ADVERTISEMENT

ಯುಎನ್‌ಎಸ್‌ಸಿ ನಿರ್ಣಯ: ಉಕ್ರೇನ್ ಪರವಾಗಿ ಭಾರತ ಮತ ಚಲಾಯಿಸಬೇಕಿತ್ತು- ಕಾಂಗ್ರೆಸ್

ಐಎಎನ್ಎಸ್
Published 26 ಫೆಬ್ರುವರಿ 2022, 7:51 IST
Last Updated 26 ಫೆಬ್ರುವರಿ 2022, 7:51 IST
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ   

ನವದೆಹಲಿ: ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ನಿರ್ಣಯದಿಂದ ದೂರವಿರಲು ನಿರ್ಧರಿಸಿರುವ ಭಾರತದ ಕ್ರಮವನ್ನು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟೀಕಿಸಿದ್ದಾರೆ. ಭಾರತವು ಉಕ್ರೇನ್‌ ಪರವಾಗಿ ನಿರ್ಣಯವನ್ನು ಬೆಂಬಲಿಸಬೇಕಿತ್ತು ಎಂದು ಹೇಳಿದ್ದಾರೆ.

'ರಾಷ್ಟ್ರಗಳು ಒಂದಾಗಿ ನಿಲ್ಲುವ ಸಮಯ ಬರುತ್ತದೆ, ಅದು ಬಂದಾಗ ಹಿಂದೆ ಸರಿಯಬಾರದು. ನ್ಯಾಯಸಮ್ಮತವಲ್ಲದ ಆಕ್ರಮಣಶೀಲತೆಯನ್ನು ಎದುರಿಸುತ್ತಿರುವ ಉಕ್ರೇನ್ ಜನರ ಪರವಾಗಿ ಭಾರತವು ಯುಎನ್‌ಎಸ್‌ಸಿಯಲ್ಲಿ ಮತ ಚಲಾಯಿಸಬೇಕೆಂದು ಬಯಸುತ್ತೇನೆ. ಸ್ನೇಹಿತರು ತಪ್ಪು ಮಾಡಿದಾಗ ಅವರಿಗೆ ತಿಳಿ ಹೇಳಬೇಕು' ಎಂದು ಒತ್ತಾಯಿಸಿದ್ದಾರೆ.

'ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಭಾರತ ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಆಡಳಿತ ಬದಲಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ನೀವು 'ಸ್ನೇಹಿತರಿಗೆ' ಹೇಳಬೇಕಾದ ಸಮಯ ಬರುತ್ತದೆ. ಸಮಸ್ಯೆಗಳ ಬಗ್ಗೆ ಸರಳವಾಗಿ ಮಾತನಾಡುವ ಮೂಲಕ ಭಾರತದ ಅಂತರರಾಷ್ಟ್ರೀಯ ಸಂಬಂಧಗಳ ನಡವಳಿಕೆಯನ್ನು ನಿರೂಪಿಸಬೇಕು' ಎಂದಿದ್ದಾರೆ.

ADVERTISEMENT

'ವಿದೇಶಿ ನೀತಿಯ ನಿಲುವಿನ ಬಗ್ಗೆ ಹಿಂದಿನ ಸರ್ಕಾರಗಳನ್ನು ಟೀಕಿಸಿದ ಅವರು, 'ಈ ಹಿಂದೆ ಸೋವಿಯತ್ ಒಕ್ಕೂಟದೊಂದಿಗೆ ಮಾಡಿದ ತಪ್ಪನ್ನು ನಾವು ಮತ್ತೊಮ್ಮೆ ಮಾಡಬಾರದು. 1956ರಲ್ಲಿ ಹಂಗೇರಿ ಮೇಲೆ, 1968ರ ಜೆಕೊಸ್ಲೊವಾಕಿಯಾ, 1979ರ ಅಫ್ಘಾನಿಸ್ತಾನದ ಮೇಲಿನ ಆಕ್ರಮಣವನ್ನು ನಾವು ಖಂಡಿಸಲಿಲ್ಲ. ಹೀಗಾಗಿ, 21ನೇ ಶತಮಾನದಲ್ಲಿ ನೀವು ಬಲದಿಂದ ಯಥಾಸ್ಥಿತಿಯನ್ನು ಬದಲಾಯಿಸಬಹುದೇ?' ಎಂದಿದ್ದಾರೆ.

ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದಿದ್ದು, ಪೋಲೆಂಡ್‌, ಇಟಲಿ, ಜರ್ಮನಿ, ಎಸ್ಟೋನಿಯಾ, ಲುಕ್ಸಂಬರ್ಗ್ ಮತ್ತು ನ್ಯೂಜಿಲೆಂಡ್‌ ಸೇರಿದಂತೆ 11 ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿವೆ. ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ‌, ನಿರ್ಣಯವನ್ನು ನಿರ್ಬಂಧಿಸುವ ತನ್ನ ವಿಟೊ ಅಧಿಕಾರವನ್ನು ಬಳಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.