ದಾವಣಗೆರೆ: ಭತ್ತಕ್ಕೆ ಬೆಂಬಲ ಬೆಲೆಯ ಜೊತೆಗೆ ₹ 1,000 ಬೋನಸ್ ಘೋಷಿಸಬೇಕು ಹಾಗೂ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 3,000 ದರ ನಿಗದಿಪಡಿಸಬೇಕು. ಇಲ್ಲವಾದರೆ ಕಬ್ಬು ಬೆಳೆಗಾರರ ಮಾದರಿಯಲ್ಲಿ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
‘ಕ್ವಿಂಟಲ್ ಭತ್ತಕ್ಕೆ ₹ 2,389 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ತೆಲಂಗಾಣದಲ್ಲಿ ಇದಕ್ಕೆ ₹ 500 ಬೋನಸ್ ನೀಡಲಾಗುತ್ತಿದೆ. ಕರ್ನಾಟಕದ ರೈತರಿಗೆ ಈ ರೀತಿಯ ಬೋನಸ್ ನೀಡಿದರೆ ಅನುಕೂಲವಾಗುತ್ತದೆ. ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ ಪೂರ್ವಭಾವಿ ಸಭೆ ನಡೆಸಿ ಹೋರಾಟದ ಸ್ವರೂಪ ತೀರ್ಮಾನಿಸಲಾಗುವುದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಭತ್ತ ಎಕರೆಗೆ ಗರಿಷ್ಠ 25 ಕ್ವಿಂಟಲ್ ಇಳುವರಿ ಸಿಗುತ್ತಿದೆ. ಉಳುಮೆ, ಬೀಜ, ರಸಗೊಬ್ಬರದ ವೆಚ್ಚಕ್ಕೆ ಆದಾಯ ಸರಿಹೊಂದುತ್ತಿದೆ. ಭತ್ತ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತ ನೆಪಮಾತ್ರಕ್ಕೆ ಖರೀದಿ ಕೇಂದ್ರ ತೆರೆದಿದೆ’ ಎಂದು ಆರೋಪಿಸಿದರು.
‘ಮಳೆ ಹೆಚ್ಚಾಗಿ ಮೆಕ್ಕೆಜೋಳದ ಇಳುವರಿ ಕುಂಠಿತವಾಗಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 1,600 ಬೆಲೆ ಇದೆ. ಕೇಂದ್ರ ಸರ್ಕಾರ ಕ್ವಿಂಟಲ್ಗೆ ₹ 2,400 ಬೆಂಬಲ ಬೆಲೆ ನಿಗದಿಪಡಿಸಿದೆ. ರೈತರು ಸಂಕಷ್ಟಕ್ಕೆ ಸಿಲುಕಿದರೂ ರಾಜ್ಯ ಸರ್ಕಾರ ಗಮನಹರಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ’ ಎಂದು ದೂರಿದರು.
ಜಿಲ್ಲಾ ರೈತ ಒಕ್ಕೂಟದ ಅಧ್ಯಕ್ಷ ಬಿ.ಎಂ. ಸತೀಶ್ ಕೋಳೆನಹಳ್ಳಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್, ಕಂದಗಲ್ ರೇವಣ್ಣ, ಕುರ್ಕಿ ರೇವಣಸಿದ್ಧಪ್ಪ, ಎಚ್.ಪಿ. ವಿಶ್ವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.