ಬೆಂಗಳೂರು: ಶ್ರೀನಗರದ ಮನೆಯೊಂದರಿಂದ ಕಳುವಾಗಿದ್ದ ಶ್ವಾನ ಭಾನುವಾರ ಪತ್ತೆಯಾಗಿದೆ. ಆದರೆ, ಶ್ವಾನದ ಮಾಲೀಕರು ಈ ಹಿಂದೆ ಹೇಳಿದಂತೆ ಅದರ ಬೆಲೆ ₹8 ಕೋಟಿಯಲ್ಲ. ಬದಲಾಗಿ ₹2 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
‘ಚೀನಾದ ಅಲಸ್ಕನ್ ಮಾಲಮ್ಯೂಟ್ ತಳಿಗೆ ಸೇರಿದ್ದ ಶ್ವಾನವನ್ನು ಇದೇ 12ರಂದು ಮನೆಯ ಕಾಂಪೌಂಡ್ನಲ್ಲಿ ಕಟ್ಟಿ ಹಾಕಲಾಗಿತ್ತು. ಶ್ವಾನವನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು, ಅವರನ್ನು ಪತ್ತೆ ಮಾಡಿ’ ಎಂದು ಎನ್.ಚೇತನ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
‘ಕೆಂಪು ಮತ್ತು ಬಿಳಿ ಬಣ್ಣದ ಶ್ವಾನಕ್ಕೆ 3 ವರ್ಷ ಆಗಿತ್ತು. ಅದರ ಮಾರುಕಟ್ಟೆ ಮೌಲ್ಯ₹ 8 ಕೋಟಿ ಮೌಲ್ಯ ಆಗಿತ್ತು. ಈ ನಾಯಿಯನ್ನು ಹುಡುಕಿ ಕೊಟ್ಟವರಿಗೆ ₹ 1 ಲಕ್ಷ ಬಹುಮಾನ ನೀಡಲಾಗುವುದು’ ಎಂದೂ ಮಾಲೀಕರು ಘೋಷಿಸಿದ್ದರು.
ಹನುಮಂತನಗರ ಪೊಲೀಸರು, ‘ಶ್ವಾನ ಕಳುವಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು.ಸದ್ಯ ನಾಯಿ ಪತ್ತೆಯಾಗಿದ್ದು, ಮಾಲೀಕರಿಗೆ ಒಪ್ಪಿಸಲಾಗಿದೆ.
ಶ್ವಾನದ ಬೆಲೆಯಲ್ಲಿ ಭಾರಿ ಕುಸಿತ
ಆರಂಭದಲ್ಲಿ ನಾಯಿಯ ಬೆಲೆ ₹8 ಕೋಟಿ ಎಂದು ದೂರು ದಾರರು ಹೇಳಿದ್ದರು. ಆದರೆ, ಅದರ ಬೆಲೆ ಕೇವಲ 2 ಲಕ್ಷ ಮಾತ್ರ ಎಂದು ಮಾಲೀಕ ಚೇತನ್ ಸ್ಪಷ್ಟಪಡಿಸಿದ್ದಾರೆ. ನಾಯಿಯನ್ನು ನನಗೆ ಮಾರಾಟ ಮಾಡಿದ್ದವರು ಇದರ ಮೌಲ್ಯ8 ಕೋಟಿ ಎಂದು ಹೇಳಿದ್ದರು. ಅದನ್ನೇ ನಾನು ದೂರಿನಲ್ಲಿ ಉಲ್ಲೇಖಿಸಿದ್ದೆ. ಆದರೆ, ಅದರ ಮೌಲ್ಯ 2 ಲಕ್ಷ ಎಂದು ಗೊತ್ತಾಗಿದೆ ಎಂದು ಮಾಲೀಕ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.