ಬೆಂಗಳೂರು: ‘ಡಿ.5ರಂದು ಕರ್ನಾಟಕ ಬಂದ್ ನಡೆಸಲು ಯಾರೂ ಅನುಮತಿ ಕೇಳಿಲ್ಲ. ಪೊಲೀಸ್ ಇಲಾಖೆಯೂ ಅನುಮತಿ ನೀಡಿಲ್ಲ. ನಗರದಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ನಾಳೆ ಯಾವುದೇ ರ್ಯಾಲಿ ನಡೆಸಲು ಅವಕಾಶ ನೀಡಿಲ್ಲ. ಬಂದ್ಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬೆಂಬಲ ನೀಡಿಲ್ಲ. ಬಸ್ಗಳನ್ನು ತಡೆಯುವಂತಿಲ್ಲ.ಸಾರ್ವಜನಿಕರು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಬಹುದು’ಎಂದರು.
‘ಮುನ್ನೆಚ್ಚರಿಕೆ ಕ್ರಮವಾಗಿ ರೌಡಿಶೀಟರ್ಗಳ ಮೇಲೆ ನಿಗಾವಹಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ಎಂದು ಎಚ್ಚರಿಸಿದರು.
ಭದ್ರತೆಗೆ 15 ಸಾವಿರ ಪೊಲೀಸರು:‘ಅನಾವಶ್ಯಕವಾಗಿ ಬಂದ್ ಮಾಡುವುದನ್ನು ತಡೆಯಲು ಹಾಗೂ ಭದ್ರತೆಗಾಗಿ 15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಡಿಸಿಪಿಗಳು ಹಾಗೂ ಹೊಯ್ಸಳ ವಾಹನಗಳು ನಗರವೆಲ್ಲಾ ಸುತ್ತಲಿವೆ. 33 ಕೆಎಸ್ಆರ್ಪಿ, 32 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ’ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.