ADVERTISEMENT

ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದರೂ ಗುಮಾಸ್ತನಂತಿದ್ದೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 13:20 IST
Last Updated 31 ಜುಲೈ 2021, 13:20 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ರಾಜ್ಯದಲ್ಲಿ 2018ರಲ್ಲಿ ಮೈತ್ರಿ ಸರ್ಕಾರವಿದ್ದಾಗ ನಾನು ಸ್ವತಂತ್ರ ಮುಖ್ಯಮಂತ್ರಿಯಾಗಿರಲಿಲ್ಲ. ಗುಮಾಸ್ತನಂತೆ ಕೆಲಸ ಮಾಡಬೇಕಾಗಿತ್ತು. ಅಂತಹ ಇಕ್ಕಟ್ಟಿನಲ್ಲಿ 14 ತಿಂಗಳು ಕಾರ್ಯನಿರ್ವಹಿಸಿದೆ. ಶ್ರೀಮಂತರ ಪರವಾಗಿ ಯಾವುದೇ ಆದೇಶವನ್ನು ನಾನು ನೀಡಲಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ದಾಸರಹಳ್ಳಿ ಕ್ಷೇತ್ರದ ಸೋಮಶೆಟ್ಟಿಹಳ್ಳಿಯಲ್ಲಿ ಶಿವರಾಮ ಕಾರಂತ ಬಿಡಿಎ ಬಡಾವಣೆಗಾಗಿ ಭೂಮಿ ಕಳೆದುಕೊಂಡವರ ಜೊತೆಗೆ ಶನಿವಾರ ಸಾಂತ್ವನ ಸಭೆ ನಡೆಸಿ ಮಾತನಾಡಿದ ಅವರು, ‘ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕಾಂಗ್ರೆಸ್‌ನವರ ಸುಪರ್ದಿಯಲ್ಲಿತ್ತು. ಬಿಡಿಎ, ಬಿಬಿಎಂಪಿ ಸೇರಿದಂತೆ ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಸಭೆಯನ್ನು ನಾನು ಮಾಡುವಂತಿರಲಿಲ್ಲ’ ಎಂದೂ ಹೇಳಿದರು.

‘ಉದ್ದೇಶಿತ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಹೆಸರಿನಲ್ಲಿ ಬಡ, ಮಧ್ಯಮ ಹಾಗೂ ರೈತರ ಬಿಡಿಎ ದೌರ್ಜನ್ಯ ನಡೆಸುತ್ತಿದೆ. ಯೋಜನೆಗೆ ಸಂಬಂಧಿಸಿದಂತೆ ಭೂಮಿ ಕಳೆದುಕೊಳ್ಳುತ್ತಿರುವ ನಿವೇಶನದಾರರು ಹಾಗೂ ರೈತರಿಂದ ಅರ್ಜಿ ಸ್ವೀಕರಿಸುವ ಅವಧಿ ಮುಗಿಯುವವರೆಗೆ ಮತ್ತು ಈ ಸಂಬಂಧ ಕಾನೂನಾತ್ಮಕವಾಗಿ ಸ್ಪಷ್ಟ ಚಿತ್ರಣ ಹೊರಬೀಳುವವರೆಗೆ, ಈ ಪ‍್ರದೇಶದಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಕೆಡವಬಾರದು’ ಎಂದು ಮನವಿ ಮಾಡಿದರು.

ADVERTISEMENT

‘30 ಸಾವಿರ ಕುಟುಂಬಗಳನ್ನು ಬೀದಿಗೆ ತಳ್ಳಿ 25 ಸಾವಿರ ನಿವೇಶನಗಳ ನಿರ್ಮಾಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ’ ಎಂದೂ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.