ADVERTISEMENT

ಭಾರತದಿಂದ ಪರಿಹಾರ ಸಾಮಗ್ರಿ ಒಳಗೊಂಡ ನಾಲ್ಕು ವಿಮಾನ ಟರ್ಕಿಗೆ ರವಾನೆ

ಪಿಟಿಐ
Published 8 ಫೆಬ್ರುವರಿ 2023, 2:22 IST
Last Updated 8 ಫೆಬ್ರುವರಿ 2023, 2:22 IST
ಚಿತ್ರ ಕೃಪೆ: Twitter/@MEAIndia
ಚಿತ್ರ ಕೃಪೆ: Twitter/@MEAIndia   

ನವದೆಹಲಿ: ಭೂಕಂಪ ಪೀಡಿತ ಟರ್ಕಿಗೆ ನೆರವಿನ ಹಸ್ತ ಚಾಚಿರುವ ಭಾರತ, ಅಗತ್ಯ ವೈದ್ಯಕೀಯ, ಪರಿಹಾರ ಸಾಮಗ್ರಿ ಸೇರಿದಂತೆ ಭಾರತೀಯ ವಾಯುಪಡೆಯ ಬೃಹತ್ ಗಾತ್ರದ ನಾಲ್ಕು ಸಿ-17 ಗ್ಲೋಬ್‌ಮಾಸ್ಟರ್ ಮಿಲಿಟರಿ ಸರಕು ಸಾಗಾಟದ ವಿಮಾನಗಳನ್ನು ಟರ್ಕಿಗೆ ರವಾನಿಸಿದೆ.

ಇದೇ ವೇಳೆ ಆರು ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಮತ್ತೊಂದು ಸಿ-130 ಜೆ ವಿಮಾನ ಸಿರಿಯಾಕ್ಕೆ ತೆರಳಿದೆ.

ಭೂಕಂಪ ಸಂತ್ರಸ್ತರ ನೆರವಿಗೆ ಔಷಧಿ, ಪರಿಹಾರ ಸಾಮಗ್ರಿ, ಸಂಚಾರಿ ಆಸ್ಪತ್ರೆ ಹಾಗೂ ವಿಶೇಷ ರಕ್ಷಣಾ ಕಾರ್ಯಾಚರಣೆಯ ತಂಡವನ್ನು ಕಳುಹಿಸಲಾಗಿದೆ.

ಈ ಸಂಕಷ್ಟದ ಸಮಯದಲ್ಲಿ ಟರ್ಕಿ ಮತ್ತು ಸಿರಿಯಾದೊಂದಿಗೆ ಭಾರತ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಪ್ರತ್ಯೇಕ ಟ್ವೀಟ್‌ಗಳಲ್ಲಿ ಬೆಂಬಲ ಸೂಚಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಶೋಧ ಮತ್ತು ರಕ್ಷಣಾ ಪರಿಣತರು, ಶ್ವಾನದಳ ಹಾಗೂ ರಕ್ಷಣಾ ಸಲಕರಣೆ ಒಳಗೊಂಡ ವಿಶೇಷ ತಂಡ ಈಗಾಗಲೇ ಟರ್ಕಿ ತಲುಪಿದೆ.

ಈ ಮೊದಲು ಭೂಕಂಪ ಪೀಡಿತ ಟರ್ಕಿಗೆ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋಧಿ ಭರವಸೆ ನೀಡಿದ್ದರು.

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 7,200ಕ್ಕೆ ಏರಿಕೆಯಾಗಿದೆ. ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚುವ ಭೀತಿ ಹೆಚ್ಚಿದೆ. ರಕ್ಷಣಾ ಕಾರ್ಯ ಜಾರಿಯಲ್ಲಿದ್ದು, ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳು ನೆರವು ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.