ADVERTISEMENT

ನಮಗೆ ಭಯವಾಗುತ್ತಿದೆ...ಇಲ್ಲೇ ಸಾಯುತ್ತೇವೆ: ಇರಾನ್‌ನಲ್ಲಿ ಹೆಚ್ಚಿದ ಭೀತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 14:48 IST
Last Updated 28 ಫೆಬ್ರುವರಿ 2026, 14:48 IST
<div class="paragraphs"><p>ಅಮೆರಿಕ–ಇಸ್ರೇಲ್‌ ದಾಳಿಯ ನಡುವೆಯೇ ಟೆಹರಾನ್‌ನ ಅಂಗಡಿಯೊಂದರಲ್ಲಿ ಜನರು ಆಹಾರ ಪದಾರ್ಥಗಳ ಖರೀದಿಗೆ ಮುಗಿಬಿದ್ದಿದ್ದರು.</p></div>

ಅಮೆರಿಕ–ಇಸ್ರೇಲ್‌ ದಾಳಿಯ ನಡುವೆಯೇ ಟೆಹರಾನ್‌ನ ಅಂಗಡಿಯೊಂದರಲ್ಲಿ ಜನರು ಆಹಾರ ಪದಾರ್ಥಗಳ ಖರೀದಿಗೆ ಮುಗಿಬಿದ್ದಿದ್ದರು.

   

ದುಬೈ: ‘ನಮಗೆ ಭಯವಾಗುತ್ತಿದೆ. ಮಕ್ಕಳು ಬೆದರುತ್ತಿದ್ದಾರೆ. ಬೇರೆಲ್ಲಿಗೋ ಹೋಗಲು ನಮಗೆ ಜಾಗವೂ ಇಲ್ಲ. ನಾವು ಇಲ್ಲೇ ಸಾಯುತ್ತೇವೆ’. ಇದು ಇರಾನ್‌ ಮೇಲೆ ಅಮೆರಿಕ–ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಕಂಡು ಭಯಭೀತರಾಗಿರುವ ಇರಾನ್‌ ಜನರ ಆತಂಕ ಭರಿತ ಮಾತುಗಳು. 

ಕ್ಷಿಪಣಿ ದಾಳಿಯಿಂದ ಇರಾನ್‌ನ ರಾಜಧಾನಿ ಟೆಹರಾನ್‌ ತತ್ತರಿಸಿರುವಾಗಲೇ ಇತ್ತ ಬೇರೆ ಪ್ರದೇಶಗಳಲ್ಲಿಯೂ ಆತಂಕದ ವಾತಾವರಣ ಸೃಷ್ಟಿಯಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳನ್ನು ಹುಡುಕುತ್ತಾ ಊರಾಚೆಗೆ ಜನರು ದೌಡಾಯಿಸುತ್ತಿದ್ದಾರೆ. 

ADVERTISEMENT

ಕ್ಷಿಪಣಿಗಳು ಅಪ್ಪಳಿಸಿದ ಕಟ್ಟಡಗಳು ಬೆಂಕಿಯಿಂದ ಹೊತ್ತು ಉರಿದು ಹೊಗೆ ಆಕಾಶದತ್ತೆರಕ್ಕೆ ಆವರಿಸುತ್ತಿರುವುದು ಒಂದೆಡೆಯಾದರೆ, ಶಾಲೆಗೆ ತೆರಳಿದ ಮಕ್ಕಳನ್ನು ಕರೆದುಕೊಂಡು ಬರಲು ಪೋಷಕರು ಓಡುತ್ತಾ, ನಮ್ಮ ಮಕ್ಕಳಿಗೆ ಏನಾಗುವುದು ಎಂದು ಆತಂಕದಲ್ಲಿ ಮಾಧ್ಯಮಗಳ ಎದುರೇ ದುಃಖಿಸುತ್ತಿದ್ದಾರೆ.

‘ನಾವು ಸಂಸಾರ ಸಮೇತ ನಗರ ತೊರೆಯುತ್ತಿದ್ದೇವೆ. ಟರ್ಕಿ ಗಡಿಯಲ್ಲಿ ಪ್ರವೇಶ ಮುಕ್ತಗೊಳಿಸಿದರೆ ಇಸ್ತಾನ್‌ಬುಲ್‌ಗೆ ತೆರಳಿಬಿಡುತ್ತೇವೆ’ ಎಂದು ಟೆಹರಾನ್‌ ನಿವಾಸಿ ಮೊಹಮ್ಮದ್‌ ಇಸ್ಮಾಯಿಲ್‌ ಹೇಳಿದ್ದಾರೆ.

ಮೂವರು ಮಕ್ಕಳ ತಾಯಿಯೊಬ್ಬರು ಮಾತನಾಡಿ, ‘ದಾಳಿ ನೋಡಿ ಜನರು ಭಯಭೀತರಾಗಿದ್ದಾರೆ. ಮುಂದೆ ನಮಗೆ ಏನು ಆಗಲಿದೆ? ದಯವಿಟ್ಟು ನಮ್ಮನ್ನು ಕಾಪಾಡಿ’ ಎಂದು ಮಾಧ್ಯಮಗಳ ಎದುರೇ ಅಂಗಲಾಚಿದ್ದಾರೆ.

ಎಟಿಎಂಗಳ ಮುಂದೆ ಸಾಲು:

ದಾಳಿ ಎಷ್ಟು ದಿನ ಮುಂದುವರಿಯಲಿದೆ? ಮುಂದಿನ ಪರಿಸ್ಥಿತಿ ಏನೋ ಎನ್ನುವಂಥ ಆತಂಕದಲ್ಲೇ ಇರಾನಿಯನ್ನರು ಭವಿಷ್ಯದ ಸಿದ್ಧತೆಗಳಿಗೆ ಮುಂದಾಗಿದ್ದಾರೆ. ಕೆಲವರು ಅಂಗಡಿಗಳಿಗೆ ತೆರಳಿ ಆಹಾರ ಪದಾರ್ಥಗಳ, ದವಸ –ಧಾನ್ಯಗಳ ಖರೀದಿಯಲ್ಲಿ ತೊಡಗಿದ್ದಾರೆ. ಎಟಿಎಂನಿಂದ ಹಣ ಪಡೆಯಲು ನಿಂತವರ ಸಾಲೂ ದೊಡ್ಡದಾಗಿದ್ದು, ಹಲವು ಎಟಿಎಂಗಳಲ್ಲಿ ನಗದು ಲಭ್ಯವಾಗುತ್ತಿಲ್ಲ ಎಂದೂ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಬಾಂಬ್‌ ಹಾಕಲಿ ಬಿಡಿ...’ 

ಇರಾನ್‌ ಮೇಲೆ ಅಮೆರಿಕ–ಇಸ್ರೇಲ್‌ ದಾಳಿ ನಡೆಸುತ್ತಿರುವುದಕ್ಕೆ ಇರಾನ್ ಆಡಳಿತವೇ ಕಾರಣ ಎಂದು ಅನೇಕರು ಹೇಳುತ್ತಿದ್ದಾರೆ. ಮಾಧ್ಯಮಗಳ ಎದುರೇ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಯಾಜ್ಜ್‌ನ ನಿವಾಸಿಯೊಬ್ಬರು ಮಾತನಾಡಿ ‘ಈ ಆಡಳಿತವನ್ನು ಕೊನೆಗೊಳಿಸಲು ಅವರು ಬಾಂಬ್‌ ಹಾಕಲಿ ಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಪರಮಾಣು ವಿಚಾರದ ಮಾತುಕತೆಗಳು ಉತ್ತಮವಾಗಿ ನಡೆಯುತ್ತಿದೆ ಎಂದು ಸರ್ಕಾರ ಹೇಳಿತ್ತು. ಮತ್ತೆ ನಮ್ಮನ್ನು ಮೂರ್ಖರನ್ನಾಗಿ ಮಾಡಿಬಿಟ್ಟಿತು’ ಎಂದು ಟೆಹರಾನ್‌ ನಿವಾಸಿಯೊಬ್ಬರು ಬೇಸರದ ಮಾತುಗಳನ್ನಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.