ಸ್ಥೂಲಕಾಯದ ಸಿಬ್ಬಂದಿಯಿಂದ ಕಂಪನಿಯ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತದೆ ಎಂದು ಆಡಳಿತ ಮಂಡಳಿ ಭಾವಿಸಿತ್ತು. ಕಡ್ಡಾಯವಾಗಿ ಬೊಜ್ಜು ಕರಗಿಸಿಕೊಳ್ಳಲು ಸಿಬ್ಬಂದಿಗೆ ಸೂಚಿಸಿತ್ತು. ಕರಗಿಸಿಕೊಂಡವರಿಗೆ ಪ್ರಮೋಷನ್ ಆಫರ್ ನೀಡಿತ್ತು.
‘ಕಂಪ್ಯೂಟರ್ ಮುಂದೆ ಕುಳಿತು ಕೆಲ್ಸ ಮಾಡಿದ್ರೆ ಹೊಟ್ಟೆ ಬೆಳೆಯುತ್ತೆ ಹೊರತು ಬುದ್ಧಿ ಬೆಳೆಯುವುದಿಲ್ಲ. ಬುದ್ಧಿವಂತಿಕೆಯಿಂದಂತೂ ಸಾಧ್ಯವಿಲ್ಲ, ಬೊಜ್ಜು ಕರಗಿಸಿಯಾದರೂ ಪ್ರಮೋ ಷನ್ ಪಡೆಯಿರಿ’ ಸುಮಿ ಗಂಡನಿಗೆ ಹೇಳಿದಳು.
‘ಕೆಲಸದ ಒತ್ತಡದಿಂದಲೂ ಬೊಜ್ಜು ಬೆಳೆಯುವುದಂತೆ. ವಿಧಾನಸೌಧದಲ್ಲಿ ಶಾಸಕರು ಸಣ್ಣ ನಿದ್ರೆ ತೆಗೆಯಲು ರಿಕ್ಲೇನರ್ ಚೇರ್ ಇರುವಂತೆ ಆಫೀಸಿನಲ್ಲೂ ಅಂಥಾ ಚೇರ್ ಇದ್ದರೆ ನಾವೂ ವಿಶ್ರಾಂತಿ ಪಡೆದು ಆರೋಗ್ಯ ಕಾಪಾಡಿಕೊಳ್ಳಬಹುದಿತ್ತು’ ಅಂದ ಶಂಕ್ರಿ.
‘ಸ್ಥೂಲಕಾಯ ಜಾಗತಿಕ ಸಮಸ್ಯೆಯಾಗುತ್ತಿದೆಯಂತೆ. ಬಳಸುವ ಅಡುಗೆ ಎಣ್ಣೆಯಿಂದ ಸ್ಥೂಲಕಾಯ ಬೆಳೆದು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ ಅಂತ ಪ್ರಧಾನಿ ಮೋದಿಯೂ ಹೇಳಿದ್ದಾರೆ’.
‘ಸ್ಥೂಲಕಾಯ ತಡೆಗೆ ಸರ್ಕಾರ ಯೋಜನೆ ರೂಪಿಸಬಹುದು. ಬೊಜ್ಜಿಗೆ ವಿಮಾ ಸೌಲಭ್ಯ, ಅದನ್ನು ಕರಗಿಸಲು ಚಿಕಿತ್ಸಾ ವೆಚ್ಚ ಕೊಡಬಹುದು’.
ಸರ್ಕಾರವನ್ನು ನಂಬಿಕೊಂಡ್ರೆ ಆಗೋದಿಲ್ಲ ಎಂದು ಸುಮಿ ನಿತ್ಯ ವಾಕಿಂಗ್, ರನಿಂಗ್, ಸ್ಕಿಪಿಂಗ್ ಮಾಡಿ ಸ್ಲಿಮ್ ಆಗಲು ಗಂಡನಿಗೆ ತಾಕೀತು ಮಾಡಿದಳು. ಶಂಕ್ರಿ ದಿನಾ ಬೆವರು ಹರಿಸಿದ. ಆಹಾರ ಪಥ್ಯ ಅನುಸರಿಸಿದ. ಡೊಳ್ಳು ಹೊಟ್ಟೆ ಜಗ್ಗಲಿಲ್ಲ.
ಹೊಟ್ಟೆ ತಜ್ಞರ ಬಳಿ ಕರೆದೊಯ್ದು ಗಂಡನ ಹೊಟ್ಟೆ ತೋರಿಸಿ ಮದ್ದು ಕೊಡಿಸಿದಳು. ಯಾವ ಕಷಾಯ, ಕಸರತ್ತಿಗೂ ಗಂಡನ ಹೊಟ್ಟೆ ಕರಗಲಿಲ್ಲ. ಆದರೆ ಶಂಕ್ರಿಯ ಮನಸ್ಸು ಕರಗಿತು!
‘ಒಡಹುಟ್ಟಿದ ಹೊಟ್ಟೆ, ನನ್ನನ್ನೇ ನಂಬಿಕೊಂಡಿರುವ ಹೊಟ್ಟೆಗೆ ನಾನಲ್ಲದೆ ಇನ್ಯಾರು ಗತಿ? ಬಂಧುಬಳಗ ದೂರವಾದರೂ ಕೊನೆವರೆಗೂ ಜೊತೆ ಬಾಳುವ ಹೊಟ್ಟೆಯನ್ನು ಕರಗಿಸದೆ ಕಾಪಾಡಿಕೊಳ್ಳಬೇಕು’ ಎಂದು ಶಂಕ್ರಿ ಸಂಕಲ್ಪ ಮಾಡಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.