ಮೈಸೂರು: ‘ಫ್ರೀ ಕಾಶ್ಮೀರ‘ ಫಲಕ ಪ್ರದರ್ಶನ ಪ್ರಕರಣ ಸಂಬಂಧಿಸಿದಂತೆ ನಳಿನಿ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ಬೆಂಗಳೂರಿನ ವಕೀಲರ ತಂಡವೊಂದು ಸೋಮವಾರ ಮೈಸೂರಿಗೆ ಬರಲಿದೆ.
ಈ ವಿಚಾರವನ್ನು ದ್ವಾರಕಾನಾಥ್ ಅವರು ಫೇಸ್ಬುಕ್ನಲ್ಲಿ ಪ್ರಕಟಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
‘ಜಗದೀಶ್ ನೇತೃತ್ವದಲ್ಲಿ ವಕೀಲರ ತಂಡ ನಳಿನಿ ಪ್ರಕರಣಕ್ಕಾಗಿ ಮೈಸೂರಿಗೆ ಬರಲಿದೆ. ಅಂತೆಯೇ ಅನೇಕ ಮಂದಿ ವೃತ್ತಿಧರ್ಮದಲ್ಲಿ ನಂಬಿಕೆಯಿಟ್ಟ ವಕೀಲರು ರಾಜ್ಯದ ಎಲ್ಲೆಡೆಯಿಂದ ಬರಲಿದ್ದಾರೆ.
ಮೈಸೂರಿನ ಜನಪರ ವಕೀಲರೊಂದಿಗೆ ನನ್ನ ವಕಾಲತ್ತು ಸೇರಿದಂತೆ, ನಿಕಟಪೂರ್ವ ಎಸ್.ಪಿ.ಪಿ.ಯಾಗಿದ್ದ ಹಿರಿಯ ವಕೀಲ ಬಿ.ಟಿ.ವೆಂಕಟೇಶ್, ಹಿರಿಯ ಕ್ರಿಮಿನಲ್ ಲಾಯರ್ಗಳಾದ ಶಂಕರಪ್ಪ, ಕಾಶೀನಾಥ್ ಮುಂತಾದವರ ವಕಾಲತ್ತಿನೊಂದಿಗೆ ನಳಿನಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ. ದಯವಿಟ್ಟು ನಿಮ್ಮ ನೈತಿಕ ಬೆಂಬಲ ನೀಡಿ‘ ಎಂಬ ಬರಹವನ್ನು ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರೂ ಆದ ಸಿ.ಎಸ್.ದ್ವಾರಕನಾಥ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಾಗಿ ’ಪ್ರಜಾವಾಣಿ‘ ಸಂಪರ್ಕಿಸಿದರೂ ಲಭ್ಯರಾಗಲಿಲ್ಲ.
ದೇಶದ್ರೋಹ ಆರೋಪ ಎದುರಿಸುತ್ತಿರುವವರ ಪರ ವಕಾಲತ್ತು ವಹಿಸಲ್ಲ ಎಂದು ಮೈಸೂರು ವಕೀಲರ ಸಂಘ ತನ್ನ ನಿರ್ಧಾರ ಪ್ರಕಟಿಸಿದ ಬಳಿಕ ವಿವಿಧೆಡೆಯ ವಕೀಲರು ವಕಾಲತ್ತು ವಹಿಸಲು ಮುಂದಾಗಿದ್ದರು.
ಕುತೂಹಲ ಕೆರಳಿಸಿದ ವಕೀಲರ ಸಂಘದ ಸಭೆ
‘ಫ್ರೀ ಕಾಶ್ಮೀರ’ ಫಲಕ ಹಿಡಿದಿದ್ದ ನಳಿನಿ ಪರವಾಗಿ ವಕಾಲತ್ತು ಹಾಕಬಾರದು ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿತ್ತು. ನಿರ್ಣಯವನ್ನು ವಿರೋಧಿಸಿದ್ದ ಕೆಲವು ವಕೀಲರು ಸಾಮಾನ್ಯ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು (ಜ.20) ಮುಂಜಾನೆ ಜಿಲ್ಲಾ ನ್ಯಾಯಾಲಯವ ಆರಣವದಲ್ಲಿ ಸಾಮಾನ್ಯ ಸಭೆ ಕರೆಯಲಿದೆ. ವಕೀಲರ ಸಂಘದಲ್ಲಿ 4500 ಸದಸ್ಯರಿದ್ದಾರೆ. ಬಹುಮತದ ಆಧಾರದ ಮೇಲೆ ಸಂಘವು ನಳಿನಿ ವಿಚಾರವಾಗಿ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.