
‘ಮಲೆನಾಡ ರೈತರ ಬದುಕು ಬೀದಿ ಪಾಲಾಗುವ ದಿನ ಬಹಳದೂರವೇನಿಲ್ಲ’ ಎಂದು ಹತಾಶೆಯಿಂದ ಹೇಳಿದರು ಆ ಪರಿಚಿತ ಕೃಷಿಕರು. ಎದುರಿನಲ್ಲಿ ಅವರ ಎರಡು ಜೇನು ಪೆಟ್ಟಿಗೆ ಗಳು ಅಪಘಾತಕ್ಕೆ ತುತ್ತಾದಂತೆ ಬಾಯಿ ತೆರೆದುಕೊಂಡು ಬಿದ್ದಿ ದ್ದವು! ‘ಇದೆಲ್ಲಾ ಹೇಗಾಯ್ತು?’ ಎಂದು ನಾನು ಆತಂಕದಿಂದ ಕೇಳುತ್ತಿದ್ದಂತೆ, ‘ಎಲ್ಲಾ ಶತ್ರುಗಳ ಕಾಟ’ ಎನ್ನುತ್ತಾ ಅಡಿಕೆ ಮರಗಳ ಮೇಲೆ ಕುಳಿತು ಇತ್ತಲೇ ನೋಡುತ್ತಿದ್ದ ಮಂಗಗಳ ಗುಂಪಿನತ್ತ ಬೊಟ್ಟು ತೋರಿದರು.
ಜೇನುತುಪ್ಪ ತಿನ್ನಲು, ಜೇನಿನ ಮೊಟ್ಟೆ ಮರಿಗಳನ್ನು ಮೆಲ್ಲಲು ಮಂಗಗಳು ತಮ್ಮದೇ ದಾರಿ ಕಂಡುಕೊಂಡಿವೆ. ಒಮ್ಮೆಲೆ ಪೆಟ್ಟಿಗೆಯ ಮೇಲೆ ಹಾರಿ ಅದನ್ನು ಬೀಳಿಸಿ, ಜೇನು ನೊಣಗಳ ದಾಳಿಗೆ ಸಿಗದಿರಲು ದೂರ ಓಡುತ್ತವೆ. ನೊಣಗಳು ಎಲ್ಲೆಡೆ ಚದುರಿದ ಬಳಿಕ ತುಪ್ಪ, ಮೊಟ್ಟೆಮರಿಗಳನ್ನು ಹೊತ್ತ ಜೇನಿನ ಹಲ್ಲೆಗಳನ್ನು ಹೊತ್ತೊಯ್ಯುತ್ತವೆ.
ಜೇನು ಮಾತ್ರವಲ್ಲ, ಮಲೆನಾಡಿನ ರೈತರ ಜೀವನೋಪಾ ಯದ ಮೇಲೆಯೂ ಮಂಗಗಳು ದಾಳಿ ನಡೆಸುತ್ತಿವೆ. ಮಲೆನಾಡಿನ ಆರ್ಥಿಕತೆಯ ಜೀವನಾಡಿ ಅಡಿಕೆ ಬೆಳೆಯು ಕೊಳೆರೋಗ, ಎಲೆಚುಕ್ಕೆ, ಹಳದಿ ರೋಗಗಳಿಂದ ಈಗಾಗಲೇ ತತ್ತರಿಸಿದೆ. ಅಡಿಕೆಯ ಜೊತೆ ಜೊತೆಗೆ ಒಂದಷ್ಟು ಮಿಶ್ರ ಬೆಳೆಗಳಿಂದಲಾದರೂ ಬದುಕು ಕಟ್ಟಿಕೊಳ್ಳುವ ರೈತರ ಪ್ರಯತ್ನಕ್ಕೆ ನಾಡು ಹೊಕ್ಕಿರುವ ಮಂಗಗಳು ಸವಾಲಾಗಿವೆ. ಅವು ತಿನ್ನುವುದ ಕ್ಕಿಂತಲೂ ಹಾಳು ಮಾಡುವುದೇ ಜಾಸ್ತಿ. ತೆಂಗಿನ ಸಿಪ್ಪೆ ಸಿಗಿದು ಎಳನೀರು ಕುಡಿಯುತ್ತವೆ. ಭತ್ತ, ಕಾಫಿ, ಕೋಕೊ, ಏಲಕ್ಕಿ, ಬಾಳೆ, ಮಾವು, ಹಲಸು, ಚಿಕ್ಕು, ಪಪ್ಪಾಯಿ, ಬೆಣ್ಣೆಹಣ್ಣು, ತರಕಾರಿ, ಎಲ್ಲದರ ಮೇಲೂ ದಾಳಿ ಮಾಡುತ್ತಾ ರೈತರಿಗೆ ದುಃಸ್ವಪ್ನವಾಗಿವೆ; ಮಲೆನಾಡಿನ ಆರ್ಥಿಕತೆಯನ್ನೇ ಬುಡಮೇಲು ಮಾಡುತ್ತಿವೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿ ಇವುಗಳ ಉಪಟಳ ಮೇರೆ ಮೀರಿದೆ.
ಅಡಿಕೆಕಾಯಿ ಮಂಗಗಳ ಆಹಾರವೇ ಅಲ್ಲ. ಎಳೆಯ ಚಿಗುರು ಕಾಯಿಗಳನ್ನು ಕಿತ್ತು ಬುಡದ ಮೃದುಭಾಗವನ್ನು ಚೀಪಿ ಎಸೆಯುತ್ತವೆ. ಕಾಯಿಗಳನ್ನು ಚೀಪಿ ಚೀಪಿ ಮತ್ತೇರಿಸಿಕೊಂಡ ಮಂಗಗಳು ಮತ್ತಷ್ಟು ಕಾಯಿಗಳನ್ನು ಕಿತ್ತು ಹಾಕುತ್ತವೆ. ಅಡಿಕೆ ಸಿಂಗಾರಕ್ಕೆ ಹಾನಿ ಮಾಡುತ್ತವೆ. ಗಾಯಗೊಂಡ ಗೊನೆ ರೋಗಾಣುಗಳ ನೆಲೆಯಾಗುತ್ತದೆ. ಮದ ಏರಿಸಿಕೊಂಡ ಮಂಗಗಳು ಮರದ ಸುಳಿಯನ್ನೇ ಮುರಿದು ಹಾಕುವುದುಂಟು. ಒಂದೊಂದು ಮಂಗವೂ ಪ್ರತಿನಿತ್ಯ ನೂರಾರು ಕಾಯಿಗಳನ್ನು ಎಳೆದು ಹಾಕುತ್ತದೆ. ಅವುಗಳ ಗುಂಪು ದೊಡ್ಡದಾಗಿದ್ದಷ್ಟೂ ನಷ್ಟದ ಪ್ರಮಾಣ ಏರುತ್ತದೆ. ಅಡಿಕೆ ಮರದ ಬುಡದಲ್ಲಿ ಪ್ರತಿನಿತ್ಯ ಬೀಳುವ ಎಳೆಗಾಯಿಗಳ ಹಾಸನ್ನು ನೋಡುವಾಗ ರೈತರ ಹೊಟ್ಟೆ ಉರಿಯದೇ ಇದ್ದೀತೆ?
ತೆಂಗು, ಏಲಕ್ಕಿ, ಕಾಫಿ, ಕೋಕೊದ ಮೇಲೂ ಇಂತಹದ್ದೇ ದಾಳಿ. ಆಸರೆಯ ಮರಕ್ಕೆ ಹಬ್ಬಿಸಿರುವ ವೀಳ್ಯದೆಲೆ, ಕಾಳುಮೆಣಸಿನ ಬಳ್ಳಿಗಳೂ ಮಂಗಗಳ ದಾಳಿಗೆ ತುತ್ತಾಗಿ ನೆಲಕ್ಕೊರಗುತ್ತಿವೆ. ಇನ್ನು ಹಣ್ಣು, ತರಕಾರಿಗಳನ್ನು ರಕ್ಷಿಸಿ ಕೊಳ್ಳುವುದಂತೂ ಅಸಾಧ್ಯವೇ ಸರಿ. ಇದರಿಂದಾಗಿ ರೈತರ ಆದಾಯದ ಚಿಕ್ಕ ಮೂಲಗಳು ಬತ್ತಿ ಹೋಗಿವೆ. ಈಗ ಮಂಗಗಳ ಕಾಟದಿಂದ ರೋಸಿ ಹೋಗಿ ಬೆಳೆಯುವುದನ್ನೇ ನಿಲ್ಲಿಸುತ್ತಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಯಡಿ ಮಂಗಗಳನ್ನು ಕೊಲ್ಲುವುದು, ಹಿಂಸಿಸುವುದು, ಕೂಡಿಹಾಕುವುದು, ಸಾಕುವುದು ಶಿಕ್ಷಾರ್ಹ ಅಪರಾಧ. ಕಾಟಿ, ಆನೆಗಳು ನುಗ್ಗಿ ಬೆಳೆ ನಾಶವಾದ ಸಂದರ್ಭದಲ್ಲಿ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಹುಲಿ, ಚಿರತೆ ದಾಳಿಯಿಂದ ಜಾನುವಾರು ಮೃತಪಟ್ಟಾಗಲೂ ಮಾಲೀಕರಿಗೆ ಪರಿಹಾರ ದೊರೆಯುತ್ತದೆ. ಆದರೆ, ಮಂಗಗಳು ವನ್ಯಜೀವಿಗಳಾದರೂ ಅವುಗಳಿಂದಾಗುವ ಬೆಳೆ ನಷ್ಟಕ್ಕೆ ಯಾವುದೇ ಪರಿಹಾರವಿಲ್ಲ.
ಮಂಗಗಳ ಉಪಟಳ ನಿಯಂತ್ರಿಸಲು ಕಾವಲು ಕಾಯುವುದು, ಪಟಾಕಿ ಸಿಡಿಸುವುದು, ನೈಲಾನ್ ಬಲೆ, ಏರ್ಗನ್ ಬಳಕೆ, ಲೇಸರ್ ಲೈಟ್, ಮೀನಿನೆಣ್ಣೆಯ ವಾಸನೆ ಹರಡಿಸುವುದು, ಮೆಣಸಿನ ಹೊಗೆ ಹಾಕುವಂತಹ ಕ್ರಮವು ಅವುಗಳ ಬುದ್ಧಿವಂತಿಕೆಯ ಮುಂದೆ ಹೆಚ್ಚು ದಿನ ಬಾಳುವು ದಿಲ್ಲ. ಇನ್ನು ಅವುಗಳಿಗೆ ವಾಸಸ್ಥಾನ, ಆಹಾರ ಕಲ್ಪಿಸುವ ‘ಮಂಕಿ ಪಾರ್ಕ್’ಗಳ ನಿರ್ಮಾಣವೂ ಪ್ರಾಯೋಗಿಕವಲ್ಲ. ನಾಡೊಳಗಿನ ಮಂಗಗಳನ್ನು ನಿಯಮಾನುಸಾರ ಹಿಡಿದು ದಟ್ಟ ಕಾಡೊಳಗೆ ಬಿಡುವುದೊಂದೇ ನಮ್ಮೆದುರುಗಿರುವ ಏಕೈಕ ಪರಿಹಾರದ ಮಾರ್ಗ. ಹೀಗೆ ಮಾಡುವಲ್ಲಿ ಹಲವು ಸವಾಲುಗಳು, ಅಪಾಯಗಳು ಇವೆ. ಹಿಡಿದ ಜಾಗದಿಂದ ಕನಿಷ್ಠ 10–15 ಕಿ.ಮೀ. ದೂರದ ಅರಣ್ಯದಲ್ಲಿ ಬಿಡಬೇಕು. ಇಲ್ಲದಿದ್ದರೆ ಅವು ಮರಳಿ ಮೊದಲ ಜಾಗಕ್ಕೆ ಬರುವ ಸಂಭವ ಇದೆ. ಸನಿಹದಲ್ಲಿ ಹಳ್ಳಿಗಳಿದ್ದರೆ ಮಂಗಗಳು ಅಲ್ಲಿಗೆ ನುಗ್ಗ ಬಹುದು. ವಿವಿಧೆಡೆಯಿಂದ ತಂದು ಬಿಟ್ಟ ಮಂಗಗಳು, ಅಲ್ಲಿ ಮೊದಲಿನಿಂದಲೂ ವಾಸವಾಗಿರುವ ಗುಂಪುಗಳ ನಡುವೆ ಸಂಘರ್ಷ ನಡೆಯಬಹುದು. ಮಾನವನ ಆಹಾರ, ನಾಡಿನ ಜೀವನಕ್ಕೆ ಹೊಂದಿಕೊಂಡ ಮಂಗಗಳು ಕಾಡಿನಲ್ಲಿ ನೈಸರ್ಗಿಕವಾಗಿ ದೊರೆಯುವ ಸಸ್ಯದ ಚಿಗುರುಗಳು, ಹೂವು, ಹಣ್ಣು, ಕಾಯಿಗಳಂತಹ ಆಹಾರವನ್ನು ಹುಡುಕಿ ತಿನ್ನುವುದು ಕಷ್ಟವಾಗಬಹುದು. ಇದರಿಂದ ಸೊರಗುವ, ಹಸಿವೆಯಿಂದ ಸಾಯುವ ಇಲ್ಲವೇ ಹತ್ತಿರದ ಹಳ್ಳಿಗಳನ್ನು ಹುಡುಕಿ ಹೋಗುವ ಸಂಭವವಿದೆ.
ಅಪಾಯಗಳು ಇದ್ದರೂ, ರೈತರ ಹಿತದೃಷ್ಟಿ, ಆಹಾರ ಭದ್ರತೆ, ಸಾಮಾಜಿಕ, ಆರ್ಥಿಕ ಸ್ವಾಸ್ಥ್ಯದ ನಿಟ್ಟಿನಲ್ಲಿ ಮಂಗ ಗಳನ್ನು ಕಾಡಿಗೆ ಬಿಡುವ ಕಠಿಣ ಕ್ರಮದ ಅನಿವಾರ್ಯತೆ ಇದೆ. ಮೂಲಭೂತವಾಗಿ ಮಾನವನ ದುರಾಸೆಯೇ ವನ್ಯಜೀವಿ ಗಳೊಂದಿಗಿನ ಈ ಪರಿಯ ಸಂಘರ್ಷಕ್ಕೆ ಕಾರಣವಾಗಿದ್ದರೂ, ಪ್ರಾಣಿಗಳ ಹಕ್ಕುಗಳಿಗೆ ಕೊಡುವ ಒತ್ತು ರೈತರ ಬದುಕುವ ಹಕ್ಕನ್ನು ಕಸಿಯಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.