ಜೆರುಸಲೇಂ: ಹಮಾಸ್ ಬಂಡುಕೋರರು ಮತ್ತಷ್ಟು ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡದಿದ್ದರೆ ಕದನವಿರಾಮ ಒಪ್ಪಂದದಿಂದ ಹಿಂದೆ ಸರಿದು, ಹಮಾಸ್ ವಿರುದ್ಧ ಮತ್ತೆ ಯುದ್ಧ ಆರಂಭಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಹಮಾಸ್ ವಿರುದ್ಧ ಮತ್ತೆ ಯುದ್ಧ ನಡೆಸುವುದಕ್ಕೆ ಸಜ್ಜಾಗಿರುವಂತೆ ಸೇನಾ ಪಡೆಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.
ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿರುವ ಹಮಾಸ್, ಇಸ್ರೇಲ್ನ ಮೂವರು ಒತ್ತೆಯಾಳುಗಳ ಬಿಡುಗಡೆಯನ್ನು ವಿಳಂಬಗೊಳಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಮಂಗಳವಾರ ಹೇಳಿತ್ತು.
ಶನಿವಾರ ನಿಗದಿಯಾಗಿರುವ ಮೂವರು ಒತ್ತೆಯಾಳುಗಳ ಬಿಡುಗಡೆಯನ್ನು ಅಥವಾ ಎಲ್ಲ ಒತ್ತೆಯಾಳುಗಳ ಬಿಡುಗಡೆಯನ್ನು ಉಲ್ಲೇಖಿಸಿ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆಯೇ ಎಂಬುವುದು ಸ್ಪಷ್ಟವಾಗಿಲ್ಲ.
ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಅವರ ಜೊತೆ ಶ್ವೇತಭವನದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಟ್ರಂಪ್ ‘ಹಮಾಸ್ ನಿಗದಿತ ಗಡುವಿನೊಳಗೆ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುತ್ತದೆ ಎಂಬ ನಂಬಿಕೆ ನನಗಿಲ್ಲ. ಅವರು ಕಠಿಣವಾಗಿ ವರ್ತಿಸಲು ಬಯಸುತ್ತಿದ್ದಾರೆ. ಅವರು ಎಷ್ಟು ಕಠಿಣವಾಗಿ ವರ್ತಿಸುತ್ತಾರೆಂದು ನೋಡೋಣ’ ಎಂದರು.
ಶನಿವಾರದೊಳಗೆ 70 ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಇಸ್ರೇಲ್ ಕದನವಿರಾಮವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ. ‘ಒಪ್ಪಂದವನ್ನು ಎರಡು ಕಡೆಯವರು ಗೌರವಿಸಬೇಕು ಎಂಬುವುದನ್ನು ಟ್ರಂಪ್ ಅರ್ಥಮಾಡಿಕೊಳ್ಳಬೇಕು. ಕೈದಿಗಳನ್ನು ಮರಳಿ ಕರೆತರಲು ಅದೊಂದೆ ದಾರಿ. ಬೆದರಿಕೆಯಿಂದ ಯಾವುದೇ ಉಪಯೋಗವಿಲ್ಲ. ಇದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುತ್ತದೆ’ ಎಂದು ಹಮಾಸ್ ವಕ್ತಾರರು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.