ಬೆಂಗಳೂರು: ‘ಮನುಷ್ಯ ದೊಡ್ಡ ಹುದ್ದೆಗೆ ಹೋದಂತೆಲ್ಲ ಬುದ್ಧಿಮತ್ತೆ ಕೂಡ ಹೆಚ್ಚಾಗಬೇಕೇ ವಿನಃ ಗರ್ವ ಬರಬಾರದು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಸಿ.ಟಿ.ರವಿಗೆ ಬಹುಶಃ ತನ್ನದೇ ಪಕ್ಷದಲ್ಲಿ ಹೆಮ್ಮರವಾಗುತ್ತಿರುವ ವಂಶವಾಹಿ ರಾಜಕಾರಣದ ವಿರುದ್ಧ ಕೋಪ ಇರಬೇಕು. ಅದಕ್ಕಾಗಿ ಈ ವಿಚಾರ ಕೆಣಕಿದ್ದಾರೆ ಎಂದೆನಿಸುತ್ತಿದೆ' ಎಂದು ವ್ಯಂಗ್ಯವಾಡಿದ್ದಾರೆ.
‘ಸಿ.ಟಿ.ರವಿಯವರು ಮಂತ್ರಿ ಪದವಿ ಹೋದದ್ದಕ್ಕೆ ಅಥವಾ ಭವಿಷ್ಯದಲ್ಲಿ ವಂಶವಾಹಿ ರಾಜಕಾರಣದಲ್ಲಿ ಬೆಳೆದು, ಪಕ್ಷದಲ್ಲಿ ತನ್ನ ಬುಡ ಕತ್ತರಿಸುವ ಆತಂಕದಿಂದ ಹಾಗೂ ಬಿಜೆಪಿಯಲ್ಲಿನ ವೈರುದ್ಯಗಳ ಬಗ್ಗೆ ಧ್ವನಿ ಎತ್ತಲು ಧೈರ್ಯ ಇಲ್ಲದೇ ಬೇರೆ ಪಕ್ಷಗಳ ವಂಶವಾಹಿ ಆಡಳಿತದ ಬಗ್ಗೆ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ’ ಎಂದು ಹೇಳಿದ್ದಾರೆ.
‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸ್ಥಾನಕ್ಕೆ ಅಂದಿನ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಪುತ್ರ ರಾತ್ರೋರಾತ್ರಿ ಬಂದು ಕುಳಿತಿದ್ದಾರೆ. ಜಯ್ ಶಾ ಎಷ್ಟು ಸೆಂಚುರಿ, ಎಲ್ಲಿ ಬಾರಿಸಿದ್ದಾರೆ? ಸಿ.ಟಿ.ರವಿಗೆ ಅಲ್ಪಜ್ಞಾನ ಇರುವುದಕ್ಕೆ ನನಗೆ ಕನಿಕರವಾಗುತ್ತದೆ. ಜಯ್ ಶಾ ಪದವಿ ಕೂಡ ಅವರಪ್ಪನ ಬಳುವಳಿ ಎಂದು ಹೇಳುವ ಧೈರ್ಯ ಸಿ.ಟಿ. ರವಿ ಅವರಿಗೆ ಇಲ್ಲ’ ಎಂದು ಕಿಡಿಕಾರಿದ್ದಾರೆ.
‘ಮನುಷ್ಯ ದೊಡ್ಡ ಹುದ್ದೆಗೆ ಹೋದಂತೆಲ್ಲ ಬುದ್ಧಿಮತ್ತೆ ಕೂಡ ಹೆಚ್ಚಾಗಬೇಕೇ ವಿನಃ ಗರ್ವ ಬರಬಾರದು. ಆದರೆ, ಸಿ.ಟಿ.ರವಿಯವರ ಮಾತುಗಳು ಆ ಹಂತ ತಲುಪಿದಂತೆ ಭಾಸವಾಗುತ್ತದೆ. ಬಳಸುವ ಭಾಷೆ ಅದನ್ನು ಪ್ರತಿಧ್ವನಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.