ADVERTISEMENT

Covid-19 Karnataka Update: ನೂರರ ಗಡಿಯೊಳಗೆ ಮರಣ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 16:17 IST
Last Updated 27 ಜೂನ್ 2021, 16:17 IST
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗಾಗಿ ಪ್ರಯಾಣಿಕರ ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗಾಗಿ ಪ್ರಯಾಣಿಕರ ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು   

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಜತೆಗೆ ಕೋವಿಡ್ ಮರಣ ಪ್ರಕರಣಗಳ ಸಂಖ್ಯೆ ಕೂಡ ಇಳಿಮುಖ ಕಂಡಿದೆ. ಹೊಸದಾಗಿ 3,604 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರಲ್ಲಿ 89 ಮಂದಿ ಸಾವಿಗೀಡಾಗಿದ್ದಾರೆ.

ಏಪ್ರಿಲ್ ಮೂರನೇ ವಾರದಲ್ಲಿ ದಿನವೊಂದಕ್ಕೆ ದೃಢಪಡುತ್ತಿದ್ದ ಮರಣ ಪ್ರಕರಣ ಸಂಖ್ಯೆ ನೂರರ ಗಡಿ ದಾಟಿತ್ತು. ಮೇ ತಿಂಗಳ ಮೊದಲ ವಾರದಲ್ಲಿ ಈ ಸಂಖ್ಯೆ 500ರ ಗಡಿಗೆ ಏರಿಕೆ ಕಂಡಿತ್ತು. ಎರಡು ತಿಂಗಳ ಬಳಿಕ ನೂರರ ಗಡಿಯೊಳಗೆ ಮರಣ ಪ್ರಕರಣಗಳು ವರದಿಯಾಗಿವೆ.

ಒಂದು ದಿನದ ಅವಧಿಯಲ್ಲಿ 1.64 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣವು ಶೇ 2.18 ರಷ್ಟು ವರದಿಯಾಗಿದೆ. ರಾಜ್ಯದ 29 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 500ರ ಗಡಿಯೊಳಗಿವೆ. ಬೆಂಗಳೂರಿನಲ್ಲಿ 788 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಸಂಖ್ಯೆ 13 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 28.34 ಲಕ್ಷ ದಾಟಿದೆ.

ADVERTISEMENT

ಮರಣ ಪ್ರಮಾಣ ದರವು ಶೇ 2.46 ರಷ್ಟು ವರದಿಯಾಗಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ದೃಢಪಟ್ಟಿವೆ. ಮೈಸೂರು ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ 15 ಮಂದಿ, ಬೆಂಗಳೂರಿನಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 34,743ಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1.01 ಲಕ್ಷಕ್ಕೆ ಇಳಿಕೆಯಾಗಿದೆ. ಸೋಂಕಿತರಲ್ಲಿ 7,699 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 26.98 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.