ಈಶ್ವರ ಖಂಡ್ರೆ
ಬೆಂಗಳೂರು: ‘ವೀರಶೈವ–ಲಿಂಗಾಯತ ಧರ್ಮ ಎಂದು ಧರ್ಮದ ಕಾಲಂನಲ್ಲಿ ಬರೆಯಿಸಬೇಕು ಎಂಬುದು ಮಹಾಸಭಾ ನಿಲುವು. ಆದರೆ, ಧರ್ಮದ ಕಾಲಂನಲ್ಲಿ ಸರ್ಕಾರ ಗುರುತಿಸಿದ ಧರ್ಮಗಳು ಮಾತ್ರ ಇರುವ ಕಾರಣ ವೀರಶೈವ ಲಿಂಗಾಯತರು ತಮ್ಮ ವಿವೇಚನೆ, ಆತ್ಮಸಾಕ್ಷಿಯಂತೆ ತಮ್ಮ ಧರ್ಮದ ಹೆಸರು ಬರೆಯಿಸಬಹುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ವೀರಶೈವ–ಲಿಂಗಾಯತರು ಪ್ರತ್ಯೇಕ ಧರ್ಮಕ್ಕಾಗಿ ಹಿಂದಿನಿಂದಲೂ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ, ಪ್ರಸ್ತಾವನೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಸಮುದಾಯಕ್ಕೆ ಜಾಗತಿಕ ಬೆಂಬಲ ಸಿಗಬೇಕು. ಅಲ್ಲಿಯವರೆಗೂ ನಮ್ಮ ನಿಲುವು ಬದಲಾಗದು. ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಪ್ರಯತ್ನ ಮುಂದುವರಿಸಲಾಗುವುದು’ ಎಂದರು.
‘ವೀರಶೈವ–ಲಿಂಗಾಯತ ಎರಡೂ ಬೇರೆಯಲ್ಲ, ಒಂದೇ ಎನ್ನುವುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿಲುವಾಗಿದೆ. ಸಿದ್ದಗಂಗಾ ಮಹಾಸಂಸ್ಥಾನದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರೂ ಈ ಕುರಿತು ಖಚಿತ ನಿಲುವು ಹೊಂದಿದ್ದರು. ಶುಕ್ರವಾರ ಹುಬ್ಬಳ್ಳಿಯಲ್ಲಿ ಮಠಾಧಿಪತಿಗಳ ಒಕ್ಕೂಟ ಆಯೋಜಿಸಿದ್ದ ಏಕತಾ ಸಮಾವೇಶದಲ್ಲೂ ಇದಕ್ಕೆ ಸಹಮತ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಎಲ್ಲರೂ ಸಹಕಾರ ನೀಡಲಿದ್ದಾರೆ. ಜಾತಿಯ ಕಾಲಂನಲ್ಲಿ ವೀರಶೈವ–ಲಿಂಗಾಯತ ಬಳಸಬೇಕು. ನಂತರ ಅವರವರ ಉಪ ಜಾತಿ ಬರೆಸಬಹುದು’ ಎಂದು ಸಲಹೆ ನೀಡಿದರು.
‘ಎಲ್ಲಾ ಜಾತಿಗಳಲ್ಲೂ ಬಡವರು ಇದಾರೆ. ಸಮಾಜದಲ್ಲಿ ಇರುವ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು. ಅದೇ ಉದ್ದೇಶಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ರಾಜ್ಯದ ಎಲ್ಲ 7 ಕೋಟಿ ಜನರಿಗೂ ತೃಪ್ತಿಯಾಗುವ ರೀತಿಯಲ್ಲಿ ಸಮೀಕ್ಷೆ ನಡೆಯಲಿದೆ. ವೀರಶೈವ ಲಿಂಗಾಯತ ಮಹಾಸಭಾ ವಿಸರ್ಜನೆ ಮಾಡಬೇಕು ಎಂದು ಅಸಂಬದ್ಧ ಹೇಳಿಕೆ ನೀಡಿರುವವರಿಗೆ ಉತ್ತರ ನೀಡುವುದಿಲ್ಲ. ಅವರಿಗೆ ಯಾವುದೇ ಅಸ್ತಿತ್ವ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.