
ಆಗುಂಬೆ ಪರಿಸರದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಚಿಂತನೆಯಲ್ಲಿ ದೂರದೃಷ್ಟಿ ಕೊರತೆ ಇದೆ. ಪರ್ಯಾಯಗಳನ್ನು ಬಲಪಡಿಸಿದರೆ, ಸುರಂಗದ ಅಗತ್ಯ ಬೀಳದು.
ಆಗುಂಬೆ ಘಾಟಿ ವಿಸ್ತರಣೆ ಹಾಗೂ ಉದ್ದೇಶಿತ ಸುರಂಗ ಮಾರ್ಗ ಕುರಿತಂತೆ ಪರ–ವಿರೋಧದ ಚರ್ಚೆ ನಡೆಯುತ್ತಿದೆ. ಆಗುಂಬೆ ಆಸುಪಾಸಿನ ಪರಿಸರದಲ್ಲೇ ಬೆಳೆದಿರುವ ನನಗೆ, ‘ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಂತೆ’ ಎನ್ನುವ ಗಾದೆ ಯನ್ನು ಇಡೀ ಯೋಜನೆ ನೆನಪಿಸುತ್ತಿದೆ.
ಒಂದು ಕಾಲದಲ್ಲಿ ಆಗುಂಬೆ ಘಾಟಿ, ಬಯಲುಸೀಮೆ, ಮಲೆನಾಡು-ಕರಾವಳಿಯನ್ನು ಬೆಸೆಯುವ ಪ್ರಮುಖ ಕೊಂಡಿ ಯಾಗಿತ್ತು. ಈಗ, ಆಗುಂಬೆ ಘಾಟಿ ಸನಿಹದಲ್ಲೇ ಹುಲಿಕಲ್, ಕೆರೆಕಟ್ಟೆ ಘಾಟಿಗಳಿವೆ. ದುರಸ್ತಿಗೆಂದು ಆಗುಂಬೆ ಘಾಟಿಯನ್ನು ಮುಚ್ಚಿದಾಗ, ಪರ್ಯಾಯವಾಗಿ ಬಳಸುವುದು ಈ ಘಾಟಿ ಗಳನ್ನೇ. ಇವೆರಡನ್ನೂ ವಿಸ್ತರಣೆ ಮಾಡಿದರೆ, ಆಗುಂಬೆ ಘಾಟಿ ಮೇಲಿನ ವಾಹನಗಳ ಒತ್ತಡ ಕಡಿಮೆಯಾಗುತ್ತದೆ; ಪರಿಸರ ಸಂರಕ್ಷಣೆಯ ಜೊತೆಗೆ ಕೋಟಿಗಟ್ಟಲೆ ಹಣವೂ ಉಳಿತಾಯ ವಾಗುತ್ತದೆ. ಅಲ್ಲದೆ, ಕೊಲ್ಲೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಪ್ರಗತಿಯಲ್ಲಿದೆ. ನಿಶ್ಚಿತ ಅವಧಿ ಯಲ್ಲಿ ಆ ಕಾಮಗಾರಿ ಮುಗಿದರೆ, ಆಗುಂಬೆ ಘಾಟಿ ಮೇಲಿನ ಒತ್ತಡ ಇನ್ನಷ್ಟು ಕಡಿಮೆಯಾಗಿ, ಸುರಂಗ ನಿರ್ಮಾಣದ ಅಗತ್ಯವೇ ಬೀಳದು.
ಬಯಲು ಹಾಗೂ ಮಲೆಸೀಮೆಯ ಹೆಚ್ಚಿನವರು ಮಣಿಪಾಲ–ಮಂಗಳೂರಿಗೆ ಹೋಗುವುದು ಆಸ್ಪತ್ರೆಗಳ ಸಲುವಾಗಿ. ಕರಾವಳಿಯ ಆ ಸೌಲಭ್ಯ ಗಳು, ಶಿವಮೊಗ್ಗ–ತೀರ್ಥಹಳ್ಳಿ, ಚಿಕ್ಕಮಗಳೂರು–ಕೊಪ್ಪದಲ್ಲೂ ದೊರೆಯುವಂತಾದರೆ, ಘಾಟಿಯ ಸಂಚಾರ ಒತ್ತಡ ಕಡಿಮೆಯಾಗುತ್ತದೆ. ರಸ್ತೆ ವಿಸ್ತರಣೆ ಹಾಗೂ ಸುರಂಗ ಮಾರ್ಗಕ್ಕಾಗಿ ಕೋಟಿಗಟ್ಟಲೆ ಸುರಿ ಯಲು ಹೋರಾಡುವ ಅಧಿಕಾರ ಸ್ಥರು, ಅದರಲ್ಲಿ ಅರ್ಧ ಮೊತ್ತವನ್ನು ಮೂಲ ಸೌಕರ್ಯ ಸೃಷ್ಟಿಸಲು ಬಳಸಿದರೆ, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಕಲ್ಯಾಣವಾಗುವುದು ಖಂಡಿತ. ಆಗುಂಬೆ ಘಾಟಿ ವಿಸ್ತರಣೆ ಹಾಗೂ ಸುರಂಗ ನಿರ್ಮಾಣ ಕಾರ್ಯದಲ್ಲಿ ಉತ್ಸಕರಾಗಿರುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಡಿಪಿಆರ್ ಮಾಡಲು ಟೆಂಡರ್ ಕರೆಯುವಂತೆ ನೋಡಿಕೊಂಡಿರುವುದಲ್ಲದೆ, ಕೇಂದ್ರ ಸರ್ಕಾರ ₹2.33 ಕೋಟಿ ಮೀಸಲಾಗಿರಿಸುವುದರಲ್ಲಿ ಯಶಸ್ವಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.
ನಿಸರ್ಗದ ಸೊಬಗು ವೀಕ್ಷಿಸಲು ಆಗುಂಬೆ ಘಾಟಿಯ ಮೇಲೆ ಸಂಚಾರದ ಒತ್ತಡ ಹೆಚ್ಚಾಗುವುದು ವರ್ಷದಲ್ಲಿ ಆರು ತಿಂಗಳು (ನವೆಂಬರ್–ಏಪ್ರಿಲ್) ಮಾತ್ರ. ಮಳೆಗಾಲದಲ್ಲಿ ಘಾಟಿಯಲ್ಲಿ ಹಾಡಹಗಲೇ ಹೆಡ್ಲೈಟ್ ಹಾಕಿಕೊಂಡರೂ, ಎದುರಿನ ರಸ್ತೆ ಕಾಣಿಸದಷ್ಟು ದಟ್ಟ ಕಾವಳ ಮುಸುಕಿರುತ್ತದೆ; ವಾಹನಗಳ ಸಂಚಾರವೂ ವಿರಳವಾಗಿರುತ್ತದೆ.
ಆಗುಂಬೆ ಘಾಟಿ ಹಲವು ಬಾರಿ ದುರಸ್ತಿಯಾದರೂ, ಸುಧಾರಿಸದಿರುವುದು ಲಘು ವಾಹನಗಳ ಓಡಾಟದಿಂದಲ್ಲ. ಚೆಕ್ಪೋಸ್ಟ್ನಲ್ಲಿ ಕಾಸು ಕಸಿದು ಭಾರೀ ವಾಹನಗಳನ್ನು ಸಂಚಾರಕ್ಕೆ ಬಿಡಲಾಗುತ್ತಿದೆ. ಆ ಕಳ್ಳ ಸಂಚಾರಕ್ಕೆ ಕಡಿವಾಣ ಬಿದ್ದರೆ, ಪರಿಸ್ಥಿತಿ ಅರ್ಧ ಸುಧಾರಣೆ ಯಾದ ಹಾಗೆಯೇ!
ಬೇಸಿಗೆಯಲ್ಲಿ, ಎಐ ಹಾಗೂ ಸ್ಮಾರ್ಟ್ ಸಿಗ್ನಲಿಂಗ್ ಅಳವಡಿಸಿದರೆ, ಆಗುಂಬೆ ಘಾಟಿ ವಾಹನ ಸಂಚಾರವನ್ನು ಸುಲಭವಾಗಿ ನಿಯಂತ್ರಿಸ ಬಹುದು. ರಸ್ತೆ ಅಗಲ ಮಾಡುವ ಬದಲು, ಬಯೋ–ಎಂಜಿನಿಯರಿಂಗ್ ತಂತ್ರದಿಂದ ಸ್ಥಿರತೆ ಹೆಚ್ಚಿಸಬಹುದು. ಜಿಯೋ ಗ್ರಿಡ್ ಬಳಸಿ ಮರ ಬೀಳ ದಂತೆ, ಬೆಟ್ಟ ಕುಸಿಯದಂತೆ ತಡೆಯು ವುದು ಸುಲಭ ಸಾಧ್ಯ. ಅದಕ್ಕೆ ತಗಲುವ ವೆಚ್ಚವೂ, ಸುರಂಗ ನಿರ್ಮಾಣ ಕಾರ್ಯಕ್ಕೆ ಹೋಲಿಸಿದರೆ ಅತ್ಯಲ್ಪ ಎನ್ನುವ ಯುವ ತಂತ್ರಜ್ಞ ಶ್ರೀಧರ ಕಲ್ಲಹಳ್ಳ ಅವರ ಮಾತುಗಳನ್ನು ರಾಜಕಾರಣಿ ಗಳು ಗಮನಿಸಬೇಕು.
ವಾಹನ ಸವಾರರ ಕಷ್ಟ–ನಷ್ಟದ ಬಗ್ಗೆ ಕಳಕಳಿ ತಪ್ಪಲ್ಲ; ಆದರೆ, ಸ್ಥಳೀಯರ ಬದುಕು–ಬವಣೆಯನ್ನೂ ನೋಡಬೇಕ ಲ್ಲವೆ? ಸೋಮೇಶ್ವರ–ಮೇಗರವಳ್ಳಿ ಸುರಂಗ ಮಾರ್ಗದಲ್ಲಿ ವಾಹನಗಳು ಒಂದು ಕಡೆ ನುಗ್ಗಿ ಮತ್ತೊಂದರಲ್ಲಿ ಹೊರ ಬಿದ್ದರೆ, ಘಟ್ಟದ ಮೇಲಿರುವ ಆಗುಂಬೆ (ರಾಷ್ಟ್ರೀಯ ಹೆದ್ದಾರಿ ಫಲವಾಗಿ ಈಗಾಗಲೇ ಜನ–ವಾಹನ ಸಂಚರಿಸದೆ ತಬ್ಬಲಿ ಯಾಗಿದೆ), ನಾಲೂರು, ಹೊನ್ನೆತಾಳು, ಬಿದರಗೋಡು ಗ್ರಾಮಗಳ ನೂರಾರು ಹಳ್ಳಿಗಳ ಸಾವಿರಾರು ಜನರ ಸಾರಿಗೆ ಸಂಪರ್ಕಕ್ಕೆ ಧಕ್ಕೆಯಾಗಿ ಅವು ದ್ವೀಪಗಳಾಗಿ, ಅಲ್ಲಿನ ನಾಗರಿಕರ ಆರ್ಥಿಕ ಸ್ಥಿತಿಗತಿ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ಈ ಗ್ರಾಮಗಳಲ್ಲಿನ ಹೆಚ್ಚಿನವರು ಕೃಷಿಕರು. ಅಡಿಕೆಯೇ ಪ್ರಮುಖ ವಾಣಿಜ್ಯ ಬೆಳೆ. ಎಲೆಚುಕ್ಕೆ ರೋಗದಿಂದ ಅವರು ತತ್ತರಿಸುತ್ತಿದ್ದಾರೆ. ಸುರಂಗ ಮಾರ್ಗವಾದರೆ, ಅವರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ವಾಹನ ಸಂಚಾರ ದಟ್ಟಣೆಯಿಂದ ಬಳಲುತ್ತಿದ್ದ ಶಿರಾಡಿ ಘಾಟಿ ಸಮಸ್ಯೆ ಬಗೆಹರಿಸಲು 27 ಕಿ.ಮೀ. ಉದ್ದದ ಸುರಂಗಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿ ದಾಗ, ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದರು. ಯೋಜನೆಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ‘ಪರಿಸರದ ಮೇಲೆ ಪರಿಣಾಮ ಬೀರುವ ಸುರಂಗ ಪರಿಹಾರವಲ್ಲ; ಅದಕ್ಕಿಂತ ರಸ್ತೆ ಮಾರ್ಗ ವಿಸ್ತರಣೆಯೇ ಹೆಚ್ಚು ಸೂಕ್ತ’ ಎಂದು ಲೋಕಸಭೆಗೆ ಸ್ಪಷ್ಟಪಡಿಸಿದರು.
ಬೆಂಗಳೂರಿನ ಲಾಲ್ಬಾಗ್ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಯೋಜನೆಗೆ ಸ್ಥಳೀಯ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೂ ಸುರಂಗ ಮಾರ್ಗ ವಿರೋಧಿ ಪ್ರತಿಭಟನೆಯಲ್ಲಿ ಗುರ್ತಿಸಿಕೊಂಡಿದ್ದಾರೆ. ಆದರೆ, ಆಗುಂಬೆಯಲ್ಲಿ ಸುರಂಗ ಮಾರ್ಗ ನಿರ್ಮಿಸಲು ಸಂಸದ ಬಿ.ವೈ. ರಾಘವೇಂದ್ರ ಟೊಂಕಕಟ್ಟಿ ನಿಂತಿದ್ದಾರೆ! ವಿಶೇಷ ಎಂದರೆ ಸಂಸದರಿಬ್ಬರೂ ಬಿಜೆಪಿಗೆ ಸೇರಿದವರು!
ನಲುಗುತ್ತಿರುವ ನಿಸರ್ಗವನ್ನು ಮುಂದಿನ ತಲೆಮಾರಿಗೆ ಕಾಪಿಡುವುದು ನಮ್ಮ ಕರ್ತವ್ಯ. ನಮ್ಮ ರಾಜಕಾರಣಿಗಳ ನಡೆ ಯನ್ನು ನೋಡಿದರೆ, ಕರ್ತವ್ಯವನ್ನು ನಿಭಾಯಿಸುವುದರ ಬದಲು ಅವರು ಮುಂದಿನ ತಲೆಮಾರಿಗೆ ದ್ರೋಹ ಎಸಗುತ್ತಿರುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.