ADVERTISEMENT

ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು: ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ

ಯತೀಂದ್ರ ಹೇಳಿಕೆ ಎಬ್ಬಿಸಿದ ಕೋಲಾಹಲ l ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು/ಬೆಳಗಾವಿ: ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿರುವ ಹೊತ್ತಿನಲ್ಲಿ ‘ನಾಯಕತ್ವ ಬದಲಾವಣೆ’ಯ ಚರ್ಚೆಯ ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಉತ್ತರಾಧಿಕಾರಿ’ ಯಾರೆಂಬ ವಿಷಯವೂ ಭಾರಿ ಸದ್ದಿಗೆ ಕಾರಣವಾಗಿದೆ.

ಯತೀಂದ್ರ ಹೇಳಿದ್ದೇನು?

‘ನಮ್ಮ ತಂದೆ ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ. 2028ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಮ್ಮ ತಂದೆ ಹೇಳಿದ್ದಾರೆ. ಅವರ ಬಳಿಕವೂ ‘ಅಹಿಂದ’ ಬಲ ಹಾಗೂ ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ಮುನ್ನಡೆಸುವ ಸಾಮರ್ಥ್ಯ ಕೆಲವು ನಾಯಕರಲ್ಲಿದೆ. ಅವರೆಲ್ಲರನ್ನೂ ಸತೀಶ ಮುನ್ನಡೆಸಬೇಕಿದೆ’ ಎಂದು ಸಿದ್ದರಾಮಯ್ಯ ಮಗ ಡಾ. ಯತೀಂದ್ರ ಅವರು ಬುಧವಾರ ಬೆಳಗಾವಿಯಲ್ಲಿ ಹೇಳಿದ್ದರು.

ADVERTISEMENT

ನಾನು ಕೂಡ ಆಕಾಂಕ್ಷಿ: ಜಾರಕಿಹೊಳಿ

‘2028ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಾನು ಕೂಡ ಮುಖ್ಯಮಂತ್ರಿಯಾಗಲು ಬಯಸುವೆ. ಆದರೆ, ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಸತೀಶ ಜಾರಕಿಹೊಳಿ ಗುರುವಾರ ‍ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಅವರು 2028ಕ್ಕೆ ಅಧಿಕಾರ ಬಿಟ್ಟು ಕೊಟ್ಟರೂ ಅಹಿಂದ ನಾಯಕರಾಗಿ ಮುಂದುವರಿಯುವರು. ನಾನು ಕೂಡ 30 ವರ್ಷಗಳಿಂದ ಅಹಿಂದ ಪರ ಹೋರಾಡುತ್ತಿದ್ದೇನೆ. ಅಹಿಂದ ಇಲ್ಲದೇ ಸರ್ಕಾರ ರಚಿಸಲು ಆಗದು. ನಾಯಕತ್ವಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಮುಂದೆ ನೋಡೋಣ’ ಎಂದೂ ಅವರು ಹೇಳಿದರು.

‘ಸತೀಶ ಜಾರಕಿಹೊಳಿ ಅವರಲ್ಲಿ ನಾಯಕತ್ವ ಇದೆ. ಅವರು ಮುಂದೆ ಮುಖ್ಯಮಂತ್ರಿ ಆಗುವರೆಂದು ನಾನೇ ಹೇಳಿದ್ದೇನೆ. ಮುಂದಿನ ಮುಖ್ಯಮಂತ್ರಿ ಬಗ್ಗೆ ಯತೀಂದ್ರ ಅಭಿಪ್ರಾಯ ವೈಯಕ್ತಿಕವಾದದ್ದು
ಆರ್‌.ಬಿ. ತಿಮ್ಮಾಪುರ  ,ಅಬಕಾರಿ ಸಚಿವ
‘ಕಾಂಗ್ರೆಸ್‌ ಪಕ್ಷದಲ್ಲಿ ಸೈದ್ಧಾಂತಿಕವಾಗಿ ಬದ್ಧರಾದವರು ಇದ್ದಾರೆ. ಸಂವಿಧಾನ ಪರವಾಗಿ, ಮೂಢನಂಬಿಕೆ ವಿರುದ್ಧ ಸತೀಶ ಜಾರಕಿಹೊಳಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಹೀಗಾಗಿ ಯತೀಂದ್ರ ಹೇಳಿದ್ದರಲ್ಲಿ ತಪ್ಪೇನಿಲ್ಲ
ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ 
‘ಸಿ.ಎಂ ಸ್ಥಾನ ಉಲ್ಲೇಖಿಸಿ ಹೇಳಿದ್ದಲ್ಲ’
‘ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ ಜಾರಕಿಹೊಳಿ ಹೆಸರು ಹೇಳಿ ದ್ದಾರೆ, ತಪ್ಪೇನಿದೆ? ಹಿಂದೆ ಅವರು ಅಹಿಂದ ಚಳವಳಿಯಲ್ಲಿ ಇದ್ದರು. ಅವರಿಗೆ ಬದ್ಧತೆ ಇದೆ ಎಂದು ಹೆಸರು ಹೇಳಿರಬಹುದು. ಮುಖ್ಯಮಂತ್ರಿ ಸ್ಥಾನ ಉಲ್ಲೇಖಿಸಿ ಆ ಹೇಳಿಕೆ ನೀಡಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ‘ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಾಗ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್​ಪಿ) ಸಭೆಯನ್ನು ಹೈಕಮಾಂಡ್‌ನವರು ಕರೆಯುತ್ತಾರೆ. ಅಲ್ಲಿ ಶಾಸಕರ ಅಭಿಪ್ರಾಯ ಪಡೆದ ವೀಕ್ಷಕರು ಹೈಕಮಾಂಡ್​ಗೆ ವರದಿ ಕೊಡುತ್ತಾರೆ. ಆ ನಂತರ ಯಾರು, ಏನು ಎನ್ನುವುದು ಘೋಷಿಸಲಾಗುತ್ತದೆ. ಇದು ನಮ್ಮಲ್ಲಿರುವ ಪದ್ಧತಿ’ ಎಂದರು.

‘ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ’

‘ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾವು ಯಾರೂ ಹಕ್ಕು ಪ್ರತಿಪಾದಿಸಬೇಕಾಗಿಲ್ಲ. ಹಾಗಂತ ಯಾರೂ ಸನ್ಯಾಸಿಗಳಲ್ಲ ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ಯತೀಂದ್ರ ಯಾವ ಅರ್ಥದಲ್ಲಿ ಹೇಳಿದ್ದಾರೊ. ಸಿದ್ದರಾಮಯ್ಯ ಅವರದ್ದು ಕೊನೆಯ ಚುನಾವಣೆ ಆಗಿರಬಹುದು, ಮುಂದೆಯೂ ಅವರ ನಾಯಕತ್ವ ಅಗತ್ಯವಿದೆ. ಸಿದ್ದರಾಮಯ್ಯ ಅವರನ್ನು ಬಿಟ್ಟು ಮಾಡಲು ಆಗಲ್ಲ’ ಎಂದರು.

‘ಅವರು (ಸತೀಶ ಜಾರಕಿಹೊಳಿ) ಪ್ರಮುಖ ನಾಯಕರು. ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಅವರಿಗಿದೆ. 2028ಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದರೆ ತಪ್ಪೇನಿದೆ? ಆ ಸ್ಥಾನಕ್ಕೆ ಎಲ್ಲರೂ ಸಮರ್ಥರಿದ್ದಾರೆ’ ಎಂದರು.

‘ನಾವು ಹೇಳಿಕೆ ಕೊಟ್ರೆ ನೋಟಿಸ್‌’

‘ಸಿ.ಎಂ ಬದಲಾವಣೆ ಕುರಿತು ನಾವೇನಾದರೂ ಹೇಳಿಕೆ ಕೊಟ್ಟರೆ ನೋಟಿಸ್ ಕೊಡುತ್ತಾರೆ. ಅಂದರೆ ನಾವು ಮಾಡಿದರೆ ಬಲಾತ್ಕಾರ, ಬೇರೆಯವರು ಮಾಡಿದರೆ ಚಮತ್ಕಾರ ಅನ್ನುವ ಪರಿಸ್ಥಿತಿಯಿದೆ’ ಎಂದು ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.

‘ದೊಡ್ಡ ಮನೆತನದ ದೊಡ್ಡ ಸ್ಥಾನದಲ್ಲಿರುವ ಯತೀಂದ್ರ ಅವರು, ತಾವಾಗೇ ಕೆಳಗೆ ಬೀಳೋದು ನಮಗಿಷ್ಟವಿಲ್ಲ. ಈ ರೀತಿ ಹೇಳಿಕೆ ನೀಡದೆ ತಿದ್ದಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದೂ ಹೇಳಿದರು.

‘ಸಿ.ಎಂ ಧ್ವನಿಯಂತೆ ಬಿಂಬಿಸಬಾರದು’
‘ಯತೀಂದ್ರ ಅವರ ಮಾತುಗಳನ್ನು ಮುಖ್ಯಮಂತ್ರಿಯ ಧ್ವನಿ ಎಂಬಂತೆ ಬಿಂಬಿಸುವುದು ಸರಿಯಲ್ಲ. ಈಗಾಗಲೇ ಯತೀಂದ್ರ ಅವರೇ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ’ ಎಂದು ಅರಣ್ಯ ಸಚಿವಈಶ್ವರ ಖಂಡ್ರೆ ಹೇಳಿದರು. ‘ಯಾವುದೇ ಜಾತಿ, ಮತ, ಧರ್ಮದ ಆಧಾರದ ಮೇಲೆ ನಾಯಕತ್ವ ನಿರ್ಧಾರ ಆಗುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.