ADVERTISEMENT

ಶಾಸಕ ಬಸನಗೌಡ ಪಾಟೀಲ ಯತ್ನಾಳ‌ಗೆ ಕರವೇ ನಾರಾಯಣಗೌಡರ ಎರಡು ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2020, 8:53 IST
Last Updated 21 ನವೆಂಬರ್ 2020, 8:53 IST
ಕರವೇ ನಾರಾಯಣ ಗೌಡ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ
ಕರವೇ ನಾರಾಯಣ ಗೌಡ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ   

ಬೆಂಗಳೂರು: ‘ಮರಾಠಾ ಸಮಾಜ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರೋಲ್‌ಕಾಲ್‌ ಹೋರಾಟಗಾರರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಮುಖ್ಯಮಂತ್ರಿಗಳು ಹೆದರಬೇಕಿಲ್ಲ. ವಿಜಯಪುರವನ್ನು ಯಾರು ಬಂದ್‌ ಮಾಡುತ್ತಾರೋ ನೋಡೋಣ’ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಆಕ್ರೋಶಗೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣಗೌಡ, ಯತ್ನಾಳಗೆ ಎರಡು ಸವಾಲುಗಳನ್ನು ಹಾಕಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, 'ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕನ್ನಡಪರ ಚಳವಳಿಗಾರರ ಕುರಿತು ಕುಚೇಷ್ಟೆಯ ಮಾತುಗಳನ್ನು ಆಡಿದ್ದಾರೆ. ಅವರು ಕನ್ನಡ ಚಳವಳಿಗಾರರ ಕುರಿತು ಏನೆಲ್ಲ ಮಾತುಗಳನ್ನು ಆಡಿದ್ದಾರೋ ಅದೆಲ್ಲವೂ ಅವರಿಗೇ ಅನ್ವಯಿಸುತ್ತದೆ. ಸಚಿವ ಸ್ಥಾನ ಪಡೆಯಲು ಆಗಾಗ ತಮ್ಮ ಪಕ್ಷದ ಸರ್ಕಾರವನ್ನೇ ಬ್ಲಾಕ್‌ಮೇಲ್‌ ಮಾಡಿಕೊಂಡುಬಂದವರು ಯತ್ನಾಳ್. ಕಂಡಕಂಡವರಿಗೆ ಸವಾಲು ಎಸೆಯುವ ಯತ್ನಾಳ್ ಅವರಿಗೆ ಎರಡೇ ಎರಡು ಸವಾಲು ಹಾಕುತ್ತಿದ್ದೇನೆ. ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಈ ಸವಾಲುಗಳನ್ನು ಸ್ವೀಕರಿಸಲಿ. ಇಲ್ಲವಾದಲ್ಲಿ ಬೂಟಾಟಿಕೆಯ ರಾಜಕೀಯ ಮಾಡುವುದನ್ನು ಬಿಟ್ಟುಬಿಡಲಿ,' ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಸವಾಲುಗಳೇನು?

ಸವಾಲು-1: ಯತ್ನಾಳ್ ಶಾಸಕರಾಗಿರುವ ಜಿಲ್ಲೆ ವಿಜಯಪುರವೂ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭೀಕರ ನೆರೆ, ಭಾರೀ ಮಳೆಯಿಂದಾಗಿ ಸುಮಾರು ₹25,000 ಕೋಟಿ ನಷ್ಟವಾಗಿದ್ದು, ಕನಿಷ್ಠ ₹10,000 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟಿರುವುದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇವಲ ₹550 ಕೋಟಿ. ವಿಜಯಪುರ ಜಿಲ್ಲೆಯಲ್ಲಿ ಎರಡು ಲಕ್ಷ ಎಕರೆಗೂ ಹೆಚ್ಚು ಕೃಷಿ ಭೂಮಿ, ಹತ್ತು ಸಾವಿರ ಎಕರೆಗೂ ಹೆಚ್ಚು ತೋಟಗಾರಿಕಾ ಭೂಮಿ ಹಾಳಾಗಿದೆ. ರೈತರಿಗೆ ಪರಿಹಾರವಿಲ್ಲ, ಮನೆ ಕಳೆದುಕೊಂಡವರಿಗೆ ಪರಿಹಾರವಿಲ್ಲ. ಅಲ್ಪಸ್ವಲ್ಪ ಬಿಡುಗಡೆಯಾದ ಹಣವನ್ನೂ ಪುಡಾರಿಗಳು ನುಂಗಿ ನೀರು ಕುಡಿದಿದ್ದಾರೆ. ಗಂಜೀಕೇಂದ್ರಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಸಂತ್ರಸ್ಥರು ಒದ್ದಾಡುತ್ತಿದ್ದಾರೆ. ಯತ್ನಾಳ್‌ ಅವರಿಗೆ ನಿಜವಾಗಿಯೂ ಜನಪರ ಕಾಳಜಿ ಇದ್ದರೆ, ತನ್ನ ಕ್ಷೇತ್ರದ ಮತದಾರರ ಹಿತ ಕಾಯುವ ಮನಸ್ಸಿದ್ದರೆ, ಕೇಂದ್ರ ಸರ್ಕಾರ ಯಾಕೆ ಹಣ ನೀಡುತ್ತಿಲ್ಲ,' ಎಂದು ಪ್ರಶ್ನಿಸಲಿ ಎಂದು ಅವರು ಸವಾಲೆಸಿದಿದ್ದಾರೆ.

ಸವಾಲು-2: ಜಿಎಸ್‌ಟಿ ವ್ಯವಸ್ಥೆ ಜಾರಿಯಾದಾಗಿನಿಂದಲೂ ಕರ್ನಾಟಕ ಸರ್ಕಾರ ಲಕ್ಷಾಂತರ ಕೋಟಿ ರುಪಾಯಿ ಹಣವನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ. ಜಿಎಸ್ ಟಿ ವ್ಯವಸ್ಥೆ ಜಾರಿಯಾದ ಸಂದರ್ಭದಲ್ಲಿ ರಾಜ್ಯಗಳಿಗೆ ಆಗುವ ನಷ್ಟವಾಗುವ ಹಣವನ್ನು ಕೊಡುವ ವಾಗ್ದಾನವನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಮಾತು ಮುರಿದಿದೆ. ಪರಿಹಾರದ ಹಣ ನೀಡುತ್ತಿಲ್ಲ. ಬದಲಾಗಿ ರಿಸರ್ವ್ ಬ್ಯಾಂಕ್ ನಿಂದ ಸಾಲ ಪಡೆಯಿರಿ ಎಂದು ಹೇಳುತ್ತಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಹಣವಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಸರ್ಕಾರ ದಿವಾಳಿಯಾಗುವ ಸ್ಥಿತಿ ಇದೆ. ಯತ್ನಾಳ್ ಅವರಿಗೆ ನಿಜವಾಗಿಯೂ ಧೈರ್ಯ ಎಂಬುದಿದ್ದರೆ ನಮ್ಮ ಹಣ ನಮಗೆ ಕೊಡಿ ಎಂದು ಮೋದಿ ಸರ್ಕಾರವನ್ನು ಕೇಳಲಿ, ಅದಕ್ಕಾಗಿ ಧರಣಿ‌ ಮಾಡಲಿ,' ಎಂದು ಅವರು ಹೇಳಿದ್ದಾರೆ.

'ಇದೆರಡು ಕೆಲಸ ಮಾಡಲು ಯತ್ನಾಳ್ ಅವರಿಂದ ಸಾಧ್ಯವೇ? ಅಥವಾ ತಾವು ಹೈಕಮಾಂಡ್ ಗುಲಾಮಗಿರಿಯನ್ನೇ ಮಾಡುತ್ತೇವೆ, ಗುಲಾಮಗಿರಿ ಬಿಟ್ಟು ಬೇರೇನೂ ತಮಗೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುತ್ತಾರೆಯೇ?' ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.