ಬೆಂಗಳೂರು: ಭಾರತೀಯ ಸೇನೆಗೆ ಸಂಪೂರ್ಣ ಬೆಂಬಲ ನೀಡುವ ಉದ್ದೇಶದಿಂದ ಇದೇ 15 ರಂದು ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ತಿರಂಗಾ ಯಾತ್ರೆ ನಡೆಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಿರಂಗಾ ಯಾತ್ರೆಯಲ್ಲಿ ಪಕ್ಷದ ಚಿಹ್ನೆ ಬಳಸುವುದಿಲ್ಲ. ರಾಷ್ಟ್ರ ಧ್ವಜವನ್ನು ಮಾತ್ರ ಬಳಸಲಾಗುವುದು ಎಂದರು.
15ರಂದು ಬೆಂಗಳೂರಿನ ಮಲ್ಲೇಶ್ವರದ ಸಂಪಿಗೆ ರಸ್ತೆಯ ಶಿರೂರು ಪಾರ್ಕ್ನಿಂದ 18 ನೇ ಕ್ರಾಸ್ವರೆಗೆ ತಿರಂಗಾ ಯಾತ್ರೆ ನಡೆಯಲಿದೆ. ಅಲ್ಲದೇ, ಮೇ 16 ಮತ್ತು 17ರಂದು ಜಿಲ್ಲಾ ಕೇಂದ್ರಗಳಲ್ಲಿ, ಮೇ 18 ರಿಂದ 23ರವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ಯಾತ್ರೆ ನಡೆಯಲಿದೆ. ಇದರಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
‘ಭಾರತೀಯ ಮಹಿಳೆಯರ ಸಿಂಧೂರ ಮುಟ್ಟಿದರೆ ಏನಾಗುತ್ತದೆ ಎಂಬುದನ್ನು ಭಾರತೀಯ ಸೇನೆ ತೋರಿಸಿದೆ. 100ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ. ಉಗ್ರರ ತರಬೇತಿ ಕೇಂದ್ರಗಳು ನಾಶವಾಗಿವೆ. ಯುದ್ಧ ಕೈಬಿಡಿ ಎಂದು ಅಂಗಲಾಚುವ ಮಟ್ಟಕ್ಕೆ ಪಾಕಿಸ್ತಾನ ಬಂದಿದೆ’ ಎಂದರು.
ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ‘ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎಲ್ಲ ರಾಜ್ಯಗಳಲ್ಲಿ ತಿರಂಗಾ ಯಾತ್ರೆ ನಡೆಸಲು ಕರೆ ನೀಡಿದ್ದಾರೆ. ಭಾರತ ಸೇನೆಯ ಜತೆ ನಾವಿದ್ದೇವೆ ಎಂಬ ಸಂದೇಶ ನೀಡಬೇಕು ಎಂದಿದ್ದಾರೆ. ತಿರಂಗಾ ಯಾತ್ರೆಯಲ್ಲಿ ನಿವೃತ್ತ ಯೋಧರು, ಅವರ ಕುಟುಂಬದ ಸದಸ್ಯರು, ರೈತರು, ವೈದ್ಯರು, ಎಂಜಿನಿಯರ್ಗಳು ಸೇರಿ ಎಲ್ಲ ವರ್ಗದ ಪ್ರಮುಖರು ಭಾಗವಹಿಸುತ್ತಾರೆ ಎಂದರು.
‘ಯುದ್ಧ ವಿರಾಮಕ್ಕೆ ಒಪ್ಪಿಕೊಂಡು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ನ ಕೆಲವು ಮುಖಂಡರು ಹಗುರವಾಗಿ ಮಾತಾಡುತ್ತಿದ್ದಾರೆ. ಅದು ಸರಿಯಲ್ಲ. ವಾಸ್ತವವಾಗಿ ಈಗ ಘೋಷಿಸಿರುವ ಯುದ್ಧ ವಿರಾಮ ಶಾಶ್ವತ ಅಲ್ಲ. ಮುಂದೆ ದೇಶದ ಮೇಲೆ ಯಾವುದೇ ಭಯೋತ್ಪಾದಕ ದಾಳಿ ಆದರೂ ಅದನ್ನು ಭಾರತದ ಮೇಲಿನ ಯುದ್ಧಕ್ಕೆ ಸಮ ಎಂದು ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ’ ಎಂದರು.
‘ಸಂದಿಗ್ಧ ಸ್ಥಿತಿಯಲ್ಲಿ ಒಡಕಿನ ಮಾತು ಬೇಡ’
‘ಭಾರತೀಯ ಸೇನೆ ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ನಾಶ ಮಾಡಿದೆ. ಇದೀಗ ಕದನ ವಿರಾಮ ಘೋಷಣೆಯಾದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಒಡಕಿನ ಮಾತುಗಳನ್ನು ಆಡುವುದು ಸರಿಯಲ್ಲ’ ಎಂದು ಆರ್.ಅಶೋಕ ಹೇಳಿದರು.
‘ಯುದ್ಧಕ್ಕೆ ಮುನ್ನ ಶಾಂತಿಯ ಮಾತು ಆಡುತ್ತಾರೆ. ಕದನ ವಿರಾಮ ಆದಾಗ ಯುದ್ಧ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ಇದು ಸಂಸತ್ತಿನ ಅಧಿವೇಶನ ನಡೆಸುವ ಸಮಯವೂ ಅಲ್ಲ. ನಮ್ಮ ಯೋಧರು ತಮ್ಮ ಸಾಹಸ ಕಾರ್ಯಕ್ಕೆ ಪುರಾವೆಗಳನ್ನು ನೀಡಿದ್ದಾರೆ. ಇನ್ನು ಮುಂದೆ ಸಾಕ್ಷಿ ಎಲ್ಲಿದೆ ಎಂದು ಯಾರೂ ಕೇಳಬಾರದು’ ಎಂದರು.
ಕಾಂಗ್ರೆಸ್ ನಾಯಕರು ರಾಜಕಾರಣ ಮಾಡುವುದನ್ನು ಬಿಟ್ಟು ಯೋಧರಿಗೆ ಬೆಂಬಲ ಕೊಡಬೇಕು. ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರ ಬಿಟ್ಟು ಕೊಟ್ಟಿದ್ದು ಮುಂಬೈ ದಾಳಿ ಮೊದಲಾದವುಗಳ ಬಗ್ಗೆ ನಾವೇನೂ ಪ್ರಶ್ನೆ ಮಾಡುತ್ತಿಲ್ಲ. ಇಂದಿನ ಘಟನೆಯನ್ನು ಇಂದಿರಾ ಗಾಂಧಿಯವರಿಗೆ ಹೋಲಿಕೆ ಮಾಡುವ ಅಗತ್ಯವಿಲ್ಲ. ಬಾಂಗ್ಲಾದೇಶ ರಚನೆ ಆಯಿತು ಎನ್ನುವುದಾದರೆ ಪಿಒಕೆ ಯಾಕೆ ಬಿಟ್ಟಿದ್ದೀರಿ ಎಂಬ ಪ್ರಶ್ನೆಯೂ ಬರುತ್ತದೆ. ಅದರ ಬಗ್ಗೆ ನಾವು ಯಾರೂ ಮಾತನಾಡುತ್ತಿಲ್ಲ. ಆ ರೀತಿ ಮಾತನಾಡುವುದಕ್ಕೆ ಇದು ಸಮಯವೂ ಅಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.