ADVERTISEMENT

ಗಂಟುಮೂಟೆಗಳಲ್ಲಿ ಜೀವನ, ಅಯ್ಯೋ ಜೀವವೇ... ಜೀವನವೇ...

ಅಂಗೈಲಿಜೀವ ಇಟ್ಕೊಂಡು, ಊರಿಗೆ ಹೋಗುವ ದಾರಿಯಲ್ಲಿರುವವಲಸೆ ಕಾರ್ಮಿಕರ ಬದುಕಿನ ಚಿತ್ರಣವನ್ನು ಕ್ಯಾಮೆರಾ ಕಣ್ಣಿನಲ್ಲಿ ಕಟ್ಟಿಕೊಟ್ಟಿದ್ದಾರೆ ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣಅಮ್ಮನೆದೆಗಾನಿ ಮಲಗಿರುವ ಎಳೆಮಗುವಿಗೆ ಯಾವ ಪರಿವೆಯೂ ಇಲ್ಲ. ಹಾಲು ಹೀರಿದರೂ ಬರುತ್ತಿಲ್ವಲ್ಲ ಅನ್ನುವ ಸಂಕಟ. ಉಣ್ಣದೆ ಹಾಲುಣಿಸುವುದು ಹೇಗೆ? ಅಸಹಾಯಕತನದ ದೃಷ್ಟಿ ಅಮ್ಮನ ಕಣ್ಣಲ್ಲಿ. ಹಸಿವಾದರೂ ಏನೂ ದೊರೆಯದು, ಅಮ್ಮ ತಾರಳು, ಅಪ್ಪನಿಗೆ ಸಿಗದು ಎಂಬುದು ಗೊತ್ತಿರುವಂತೆ ಆಡುವುದು ಮರೆತು, ಹಾಡುವುದೂ ಮರೆತು, ಬೆನ್ನಿಗಂಟಿಸಿಕೊಂಡಿರುವ ಹೊಟ್ಟೆಗೆ ಇವರ ಪರಿಸ್ಥಿತಿಯ ಅರಿವಿಲ್ಲ. ಹೊತ್ತು ಹೊತ್ತಿಗೆ ತಾಳ ಹಾಕುವುದು ಅದು ಬಿಟ್ಟಿಲ್ಲ.ಎಲ್ಲರನ್ನೂ ಕರೆಕರೆದು ಜಾಗ ಕೊಟ್ಟು ನೇವರಿಸಿದ ಬೆಂಗಳೂರು ಇದೀಗ ಅವರಿಗೆ ಪರವೂರಾಗಿದೆ. ಉದ್ದಾನುದ್ದ ಹೆಬ್ಬಾವಿನಂತೆ ಮಲಗಿರುವ ರಸ್ತೆಗಳು, ಮೇಲ್ಸೇತುವೆಗಳು ಸದ್ಯಕ್ಕೆ ಕಾಲು ಚಾಚಿ ಕೂರಲಷ್ಟೇ ಅನುಕೂಲ ಮಾಡಿಕೊಡುವಂತಿವೆ.ಮನೆಯೆಂದುಕೊಂಡಿದ್ದ ಜೋಪಡಿಗಳನ್ನು ಬಿಡುವ ಮುನ್ನವೂ ಬಡಿದುಕೊಂಡಿರುವ ರೊಟ್ಟಿ, ಪಲ್ಯೆಗಳು ಹಸಿವು ತಣಿಸುತ್ತಿಲ್ಲ. ಹಂಚಿಕೊಂಡು ತಿಂದರೂ.. ಮುಂದಿನೂಟಕ್ಕೇನು ಎಂಬ ಪ್ರಶ್ನೆ ಹಣೆಗಂಟಿನಲ್ಲಿ. ಸಿಮೆಂಟಿನ ಚೀಲದಲ್ಲಿ ಬಟ್ಟೆಗಳು... ಕುಂಚಿಗೆ ಕುಲಾವಿ ಕಟ್ಟಿಕೊಂಡ ಮಕ್ಕಳು, ಊರಿಗೆ ಹೋಗಬೇಕೆನ್ನುವ ನಿರೀಕ್ಷೆ, ಬಸ್ಸಿನ ವ್ಯವಸ್ಥೆ ಆಗದ ನಿರಾಸೆ... ಅದೆಷ್ಟು ನೋಟಗಳು... ಜೀವನವಿಲ್ಲಿ ದುಬಾರಿ.. ಜೀವವೇ ಅಗ್ಗ ಎಂಬಂತೆ!!

​ಪ್ರಜಾವಾಣಿ ವಾರ್ತೆ
Published 3 ಮೇ 2020, 13:59 IST
Last Updated 3 ಮೇ 2020, 13:59 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.