ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಫೆಬ್ರುವರಿ 6, ಶುಕ್ರವಾರ

ವಾಚಕರ ವಾಣಿ
Published 5 ಫೆಬ್ರುವರಿ 2026, 21:45 IST
Last Updated 5 ಫೆಬ್ರುವರಿ 2026, 21:45 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಮೆಟ್ರೊ ಜನಸಂದಣಿ: ಅಧ್ಯಯನ ಅಗತ್ಯ

‘ನಮ್ಮ ಮೆಟ್ರೊ’ ಪ್ರಯಾಣದರ ಹೆಚ್ಚಿಸಿರುವುದು ಅವೈಜ್ಞಾನಿಕ. ಜನದಟ್ಟಣೆ ಆಧರಿಸಿ ವೈಜ್ಞಾನಿಕವಾಗಿ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿದರೆ ದರವನ್ನು ಹೆಚ್ಚಿಸುವ ಪ್ರಮೇಯ ಬರುವುದಿಲ್ಲ. ಕೆಲವೊಮ್ಮೆ ಒಬ್ಬರೇ ಒಂದು ಬೋಗಿಯಲ್ಲಿ ಕುಳಿತು ಪ್ರಯಾಣಿಸುವುದಿದೆ. ಜನದಟ್ಟಣೆ ಮತ್ತು ಜನವಿರಳತೆಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿದರೆ ಅನಗತ್ಯವಾಗಿ ದರ ಏರಿಕೆಯ ಬರೆ ಹಾಕುವುದನ್ನು ತಪ್ಪಿಸಬಹುದು. ಮುಂದಿನ ದಿನಗಳಲ್ಲಿ ಮೆಟ್ರೊ ರೈಲುಗಳ ಮೇಲಿನ ಅವಲಂಬನೆ ಮತ್ತಷ್ಟು ಹೆಚ್ಚಾಗಲಿದೆ. ಪ್ರಯಾಣಿಕರ ಅಗತ್ಯಗಳು, ದಿಢೀರ್ ಜನದಟ್ಟಣೆ ಇತ್ಯಾದಿ ಬಗ್ಗೆ ವೈಜ್ಞಾನಿಕ ಅಧ್ಯಯನ ಅತ್ಯಗತ್ಯ. 

ADVERTISEMENT

– ಟಿ. ನಾರಾಯಣ ಗೌಡ, ಬೆಂಗಳೂರು

***

ನಾಯಿ, ಕೋತಿಗಳಿಗೆ ಅವಮಾನ ಸರಿಯೆ?

ಸದನದಲ್ಲಿ ಶಾಸಕರು ನಾಯಿ, ಕೋತಿ ಹೆಸರಿನಲ್ಲಿ ಬೈದಾಡಿಕೊಂಡಿದ್ದಾರೆ. ನಾಡಿನ ಪ್ರತಿಯೊಬ್ಬರೂ ಇದನ್ನು ಖಂಡಿಸಬೇಕಿದೆ. ವಿಶೇಷವಾಗಿ ಪ್ರಾಣಿ ದಯಾಸಂಘ ದವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಾಯಿ ನಂಬಿಕಸ್ಥ ಪ್ರಾಣಿ. ರಾಜಕಾರಣಿಗಳ ಲೆಕ್ಕಾಚಾರದಂತೆ ಕೋತಿಯು ಕೀಳುಮಟ್ಟದ ಪ್ರಾಣಿಯಲ್ಲ. ಅವುಗಳಿಗೂ ಘನತೆಯಿಂದ ಬಾಳುವ ಹಕ್ಕು ಇದೆಯಲ್ಲವೆ? ಪ್ರಾಣಿಗಳ ಹೆಸರು ಬಳಸಿಕೊಂಡು ಸದನದಲ್ಲಿ ಗಲಾಟೆ ಮಾಡುವುದು ಸಮಂಜಸವಲ್ಲ. ಜನಪ್ರತಿನಿಧಿ ಗಳು ಸಂಯಮದಿಂದ ಭಾಷೆ ಬಳಸಬೇಕು. ಇಲ್ಲವಾದರೆ, ಸದನ ಮತ್ತು ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಲಿದೆ.  

– ಲಕ್ಷ್ಮೀಸುತ, ವಿಜಯಪುರ

***

ಸಮ್ಮೇಳನದ ಸುಗಮ ಹಾದಿ ಯಾವುದು?

ಕನ್ನಡ ಸಾಹಿತ್ಯ ಪರಿಷತ್‌ನಿಂದ ಕಾಲಕಾಲಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುತ್ತಾ ಬಂದಿರುವುದು ಸರಿಯಷ್ಟೆ. ಆದರೆ, ಬಳ್ಳಾರಿ ಜಿಲ್ಲೆಗೆ ತಡವಾಗಿ ಈ ಅವಕಾಶ ಲಭಿಸಿದೆ. ಸದ್ಯದ ಕಸಾಪ ಸಮಿತಿಗೆ ಈಗ ಉಳಿದಿರುವುದು ಹತ್ತು ತಿಂಗಳು ಅವಧಿಯಷ್ಟೆ. ಅಧ್ಯಕ್ಷರ ವಿವಾದದಿಂದಾಗಿ ಅರವತ್ತೊಂಬತ್ತು ವರ್ಷದ ದೀರ್ಘಕಾಲದ ನಂತರ ಬಳ್ಳಾರಿಗೆ ಲಭಿಸಿದ ಸಮ್ಮೇಳನಕ್ಕೆ ಚಾಲನೆ ಸಿಗುತ್ತಿಲ್ಲ. ಕಸಾಪಕ್ಕೆ ಆಡಳಿತಾಧಿಕಾರಿ ನೇಮಕಗೊಂಡಿದ್ದಾರೆ. ಅವರ ಮೂಲಕ ವಾದರೂ ಸಮ್ಮೇಳನ ನಡೆಸಲು ಸರ್ಕಾರ ಮನಸ್ಸು ಮಾಡಬೇಕು. ಸರ್ಕಾರವು ಸಮ್ಮೇಳನಕ್ಕೆ ಒಂದು ಸುಗಮ ಹಾದಿಯನ್ನು ತೋರಬೇಕಿದೆ.

– ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

***

ಮುಟ್ಟಿನ ಆರೋಗ್ಯ ಮತ್ತು ಹೆಣ್ಣಿನ ಘನತೆ

ಮುಟ್ಟಿನ ಆರೋಗ್ಯವೂ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಹೆಣ್ಣಿನ ಘನತೆಯನ್ನು ಎತ್ತಿ ಹಿಡಿಯುವ ಹಾಗೂ ಸಂವೇದನಾಶೀಲವಾದ ನಡೆ. ಈ ಬಗ್ಗೆ ಸಂಪಾದಕೀಯದಲ್ಲಿ (ಪ್ರ.ವಾ., ಫೆ. 3) ವಿಸ್ತಾರವಾಗಿ ಉಲ್ಲೇಖಿಸಲಾಗಿದೆ. ರಾಜ್ಯ ಸರ್ಕಾರ ಋತುಚಕ್ರ ರಜೆ ಘೋಷಿಸಿದೆ. ಈ ಸೌಲಭ್ಯವು ಎಲ್ಲರಿಗೂ ಲಭ್ಯವಿಲ್ಲ ಎನಿಸುತ್ತಿದೆ. ಬದುಕಿನ ನಿರ್ವಹಣೆಗಾಗಿ ಮಹಿಳೆಯರು ಯಾವ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೋ ಅವರೆಲ್ಲರಿಗೂ ವೇತನಸಹಿತ ರಜೆ ನೀಡುವ ಕ್ರಮವಾದರೆ ಉಪಕಾರವಾದೀತು. ಉದ್ಯೋಗಸ್ಥ ಸ್ತ್ರೀಯರು ರಜೆಯನ್ನು ಕೇಳಿ ಪಡೆಯುವುದಲ್ಲ. ದುಡಿಸಿಕೊಳ್ಳುತ್ತಿರುವವರು ಸ್ವಪ್ರೇರಣೆಯಿಂದ ರಜೆ ನೀಡಿ ತಮ್ಮ ಘನತೆ ಹೆಚ್ಚಿಸಿ ಕೊಳ್ಳಬೇಕಿದೆ. ಮುಟ್ಟಿನ ವಿಚಾರದಲ್ಲಿ ಕೀಳಾಗಿ ಕಾಣುವ, ಅವಮಾನಿಸುವ, ಮೌಢ್ಯ ಬಿತ್ತುವಂತಾಗಬಾರದು. 

– ಅನುಪಮಾ ಮೂರ್ತಿ ಕೆ.ಆರ್., ಚಿತ್ರದುರ್ಗ

***

ಲೋಕಾಯುಕ್ತ ಸಂಸ್ಥೆಗೆ ಬೇಕು ಆನೆ ಬಲ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ ಕಂಡು ಜನರಿಗೆ ಬೇಸರವಾಗಿದೆ. ಹಾಗಾಗಿ, ಭ್ರಷ್ಟರ ಬೇಟೆಯಾಡುತ್ತಿರುವ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು ಮತ್ತು ಈ ಸಂಸ್ಥೆಯು ಯಾವುದೇ ಹಸ್ತಕ್ಷೇಪವಿಲ್ಲದೆ ಸ್ವತಂತ್ರ ವಾಗಿ ಕಾರ್ಯ ನಿರ್ವಹಿಸುವಂತಾಗಬೇಕಿದೆ. ಈ ಸಂಸ್ಥೆಗೆ ಮಂಜೂರಾಗಿರುವ ಹುದ್ದೆ ಗಳ ಪೈಕಿ ಹಲವು ಖಾಲಿಯಿವೆ. ಇದರಿಂದ ಸಮರ್ಪಕ ವಾಗಿ ಕೆಲಸ ನಿರ್ವಹಿಸಲಾಗುತ್ತಿಲ್ಲ. ಸರ್ಕಾರ ಇತರ ಇಲಾಖೆಗಳಿಗೆ ನೇರ ನೇಮಕಾತಿ ಮಾಡುವ ಮೊದಲು ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ.

– ರಾಘವೇಂದ್ರ, ಧಾರವಾಡ

***

ಕೇರಳದ ಶಿಕ್ಷಣ ನೀತಿ ದೇಶಕ್ಕೇ ಮಾದರಿ

ಮಕ್ಕಳ ಭವಿಷ್ಯಕ್ಕಾಗಿ ಕೆಲವು ಪೋಷಕರು ಹಳ್ಳಿಗಳನ್ನು ಬಿಟ್ಟು ನಗರಕ್ಕೆ ಬಂದು ದುಡಿಯುತ್ತಿದ್ದಾರೆ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ನೆರೆಯ ಕೇರಳದಲ್ಲಿ ಅಲ್ಲಿನ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಾಲಾ– ಕಾಲೇಜಿನ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅಪಘಾತ ವಿಮಾ ಸೌಲಭ್ಯ ಸೌಲಭ್ಯ ಕಲ್ಪಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿದೆ. ಪದವಿ ಹಂತದವರೆಗೂ ಉಚಿತ ಶಿಕ್ಷಣ ಜಾರಿ ಮಾಡಿರುವ ಕೇರಳದ ಸಿ.ಎಂ ಪಿಣರಾಯಿ ವಿಜಯನ್ ಅವರ ದಿಟ್ಟಹೆಜ್ಜೆ ಶ್ಲಾಘನೀಯ.

– ಪಿ.ಸಿ. ಕಂಗಾಣಿಸೋಮು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.