ಬೆಂಗಳೂರು: ‘ನೆರೆಗೆ ತುತ್ತಾಗಿರುವ ರಾಜ್ಯಕ್ಕೆ ಪರಿಹಾರ ನೀಡುವ ಬದಲು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಪ್ರಚಾರ ಮಾಡುವುದೇಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮುಖ್ಯ ವಾಗಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ನೆರೆ ಹಾವಳಿಯಿಂದ ಉಂಟಾಗಿರುವ ಸಮಸ್ಯೆ ಪ್ರಸ್ತಾಪಿಸಿಲ್ಲ. ಕಳಸಾ ಬಂಡೂರಿ ಯೋಜನೆ ಬಗ್ಗೆಯೂ ಚಕಾರವೆತ್ತಿಲ್ಲ. ರಾಜ್ಯದ ವಿಚಾರಗಳಿಗೆ ಸ್ಪಂದಿಸಿಲ್ಲ.ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲವಾಗಿದ್ದು, ಕೇವಲ ಸಿಎಎ ಪರ ಪ್ರಚಾರ ಮಾಡಿದ್ದಾರೆ. ಮತಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯಕ್ಕೆ ಬಂದಿದ್ದರು’ ಎಂದು ಆರೋಪಿಸಿದರು.
‘ನೆರೆ ಪರಿಹಾರ, ಕಳಸಾ ಬಂಡೂರಿ ವಿಚಾರಗಳನ್ನು ಮುಖ್ಯಮಂತ್ರಿ ಅವರಾದರೂ ಪ್ರಸ್ತಾಪಿಸಬೇಕಿತ್ತು. ಅದನ್ನೂ ಮಾಡಿಲ್ಲ’ ಎಂದರು.
‘ಸಿಎಎಗೆ ದಲಿತ ವಿರೋಧಿ ಗಳಿಂದಲೇ ವಿರೋಧ ವ್ಯಕ್ತವಾಗುತ್ತಿದೆ’ ಎಂಬ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಬಿಜೆಪಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಭಾವನಾತ್ಮಕವಾಗಿ ಪ್ರಚೋದಿಸಲು ಇಂಥ ಹೇಳಿಕೆ ನೀಡುತ್ತಿದ್ದು, ಇವರ ತತ್ವ, ಚಿಂತನೆಗಳಲ್ಲಿ ದಲಿತರ ಬಗ್ಗೆ ಸ್ವಲ್ಪ ವಾದರೂ ಚಿಂತಿಸಿದ್ದರೆ ಇಷ್ಟೊಂದು ಶೋಷಣೆ ಆಗುತ್ತಿರಲಿಲ್ಲ’ ಎಂದರು.
ಹೈಕಮಾಂಡ್ ನಿರ್ಧಾರ: ವಿಧಾನಸಭೆ ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಇಬ್ಬರಿಗೆ ಹಂಚಿಕೆ ಮಾಡುವುದು, ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದರು. ನಾಲ್ವರು ಕಾರ್ಯಾಧ್ಯಕ್ಷರ ನೇಮಕ್ಕೆ ಸಿದ್ದರಾಮಯ್ಯ ಬೇಡಿಕೆ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.