
ಭಾರತ– ಬಾಂಗ್ಲಾ (ಪ್ರಾತಿನಿಧಿಕ ಚಿತ್ರ)
ಢಾಕಾ: ‘ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅವಾಮಿ ಲೀಗ್ ಮತ್ತು ಶೇಖ್ ಹಸೀನಾ ಇಂದಿನ ಬಾಂಗ್ಲಾದಲ್ಲಿ ಇಲ್ಲ. ಭಾರತವು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಲಾಭಕ್ಕಾಗಿ ಹೊಸ ಹೆಜ್ಜೆಗಳೊಂದಿಗೆ, ಹೊಸ ಸಂಬಂಧವನ್ನು ಆರಂಭಿಸಲು ನಾವು ತಯಾರಿದ್ದೇವೆ’ ಎಂದು ಬಿಎನ್ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರ ಸಲಹೆಗಾರ ಹುಮಾಯುನ್ ಕಬೀರ್ ಅಭಿಪ್ರಾಯಪಟ್ಟರು.
‘ಪಿಟಿಐ’ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಬಿಎನ್ಪಿಗೆ ಸಿಕ್ಕ ಅಭೂತಪೂರ್ವ ಗೆಲುವನ್ನು ಭಾರತ ಮನಗಾಣಬೇಕು. ದೇಶದ ಬದಲಾವಣೆಯನ್ನು ಸ್ವೀಕರಿಸಿ ಅದನ್ನು ಒಪ್ಪಿಕೊಳ್ಳುವುದು ಭಾರತದ ಹೊಣೆಗಾರಿಕೆ’ ಎಂದರು.
ಹಸೀನಾ ಅವರನ್ನು ಬಾಂಗ್ಲಾಗೆ ವಾಪಸು ಕಳುಹಿಸಿಕೊಡುವ ವಿಚಾರದ ಕುರಿತು ಪ್ರಕ್ರಿಯಿಸಿ, ‘ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವಂಥ ಚುಟುವಟಿಕೆಗಳಿಗೆ ಭಾರತವು ತನ್ನ ನೆಲದಲ್ಲಿ ಅವಕಾಶ ನೀಡಬಾರದು. ಇದು ಸಾಧ್ಯವಾಗದ ಹೊರತು, ಭಾರತದೊಂದಿಗೆ ಸಹಜವಾದ ರಾಜತಾಂತ್ರಿಕ ಸಹಕಾರ ಅಸಾಧ್ಯ’ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ತಾರಿಕ್ ಅವರನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿ, ‘ತಾರಿಕ್ ಅವರು ಮೊದಲು ದೇಶದ ಸಮೃದ್ಧಿ, ಆರ್ಥಿಕ ಭದ್ರತೆಗೆ ಕಡೆಗೆ ಒತ್ತು ನೀಡಲಿದ್ದಾರೆ. ಈ ಎಲ್ಲವೂ ಒಂದು ಹಂತಕ್ಕೆ ಬಂದ ನಂತರವೇ ಅವರು ವಿದೇಶ ಭೇಟಿ ಆರಂಭಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.