಲ್ಲ ಒಂದು ಹೊಸ ಬೇಡಿಕೆ ಇಟ್ಟು ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಇದ್ದಾರೆ.ಸಲೀಂ ಅಹಮದ್ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕ
ರಾಜ್ಯಪಾಲರ ಭಾಷಣವನ್ನು ಸ್ವಾಗತಿಸುತ್ತೇವೆ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದೇವೆ. ಈಗ ಮತ್ತೆ ಅದೇ ಪ್ರಶ್ನೆ ಎತ್ತುತ್ತಿದ್ದು ಕಲಾಪ ನಡೆಯಲು ಬಿಡಬಾರದು ಎಂದು ನಿರ್ಧರಿಸಿದಂತಿದೆಎಸ್.ಎನ್.ಬೋಸರಾಜು ವಿಧಾನ ಪರಿಷತ್ತಿನ ಸಭಾನಾಯಕ
ರಾಜ್ಯಪಾಲರ ಭಾಷಣವನ್ನು ಖಂಡಿಸಿ ಸಭಾನಾಯಕರು ಮಾತನಾಡಿದ್ದು ಅದಕ್ಕೆ ಅವರು ಸದನದಲ್ಲಿ ವಿಷಾದ ವ್ಯಕ್ತಪಡಿಸಲಿ. ಕಲಾಪ ನಡೆಯಲು ಸಹಕಾರ ನೀಡುತ್ತೇವೆಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.