ADVERTISEMENT

ಮೈಸೂರು ರಾಜಮನೆತನದ ಪ್ರಮೋದಾದೇವಿ ಎದುರು ಸುಧಾ ಮೂರ್ತಿ ನೆಲಮುಟ್ಟಿದ ಫೋಟೊ ವೈರಲ್‌

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 2:48 IST
Last Updated 28 ಸೆಪ್ಟೆಂಬರ್ 2022, 2:48 IST
ಪ್ರಮೋದಾದೇವಿ ಎದುರು ಸುಧಾ ಮೂರ್ತಿ ಮಂಡಿಯೂರಿ ನೆಲಮುಟ್ಟಿದ ಫೋಟೊ
ಪ್ರಮೋದಾದೇವಿ ಎದುರು ಸುಧಾ ಮೂರ್ತಿ ಮಂಡಿಯೂರಿ ನೆಲಮುಟ್ಟಿದ ಫೋಟೊ   

ಬೆಂಗಳೂರು:ಇನ್ಫೊಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾ ಮೂರ್ತಿ ಅವರು, ಮೈಸೂರು ರಾಜಮನೆತನದ ಪ್ರಮೋದಾ ದೇವಿ ಒಡೆಯರ್ ಅವರ ಎದುರು ನೆಲಮುಟ್ಟಿ ನಮಸ್ಕರಿಸುತ್ತಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸುಧಾ ಮೂರ್ತಿ ಅವರ ನಡೆಯನ್ನು ಕೆಲವರು ಟೀಕಿಸಿದ್ದರೆ, ಕೆಲವರು
ಸಮರ್ಥಿಸಿಕೊಂಡಿದ್ದಾರೆ.

2019ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಸುಧಾ ಮೂರ್ತಿ ಭಾಗಿಯಾಗಿದ್ದರು. ಆಗ ಅವರು ಪ್ರಮೋದಾ ದೇವಿ ಒಡೆಯರ್ ಅವರ ಎದುರು ನೆಲಮುಟ್ಟಿ ನಮಸ್ಕರಿಸಿದ್ದರು. ಆಗ ತೆಗೆಯಲಾಗಿದ್ದ ಕೆಲವು ಚಿತ್ರಗಳು ಈಗ ಟ್ವಿಟರ್‌ನಲ್ಲಿ ಹಂಚಿಕೆಯಾಗುತ್ತಿವೆ. ಚಿತ್ರಗಳನ್ನು ಮೊದಲು ಯಾರು ಹಂಚಿಕೊಂಡಿದ್ದಾರೆ ಎಂಬುದು ಪತ್ತೆಯಾಗಿಲ್ಲ.

ಈ ಆಧುನಿಕ ಯುಗದಲ್ಲೂ ರಾಜಮನೆತನಕ್ಕೆ ತಲೆಬಾಗುವುದು ಅಗತ್ಯವಿದೆಯೇ ಎಂದು ಹಲವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ರೀತಿಯ ನಡೆ ನಮ್ಮ ರಕ್ತದಲ್ಲಿಯೇ ಇದೆ, ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಕೆಲವರು ವಿಷಾದ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಓ ದೇವರೇ... ಪ್ರಭುತ್ವದ ಎದುರು ತಲೆಬಾಗುತ್ತಿರುವುದು ಸುಧಾ ಮೂರ್ತಿಯೇ? ಈ ಮನಸ್ಥಿತಿ ನಮ್ಮ ರಕ್ತದಲ್ಲಿಯೇ ಇದೆ. ಎಂತಹ ಸಾಧನೆ ಮಾಡಿದರೂ ಎಷ್ಟೇ ಸಂಪತ್ತು ಸಂಪಾದಿಸಿದರೂ ಅದನ್ನು ಹೋಗಲಾಡಿಸಲು ಆಗುವುದಿಲ್ಲ’ ಎಂದು ಸುನೀಲ್‌ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಇದು ರಾಜಮನೆತನದವರಿಗೆ ನಮಸ್ಕರಿಸುವ ಸಾಂಪ್ರದಾಯಿಕ ವಿಧಾನವೇ ಅಥವಾ ಗೌರವ ಸಲ್ಲಿಸುವ ಬಗೆಯೇ’ ಎಂದು ಕಮ್ರಾನ್‌ ಎಂಬುವವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.‘ಅಷ್ಟೂ ದೊಡ್ಡ ಸಾಧಕಿಯಾಗಿದ್ದರೂ, ಸುಧಾ ಮೂರ್ತಿ ಅವರು ನಮ್ಮ ಸಂಸ್ಕೃತಿಯನ್ನು ಬಿಟ್ಟಿಲ್ಲ’ ಎಂದು ಕಾಳಾರಾಜ್‌ ಎಂಬುವವರು ಹೇಳಿದ್ದಾರೆ.

‘ಹೇರಿಕೆಯಾಗಿದ್ದರೆ ಇದು ನಿಜಕ್ಕೂ ಸಮಸ್ಯೆ. ಆದರೆ ಇದು ಸುಧಾ ಮೂರ್ತಿ ಅವರ ಆಯ್ಕೆಯಾಗಿದ್ದರೆ ನಿಮಗೆ ಏನು ಸಮಸ್ಯೆ?’ ಎಂದು ಅಭಿಷೇಕ್‌ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.