ಗೋಕರ್ಣ: ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಸಮೀಪದ ಗಂಗಾವಳಿ ನದಿಯು ಅಪಾಯದ ಮಟ್ಟ ಮೀರಿ ಹರಿದು, ಪ್ರವಾಹ ಪರಿಸ್ಥಿತಿ ಉಂಟು ಮಾಡಿತ್ತು. ಹೀಗೆ ನದಿಯಿಂದ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದು ಸ್ಥಳೀಯರೊಬ್ಬರ ಮನೆಯ ಬಳಿ ಕಾಣಿಸಿಕೊಂಡ ಮೊಸಳೆಯೊಂದನ್ನು ಕಂಡು ಇದೀಗ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.
ಗೋಕರ್ಣದ ನಾಡುಮಾಸ್ಕೇರಿ ಗ್ರಾಮದ ಶಿವು ಗೌಡ ಎಂಬುವವರ ಮನೆಯ ಬಳಿ ಮೊಸಳೆ ಬಂದಿದ್ದು, ಇದು ಮನೆಯವರಲ್ಲಿ ಭಯದ ವಾತಾವರಣ ಉಂಟು ಮಾಡಿತು.
ಗಂಗಾವಳಿ ನದಿ ತೀರವು ಅರಣ್ಯ ಪ್ರದೇಶದಿಂದ ಕೂಡಿದ್ದು, ಇದು ವನ್ಯಜೀವಿಗಳ ವಾಸಸ್ಥಾನವಾಗಿದೆ. ಇದೀಗ ಪ್ರವಾಹದಿಂದ ಎಲ್ಲವೂ ಊರಿನತ್ತ ಕೊಚ್ಚಿಕೊಂಡು ಬಂದಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ಪವನ ನಾಯ್ಕ ಹಾಗೂ ಅಶೋಕ ನಾಯ್ಕ ತದಡಿ, ಸ್ಥಳೀಯರ ಸಹಕಾರದಿಂದ ಮೊಸಳೆಯನ್ನ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
'ಪ್ರವಾಹದಿಂದಾಗಿ ಹಾವು, ಮೊಸಳೆ ಸೇರಿದಂತೆ ಇನ್ನಿತರ ವನ್ಯಜೀವಿಗಳು ಗ್ರಾಮಗಳತ್ತ ಬಂದಿರುವುದು ಸದ್ಯ ಸಾಮಾನ್ಯವಾಗಿರಲಿದೆ. ಹೀಗೆ ಯಾವುದೇ ವನ್ಯಜೀವಿಗಳು ಕಾಣಿಸಿಕೊಂಡಲ್ಲಿ ಭಯಗೊಳ್ಳದೆ, ತಕ್ಷಣ ನಮಗೆ ಕರೆ ಮಾಡಿ. ಸಂತ್ರಸ್ತರಿಗಾಗಿ ಯಾವುದೇ ಸಮಯದಲ್ಲೂ ನಾವು ಈ ವನ್ಯಜೀವಿಗಳನ್ನು ಸೆರೆ ಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ಕೆ ತಯಾರಿದ್ದೇವೆ' ಎಂದು ಪವನ್ ಹಾಗೂ ಅಶೋಕ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.