ADVERTISEMENT

ಪಿವಿ ವೈಬ್ಸ್‌: ಕೃಷ್ಣ ಕೊಟ್ಟ ಹಾಗಲಕಾಯಿ ತೀರ್ಥ ಸ್ನಾನ ಮಾಡಿದ ಕತೆ...

ಸಹನೆ
Published 13 ಫೆಬ್ರುವರಿ 2026, 23:44 IST
Last Updated 13 ಫೆಬ್ರುವರಿ 2026, 23:44 IST
   

ಅವು ಮಹಾಭಾರತದ ಮಹಾಯುದ್ಧ ಆಗಷ್ಟೇ ಕೊನೆಗೊಂಡ ದಿನಗಳು. ಪಿತಾಮಹ ಭೀಷ್ಮ, ಆಚಾರ್ಯ ದ್ರೋಣ, ಮಹಾರಥಿ ಕರ್ಣ ಸೇರಿದಂತೆ ಹಸ್ತಿನಾಪುರದ ಚಕ್ರವರ್ತಿ ದುರ್ಯೋಧನನಾದಿಯಾಗಿ ಇಡೀ ಕೌರವ ಕುಲ ನಾಶವಾಗಿತ್ತು. ಪಾಂಡವರ ಕಡೆಯಲ್ಲೂ ಅಭಿಮನ್ಯುವಿನಂಥ ಸಾಕಷ್ಟು ಜೀವ ಹಾನಿಯಾಗಿತ್ತು. ಇಡೀ ಕುರುಕ್ಷೇತ್ರ ಹೆಣಗಳ ಪರ್ವತವಾಗಿ ಮಾರ್ಪಟ್ಟಿತ್ತು. ಅದರ ಸುತ್ತಲೂ ಬೃಹತ್‌ ನೆತ್ತರಿನ ನದಿಯೇ ಹರಿದಿತ್ತು. ಸುದೀರ್ಘ ಯುದ್ಧದ ಬಳಿಕ ಅಲ್ಲಿ ರಣಭೀಕರ ನೀರವ ಆವರಿಸಿತ್ತು. ಅಲ್ಲಲ್ಲಿ ಚಿತೆಗಳಲ್ಲಿನ ಚಟಪಟ, ಕಾಗೆ– ಹದ್ದುಗಳ ಹೇಷಾರವ, ನಾಯಿ ನರಿಗಳ ಊಳಿನ ಸದ್ದು ಬಿಟ್ಟರೇ ಬೇರೇನೂ ಇರಲಿಲ್ಲ.

ಇದೆಲ್ಲವನ್ನೂ ದೂರದಲ್ಲಿ ನಿಂತು ವೀಕ್ಷಿಸಿದ ಧರ್ಮರಾಯನನ್ನು ಭಾರೀ ಜುಗುಪ್ಸೆ ಆವರಿಸಿಕೊಂಡಿತ್ತು. ಇಂಥಾ ಘೋರ ಹತ್ಯಾಕಾಂಡದ ಪಾಪದ ರಾಶಿಯನ್ನು ಹೊತ್ತುಕೊಂಡಿರುವ ತಲೆಯ ಮೇಲೆ ಸಾಮ್ರಾಜ್ಯಾಧಿಪತಿಯ ಕಿರೀಟವನ್ನು ಸ್ಥಾಪಿಸಿಕೊಳ್ಳುವುದು ಮೊದಲೇ ಧರ್ಮಭೀರುವಾದ ಯುದಿಷ್ಠಿರನಿಗೆ ಸರ್ವಥಾ ಸಮರ್ಥನೀಯವಲ್ಲ ಎನಿಸಿಬಿಟ್ಟಿತು. ಹಾಗಾದರೆ ಈ ಪಾಪವನ್ನು ತೊಳೆದುಕೊಳ್ಳುವುದು ಹೇಗೆ? ಚಿಂತಿಸಿದ. ಕೊನೆಗೊಂದು ನಿರ್ಧಾರಕ್ಕೆ ಬಂದ. ಇಡೀ ಭರತಖಂಡದ ಯಾತ್ರೆಯನ್ನು ಕೈಗೊಂಡು, ಭರತಭೂಮಿಯ ಎಲ್ಲ ನದಿ–ತೀರ್ಥಗಳಲ್ಲಿ ಮುಳುಗೆದ್ದು, ಎಲ್ಲ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ತನ್ನ ಪಾಪವನ್ನು ತೊಳೆದುಕೊಂಡ ಬಳಿಕವೇ ಪಟ್ಟಾಭಿಷಿಕ್ತನಾಗುವುದೆಂದು ತೀರ್ಮಾನಿಸಿ, ಸೋದರರು ಹಾಗೂ ಪತ್ನಿ ದ್ರೌಪದಿಗೆ ಹೇಳಿದ. ಅಣ್ಣನನ್ನು ಅನುಸರಿಸಿಯೇ ಈವರೆಗೆ ಬಂದಿದ್ದ ಅವರುಗಳು ತಾವೂ ಬರುವುದಾಗಿ ಹೇಳಿದರು. ಸರಿ, ಹೊರಡುವ ಮುನ್ನ ತಮ್ಮ ದಿಗ್ದರ್ಶಿಯಾದ ಶ್ರೀಕೃಷ್ಣನನ್ನು ಭೇಟಿಯಾಗಿ, ಆತನ ಆಶೀರ್ವಾದ ಪಡೆದು ಹೋಗುವುದೆಂದು ನಿರ್ಧರಿಸಿ, ಕೃಷ್ಣನ ಬಳಿ ಬಂದರು. ಅಷ್ಟ ಮಹಿಷಿಯರ ಜತೆ ಲೋಕಾಭಿರಾಮ ಕುಳಿತಿದ್ದ ಕೃಷ್ಣ, ಪಾಂಡವರ ಮಾತನ್ನು ಸಾವಧಾನಚಿತ್ತನಾಗಿ ಆಲಿಸಿ, ಏನನ್ನೂ ಹೇಳದೇ ಧಿಗ್ಗನೆ ಎದ್ದು ಒಳ ನಡೆದ. ಎಲ್ಲರಿಗೂ ದಿಗಿಲು! ತಮ್ಮ ಆರಾಧ್ಯನೇಕೆ ಹೀಗೆ ಮಾಡಿದ? ತಮ್ಮಿಂದ ಏನಾದರೂ ಅಪಚಾರವಾಯಿತೆ? ಪಾಪ ಪರಿಹಾರ ಮಾರ್ಗವನ್ನು ಆತನ ಬಳಿಯೇ ಕೇಳಬೇಕಾಗಿತ್ತೇ? ಹೀಗೆ... ಏನೇನೋ ಯೋಚನೆಗಳು ಸುಳಿಯುತ್ತಿದ್ದಾಗಲೇ ಗಂಭೀರವದನನಾಗಿ ಮರಳಿದ ಕೃಷ್ಣನ ಕೈಯ್ಯಲ್ಲೊಂದು ಪುಟ್ಟ ಹಾಗಲಕಾಯಿ ಇತ್ತು.

ಅದನ್ನು ಧರ್ಮರಾಜನ ಕೈಗಿಡುತ್ತಾ, ‘ನಿಮ್ಮ ತೀರ್ಥಯಾತ್ರೆಯ ನಿರ್ಧಾರ ಅತ್ಯಂತ ಸೂಕ್ತವಾಗಿದೆ. ಖಂಡಿತಾ ಹೋಗಿಬನ್ನಿ. ಆ ಯುದ್ಧಕ್ಕೆ ಸಾಕ್ಷಿಯಾಗಿದ್ದ ನನಗೂ ನಿಮ್ಮ ಜತೆ ಬರಬೇಕೆಂದೆನಿಸಿತ್ತು. ಆದರೆ ಬಹಳ ಕಾಲದಿಂದ ದ್ವಾರಕೆಯನ್ನು ಬಿಟ್ಟು ಇದ್ದುದ್ದರಿಂದ ಸಾಕಷ್ಟು ರಾಜಕಾರ್ಯಗಳು ಬಾಕಿ ಉಳಿದುಬಿಟ್ಟಿವೆ. ನನ್ನ ಬದಲು ನನ್ನ ಪ್ರತಿನಿಧಿಯಾಗಿ ನಿಮ್ಮ ಜತೆ ಇದನ್ನು ಕಳುಹಿಸುತ್ತೇನೆ. ಇದು ನಾನೇ ಖುದ್ದು ಅತ್ಯಂತ ಪ್ರೀತಿಯಿಂದ ನನ್ನ ತೋಟದಲ್ಲಿ ಬೆಳೆಸಿದ್ದು. ನೀವು ಎಲ್ಲೆಲ್ಲಿ ತೀರ್ಥ ಸ್ನಾನ ಮಾಡುತ್ತೀರೋ, ಅಲ್ಲೆಲ್ಲ ಇದಕ್ಕೂ ಸ್ನಾನ ಮಾಡಿಸಿ. ನೀವು ಮುಳುಗೇಳುವ ಎಲ್ಲ ನದಿಗಳಲ್ಲಿ ಇದನ್ನೂ ಮುಳುಗಿಸಿ ಏಳಿಸಿ. ಎಲ್ಲ ದೇವರ ದರ್ಶನ ಮಾಡಿಸಿ, ಪ್ರಸಾದವನ್ನು ಹಾಕಿಸಿಕೊಂಡು ಬನ್ನಿ. ಆಗಬಹುದೇ?’ ಎಂದ. ಪಾಂಡವರು ನಿಟ್ಟುಸಿರು ಬಿಟ್ಟು, ಸಮಾಧಾನ ಹೊಂದಿದರು. ಕೃಷ್ಣನ ಮಾತನ್ನು ಶಿರಸಾವಹಿಸಿ ಪಾಲಿಸುವುದಾಗಿ ಮಾತುಕೊಟ್ಟು ಹಾಗಲವನ್ನು ಜೋಪಾನವಾಗಿ ಜೋಳಿಗೆಯಲ್ಲಿಟ್ಟುಕೊಂಡು ಹೊರಟರು.

ADVERTISEMENT

ವಿಶಾಲ ಭರತ ಖಂಡದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಸಮಗ್ರ ಪರ್ಯಟನೆ ಮಾಡಿ, ಎಲ್ಲ ಕ್ಷೇತ್ರಗಳನ್ನು ಸಂದರ್ಶಿಸಿ, ಸರ್ವ ತೀರ್ಥಗಳಲ್ಲೂ ಮಿಂದೆಂದು ಪುನೀತಭಾವದಲ್ಲಿ ಮರಳಿದರು. ಎಲ್ಲಿಯೂ ಹಾಗಲವನ್ನು ಮರೆಯದೇ, ಎಲ್ಲೆಡೆ ತಾವು ಏನೆಲ್ಲವನ್ನೂ ಮಾಡಿದರೋ ಅದೆಲ್ಲವನ್ನೂ ಸ್ವತಃ ಕೃಷ್ಣನೇ ಎಂದು ಭಾವಿಸಿ, ಹಾಗಲಕ್ಕೂ ಮಾಡಿಸಿದರು. ಎಲ್ಲ ದೇವರೆದರೂ ಅದನ್ನೂ ಇಟ್ಟು ಪ್ರಸಾದ ಹಾಕಿಸಿಕೊಂಡು ಬಂದಿದ್ದರು. ಯಾತ್ರೆಯ ಕೊನೆಯಲ್ಲಿ ಪುನಃ ಕೃಷ್ಣನ ಸಾನ್ನಿಧ್ಯಕ್ಕೆ ಬಂದು, ಹಾಗಲವನ್ನು ಅವನ ಕೈಗೆ ಮರಳಿಸಿದರು. ಕೃಷ್ಣ ಕೇಳಿದ– ‘ಎಲ್ಲೆಡೆ ಇದಕ್ಕೂ ತೀರ್ಥ ಸ್ನಾನ ಮಾಡಿಸಿದ್ದೀರಲ್ಲಾ, ಎಲ್ಲ ದೇವರ ದರ್ಶನ ಮಾಡಿಸಿದ್ದೀರಲ್ಲಾ?’ ಚಾಚೂ ತಪ್ಪದೇ ಪಾಲಿಸಿದ್ದಾಗಿ ಯುಧಿಷ್ಠಿರ ವರದಿ ಒಪ್ಪಿಸಿದ. ಸರಿ ಎಂದು ಸೇವಕರಿಂದ ಒಂದು ಕತ್ತಿ ತರಿಸಿದ ಕೃಷ್ಣ, ಆ ಹಾಗಲವನ್ನು ಆರು ಭಾಗಗಳಾಗಿ ಕತ್ತರಿಸಿದ. ಮತ್ತೆ ಪಾಂಡವರಿಗೆ ಆಶ್ಚರ್ಯ! ಹಾಗಲದ ಒಂದೊಂದು ತುಂಡುಗಳನ್ನು ದ್ರಾಪದಿ ಹಾಗೂ ಐವರು ಪಾಂಡವರಿಗೆ ಹಂಚಿ, ತಿನ್ನಲು ಹೇಳಿದ. ಅದನ್ನು ಬಾಯಿಗಿಟ್ಟುಕೊಂಡ ಅವರೆಲ್ಲರೂ ಮುಖ ಕಿವುಚಿದರು. ’ಯಾಕೆ ಹೀಗೆ ಮುಖ ಮಾಡುತ್ತೀರಿ? ಹಾಗಲ ಸಿಹಿ ಇಲ್ಲವೇ?’ ಎಂದು ಕೇಳಿದ ಕೃಷ್ಣ. ಆತನ ಮಾತಿಗೆ ನಗಬೇಕೋ, ಗಂಭಿರವಾಗಿ ಉತ್ತರ ಹೇಳಬೇಕೋ ಅರಿಯದೇ ಗೊಂದಲಕ್ಕೆ ಬಿದ್ದರು ಪಾಂಡವರು, ಇದ್ದುದರಲ್ಲಿ ಹೆಚ್ಚು ಸಲುಗೆ ಇದ್ದ ದ್ರೌಪದಿಯೇ, ‘ಅಣ್ಣಾ, ಇದೇನು ಹೀಗೆ ಕೇಳುತ್ತಿರುವೆ? ಹಾಗಲ ಎಂದಾದರೂ ಸಿಹಿ ಇರುತ್ತದೆಯೇ? ಅದರಲ್ಲೂ ಇಷ್ಟು ದಿನ ನೀರಲ್ಲಿ ನೆನೆದ ಹಾಗಲ ಇನ್ನಷ್ಟು ಕಹಿ ಬಿಟ್ಟುಕೊಂಡಿದೆ’ ಎಂದಳು. ‘ಹಾಗೇಕೆ? ಇಷ್ಟೆಲ್ಲಾ ದೇವರ ದರ್ಶನ ಮಾಡಿಸಿದ, ತೀರ್ಥ ಸ್ನಾನ ಮಾಡಿಸಿದ ಬಳಿಕ ಹಾಗಲದೊಳಗಿನ ಕಹಿ ಹೋಗಿ ಸಿಹಿಯಾಗಿರಬೇಕಿತ್ತಲ್ಲವೇ?’ ಎಂದ ಕೃಷ್ಣ

ಕೃಷ್ಣನ ಮಾತಿನ ಒಳಮರ್ಮ ಧರ್ಮಜನಿಗೆ ಥಟ್ಟನೆ ಹೊಳೆಯಿತು. ತಮ್ಮ ಮೂರ್ಖತನಕ್ಕೆ ಕ್ಷಮೆ ಕೇಳಿದ. ನಮ್ಮ ಜೀವನದಲ್ಲೂ ಇದೇ ಆಗಬೇಕಿರುವುದು. ಬದುಕಿನಲ್ಲಿ ಘಟಿಸಿದ ಪಾಪ, ಮಾಡಿದ ಅಪರಾಧಗಳು, ಕೈಗೊಂಡ ಕು–ಕರ್ಮಗಳನ್ನು ಆಂತರ್ಯದ ಪಶ್ಚಾತ್ತಾಪದ ಬೇಗುದಿಯಲ್ಲಿ ಮರಳಿಸಿ, ಸುಟ್ಟುಕೊಳ್ಳಬೇಕು. ನೈಜ ಮರುಗುವಿಕೆಯ ಕಣ್ಣಿರಿನಲ್ಲಿ ತೊಳೆದುಕೊಳ್ಳಬೇಕು. ಸತ್ಕಾರ್ಯ, ಸನ್ನಡತೆ, ಸದಾಚಾರದ ದೃಢ ನಿಶ್ಚಯದ ದರ್ಶನವನ್ನು ಮನಸಿಗೆ ಮಾಡಿಸಿ ಪುನೀತರಾಗಬೇಕೇ ಹೊರತೂ, ಮಾಡಬಾರದ್ದನ್ನೆಲ್ಲ ಮಾಡಿ, ದಿನಗಟ್ಟಲೆ ದೇವರ ಮುಂದೆ ಕುಳಿತಾಕ್ಷಣ, ತೋರುಗಾಣಿಕೆಗಾಗಿ ಯಾರ್ಯಾರಿಗೋ ಏನೇನೋ ದಾನಕೊಟ್ಟೆ ಎಂದು ಬೀಗಿದಾಕ್ಷಣ, ಸಂಭಾವಿತನ ಪೋಸು ಕೊಟ್ಟಾಕ್ಷಣ, ದೊಡ್ಡ ದೊಡ್ಡ ದೇಗುಲಗಳ ದೇವರಿಗೆ ಕೋಟ್ಯಂತರ ರುಪಾಯಿಗಳ ಕಾಣಿಕೆ ಕೊಟ್ಟಾಕ್ಷಣ ನಾವು ಮನುಷ್ಯರೆನಿಸಿಕೊಳ್ಳುವುದಿಲ್ಲ. ಆಂತರ್ಯದಲ್ಲಿ ಸಿಹಿಯಾಗಿರುವವರಿಗೆ ಯಾವ ದೇವರು, ಯಾವ ಧರ್ಮ, ಯಾವ ಆಚರಣೆಯೂ ಅಗತ್ಯ ಇಲ್ಲ.

ನೆನಪಿಡಿ, ಮನುಷ್ಯತ್ವಕ್ಕಿಂತ ಹೆಚ್ಚಿನ ಪುಣ್ಯ ಇನ್ಯಾವುದೂ ಇಲ್ಲ. ಮೊದಲು ಮಾನವರಾಗೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.