ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ತಾಯಿ–ನವಜಾತ ಶಿಶು ಸಾವಿನ ಪ್ರಮಾಣ ತಗ್ಗಿಸಲು ತಾಲ್ಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ತಾಯಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣವನ್ನು ತಗ್ಗಿಸಲು ತಾಲ್ಲೂಕು ಮಟ್ಟದ 148 ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ತ್ರಿವಳಿ ತಜ್ಞರ ಲಭ್ಯತೆ ಸೇರಿ ವಿವಿಧ ಕ್ರಮಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟಿಸಿದರು.
ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಬಲವರ್ಧನೆಗೆ ತ್ರಿವಳಿ ತಜ್ಞರ ತರ್ಕಬದ್ಧಗೊಳಿಸುವಿಕೆ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ತ್ರಿವಳಿ ತಜ್ಞರು ಎಂದರೆ ಸ್ತ್ರೀರೋಗ, ಅರಿವಳಿಕೆ ಮತ್ತು ಮಕ್ಕಳ ತಜ್ಞರು. ಈ ಮೂವರು ತಜ್ಞರು ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ 24 ಗಂಟೆಯೂ ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದ್ದಕ್ಕಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ತಜ್ಞರ ಸಂಖ್ಯೆ ಹೆಚ್ಚಿಸುವುದರ ಜತೆಗೆ, ಯಾವುದೇ ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ತಜ್ಞರಿದ್ದರೆ, ತಜ್ಞರ ಸಂಖ್ಯೆ ಕೊರತೆ ಇರುವ ಕಡೆಗೆ ನಿಯೋಜಿಸಲಾಗುವುದು. ತಜ್ಞ ವೈದ್ಯರು ಇಲ್ಲದೇ ಯಾವ ತಾಯಿಯೂ ಸಾವಿಗೀಡಾಗಬಾರದು ಎಂಬುದು ಸರ್ಕಾರದ ಆದ್ಯತೆ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ಈಗ ಪ್ರತಿ 1 ಲಕ್ಷಕ್ಕೆ 60 ಮಂದಿ ತಾಯಂದಿರ ಸಾವು ಸಂಭವಿಸುತ್ತಿದೆ. ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳಕ್ಕೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚು ಇದೆ. ಇದನ್ನು ಮೊದಲ ಹಂತದಲ್ಲಿ 40ಕ್ಕೆ ಇಳಿಸಿ, ಬಳಿಕ ಶೂನ್ಯಕ್ಕೆ ತರುವುದು ನಮ್ಮ ಉದ್ದೇಶ. ಇದಕ್ಕೆ ಪೂರಕವಾಗಿ ಸಾವಿನ ಆಡಿಟ್ ನಡೆಸಲಾಗಿದೆ. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಸೇರಿ ವಿವಿಧ ಲೋಪಗಳನ್ನು ಸರಿಪಡಿಸಲಾಗಿದೆ’ ಎಂದು ದಿನೇಶ್ ತಿಳಿಸಿದರು.
ಹೊಸದಾಗಿ 223 ವೈದ್ಯರ ನೇಮಕದ ಜತೆಗೆ, 114 ರೇಡಿಯಾಲಾಜಿಸ್ಟ್ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲಾಗುವುದು. ಪ್ರತಿ ತಾಲ್ಲೂಕು ಆಸ್ಪತ್ರೆಗಳ ಪ್ರಸೂತಿ ವಿಭಾಗಕ್ಕೆ ಹೆಚ್ಚುವರಿಯಾಗಿ ನರ್ಸಿಂಗ್ ಸಿಬ್ಬಂದಿಯನ್ನು ನೀಡಲಾಗುವುದು. ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿಯನ್ನು ಹೆಚ್ಚಿಸುವುದರಿಂದ ಜಿಲ್ಲಾ ಆಸ್ಪತ್ರೆಗಳ ಮೇಲಿನ ಹೊರೆಯೂ ತಗ್ಗಲಿದೆ ಎಂದು ಅವರು ವಿವರಿಸಿದರು.
* ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಸಿಇಎಂಒಎನ್ಸಿ ಆಸ್ಪತ್ರೆಗಳಾಗಿ (ಕ್ಲಿಷ್ಟಕರ ಹೆರಿಗೆ ಮತ್ತು ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸುವ ಆಸ್ಪತ್ರೆ) ಕಾರ್ಯನಿರ್ವಹಿಸಲಿವೆ.
* ತಿಂಗಳಿಗೆ ಸರಾಸರಿ 30 ಅಥವಾ ಅದಕ್ಕಿಂತ ಹೆಚ್ಚಿನ ಹೆರಿಗೆ ಹೊರೆ ಹೊಂದಿರುವ 41 ಸಮುದಾಯ ಆರೋಗ್ಯ ಕೇಂದ್ರಗಳನ್ನು ತ್ರಿವಳಿ ತಜ್ಞರ ಸೇವೆಗಳಾಗಿ ಉಳಿಸಿಕೊಳ್ಳಲಾಗುವುದು
* 230ಕ್ಕೂ ಕಡಿಮೆ ಕಾರ್ಯನಿರ್ವಹಿಸುವ ಸಮುದಾಯ ಆರೋಗ್ಯ ಕೇಂದ್ರಗಳಿಂದ ತಜ್ಞರನ್ನು ತಾಲ್ಲೂಕು ಆಸ್ಪತ್ರೆಗೆ ಮರು ನಿಯೋಜಿಸಲಾಗುವುದು
* ಮಲೆ ಮಹದೇಶ್ವರ ಬೆಟ್ಟ, ಸಂತೆಮರಹಳ್ಳಿ, ತಲಕಾಡು, ಬನ್ನೂರು ಮುಂತಾದ ದೂರದ ಪ್ರದೇಶಗಳ ಸಿಎಚ್ಸಿಗಳನ್ನು ತಜ್ಞರೊಂದಿಗೆ ಉಳಿಸಿಕೊಳ್ಳಲಾಗುವುದು
* ಮರು ನಿಯೋಜನೆಯಾದ ಸ್ಥಳಗಳಲ್ಲಿ ಸಿಬ್ಬಂದಿ ವೈದ್ಯಾಧಿಕಾರಿಗಳು, ಹಿರಿಯ ವೈದ್ಯಾಧಿಕಾರಿಗಳು, ದಂತ ವೈದ್ಯರು ಮತ್ತು ಸಿಬ್ಬಂದಿ ನರ್ಸ್ಗಳನ್ನು ಹೆಚ್ಚಿಸಲಾಗುವುದು
* ಕಡಿಮೆ ಕಾರ್ಯ ನಿರ್ವಹಿಸುವ 24x7 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಶುಶ್ರೂಷಾಧಿಕಾರಿ (ಸ್ಟಾಫ್ ನರ್ಸ್) ಮರು ನಿಯೋಜಿಸಿ 189 ಸಿಇಎಂಒಎನ್ಸಿ ಆಸ್ಪತ್ರೆಗಳನ್ನು ಬಲಪಡಿಸಲಾಗುವುದು.
* ಪ್ರತಿ ಸಿಇಎಂಒಎನ್ಸಿ ಆಸ್ಪತ್ರೆಯಲ್ಲಿ 3 ಹೆಚ್ಚುವರಿ ನರ್ಸ್ಗಳ ನಿಯೋಜನೆ.
* ಗರ್ಭಿಣಿಯರಿಗೆ ಜನಜಾಗೃತಿ ತರಬೇತಿ–ಸಾಮಾನ್ಯ/ಸಿಸೇರಿಯನ್ ಹೆರಿಗೆಗಳ ಮಾಹಿತಿ ಮತ್ತು ಪೋಷಣೆ, ರೋಗ ನಿರೋಧಕ ಮತ್ತು ರಕ್ತಹೀನತೆ ತಡೆಗಟ್ಟುವ ಚುಚ್ಚುಮದ್ದು ನೀಡಲಾಗುವುದು. ಕುಟುಂಬ ಕಲ್ಯಾಣಗಳ ಅರಿವು ಮೂಡಿಸಲಾಗುವುದು.
ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಂಡ ಕಾರಣ ತಾಯಿ– ನವಜಾತ ಶಿಶುಗಳ ಸಾವಿನ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇ 25ರಷ್ಟು ಕಡಿಮೆ ಆಗಿದೆ. ಶೂನ್ಯಕ್ಕೆ ತರುವುದು ನಮ್ಮ ಗುರಿದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.