
ನನಗೆ 19 ವರ್ಷ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಕ್ರಿಯಾಶೀಲನಾಗಿದ್ದೇನೆ. ಆದರೆ ನಾನು ಎಷ್ಟೇ ಪ್ರಯತ್ನ ಮಾಡಿದರೂ ನನ್ನ ಸಬ್ಸ್ಕ್ರೈಬರ್ಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ನನ್ನ ವಯಸ್ಸಿನ ಹುಡುಗಿಯರ ಫಾಲೋವರ್ಸ್ ಸಂಖ್ಯೆ ಬಹಳ ಇದೆ. ಅವರ ಪೋಸ್ಟ್ಗಳಿಗೆ ಬಹಳ ಲೈಕ್ಸ್ ಬರುತ್ತವೆ. ನಾನು ಎಷ್ಟೇ ಸಕಾರಾತ್ಮಕವಾದ, ಕ್ರಿಯಾಶೀಲವಾದ, ತಮಾಷೆಯ ಪೋಸ್ಟ್ ಹಾಕಿದರೂ ನನಗೆ ಲೈಕ್ಸ್ ಬರುತ್ತಿಲ್ಲ, ಫಾಲೋವರ್ಸ್ ಹೆಚ್ಚಾಗುತ್ತಿಲ್ಲ. ಬಹಳ ಬೇಸರವಾಗಿದೆ. ಕುಗ್ಗಿಹೋಗಿದ್ದೇನೆ. ಒಂಟಿತನ ಕಾಡುತ್ತಿದೆ. ಕಾಲೇಜಿನ ಪಠ್ಯದಲ್ಲೂ ನನಗೆ ಆಸಕ್ತಿ ಉಳಿದಿಲ್ಲ. ನಾನು ಯಾವುದರಲ್ಲೂ ಪ್ರಯೋಜನ ಇಲ್ಲದವನು, ನನ್ನಿಂದ ಏನನ್ನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ ಎನ್ನಿಸುತ್ತಿದೆ. ಪಾಲಕರಿಗೂ ನನ್ನ ಮೇಲೆ ಕೋಪವಿದೆ. ಸೋಷಿಯಲ್ ಮೀಡಿಯಾಗಳಿಂದಲೂ ನನಗೆ ಆದಾಯ ಬರುತ್ತಿಲ್ಲ. ಬೇರೆ ಯಾವ ಕೆಲಸ ಮಾಡಬೇಕು? ಹೇಗೆ ಬದುಕಬೇಕು?
ಇಂದಿನ ಬಹುತೇಕ ಯುವಕರು ಇದೇ ಮನಃಸ್ಥಿತಿಯಲ್ಲಿ ಇದ್ದಾರೆ. ಯಾರನ್ನೇ ನೋಡಿದರೂ ಮೊಬೈಲಿನೊಳಗೆ ತಲ್ಲೀನರಾಗಿರುತ್ತಾರೆ. ಒಂದರ್ಧ ನಿಮಿಷ ಸಮಯ ಸಿಕ್ಕರೂ ಸಾಕು, ತಕ್ಷಣ ಮೊಬೈಲನ್ನು ತೆಗೆದು ಗಮನಿಸುತ್ತಾರೆ. ಏನನ್ನೋ ಹುಡುಕುತ್ತಾರೆ, ಚಡಪಡಿಸುತ್ತಾರೆ. ಒಟ್ಟಿನಲ್ಲಿ ಅವ್ಯಕ್ತವಾದ ಆತಂಕದಲ್ಲಿ, ಅವಸರದಲ್ಲಿ ಇರುತ್ತಾರೆ.
ಅವರ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಓಡುತ್ತಿರುತ್ತವೆ. ದೇಹ ಮತ್ತೆಲ್ಲೋ ಯಾವುದೋ ಕೆಲಸವನ್ನು ಮಾಡುತ್ತಿರುತ್ತದೆ. ಇದರಿಂದ ವ್ಯಕ್ತಿಯ ನರಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಮನುಷ್ಯ ತನ್ನ ಜೊತೆಗಿರುವವರಿಂದ ದೂರಾಗುತ್ತಿದ್ದಾನೆ. ಸಂತೆಯಲ್ಲಿ ಸಹ ಆತ ಒಂಟಿಯಾಗುತ್ತಿದ್ದಾನೆ. ಯಾರಿಗೂ, ಯಾವ ರೀತಿಯಿಂದಲೂ ಇದು ಒಳ್ಳೆಯದಲ್ಲ.
ಇನ್ನು, ನೀನು ಕೂಡ ಕಲ್ಪನೆಯ ಪ್ರಪಂಚದಲ್ಲಿ ಕುಸಿದು ಹೋಗುತ್ತಿರುವೆ. ಎಷ್ಟು ಬೇಗ ನೀನು ವಾಸ್ತವಕ್ಕೆ ಬರುತ್ತೀಯೊ ಅಷ್ಟೂ ಒಳ್ಳೆಯದು. ದೇಹವು ಮನಸ್ಸಿನ ದಾಸ. ಮನಸ್ಸು ಹತೋಟಿ ತಪ್ಪಿದರೆ ದೇಹವೂ ಯಾಮಾರಿಬಿಡುತ್ತದೆ. ಬದುಕು ಡೋಲಾಯಮಾನವಾಗುತ್ತದೆ. ಮನಸ್ಸನ್ನು ಸರಿಯಾದ ರೀತಿಯಲ್ಲಿ ದುಡಿಸಿಕೊಂಡರೆ ಮಾತ್ರ ಐಹಿಕ ಸುಖ, ಸಂತೋಷವನ್ನು ಅನುಭವಿಸಲು ಸಾಧ್ಯ.
ನಿನ್ನ ಕ್ರಿಯಾಶೀಲತೆಯ ಬಗ್ಗೆ ನಿನಗೆ ವಿಶ್ವಾಸ ಹಾಗೂ ಅಭಿಮಾನ ಇದ್ದರೆ ಅದು ಒಳ್ಳೆಯದು. ಹಾಗಂತ ಅದರಿಂದ ಈಗಲೇ ನಿನ್ನ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಹಾಗೂ ಜನಪ್ರೀತಿ ಸಿಗಬೇಕು ಎನ್ನುವುದು ಅವಸರವಾದೀತು. ಇನ್ನು ನಿನ್ನ ವಯಸ್ಸಿನ ಹುಡುಗಿಯರಿಗೆ ಹೆಚ್ಚು ಲೈಕ್ಸ್ ಬರುವ ಬಗ್ಗೆ ನೀನು ಹೋಲಿಸಿಕೊಳ್ಳಬಾರದು. ನಿನಗಿಂತಲೂ ಹೆಚ್ಚು ಕಷ್ಟಪಡುತ್ತಿರುವ ಹುಡುಗರ ಬಗ್ಗೆ ನೀನು ಆಲೋಚಿಸಬೇಕು. ಅವರಿಗಿಂತ ನೀನು ಹೆಚ್ಚಿನ ಸ್ಥಾನದಲ್ಲಿರುವ ಬಗ್ಗೆ ಖುಷಿ ಪಡಬೇಕು.
ಇನ್ನು ಆಯ್ದುಕೊಂಡ ಒಂದು ಕ್ಷೇತ್ರದಲ್ಲಿ ಸಹನೆಯಿಂದ ಸಾಧನೆ ಮಾಡಿದವರಿಗೆ ಮಾತ್ರ ಯಶಸ್ಸು ಸಿದ್ಧಿಸುತ್ತದೆ. ಅವರ ದಾರಿಯಲ್ಲಿ ನೀನು ಸಾಗುವಂತಾಗಬೇಕು.
ನಿನ್ನ ವಯಸ್ಸಿನಲ್ಲಿ ನೀನು ಮಾಡಲೇಬೇಕಾದ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಕಾಲೇಜಿನ ಪಠ್ಯವನ್ನು ಓದಬೇಕು. ಪರೀಕ್ಷೆಯಲ್ಲಿ ಪಾಸಾಗಬೇಕು. ಸಮತೋಲಿತ ಆಹಾರ ಹಾಗೂ ನಿಯಮಿತ ವ್ಯಾಯಾಮಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪಾಲಕರನ್ನು ಪ್ರೀತಿಸಬೇಕು, ಗೌರವಿಸಬೇಕು. ಆಗ ಅವರಿಗೆ ನಿನ್ನ ಮೇಲಿನ ಕೋಪ ಇಳಿಯುತ್ತದೆ. ನಿನ್ನ ಬಗ್ಗೆ ಖುಷಿ ಪಡುತ್ತಾರೆ.
ಸಂಸಾರ ನಿರ್ವಹಣೆಗೆ ನಿನ್ನ ಗಳಿಕೆ ಅನಿವಾರ್ಯ ಆಗಿರದಿದ್ದರೆ ಅದರ ಬಗ್ಗೆ ನೀನು ಈಗ ಚಿಂತಿಸ
ಬೇಕಾಗಿಲ್ಲ. ಮೊದಲು ನೀನು ಚೆನ್ನಾಗಿ ಓದಿ, ನಿನ್ನಿಷ್ಟದ ಕೆಲಸಕ್ಕೆ ಸೇರಬೇಕು. ಅದಾದನಂತರ ಸೋಷಿಯಲ್ ಮೀಡಿಯಾಗಳ ಬಗ್ಗೆ ಆಲೋಚಿಸಿದರೆ ಸಾಕು. ನಿನಗೆ ಏನ್ನಾದರೂ ಸಾಧಿಸಲಿಕ್ಕೆ, ಪ್ರಸಿದ್ಧನಾಗಲಿಕ್ಕೆ ಬೇಕಾದಷ್ಟು ಸಮಯ ಇದೆ. ಈಗಲೇ ನೀನು ಯಾವುದಕ್ಕೂ ಅವಸರಿಸಬೇಕಾಗಿಲ್ಲ.
ಸೋಷಿಯಲ್ ಮೀಡಿಯಾಗಳಲ್ಲಿ ಸಾವಿರಾರು ಅಪರಿಚಿತರು ನಿನ್ನನ್ನು ಫಾಲೊ ಮಾಡಿದರೂ ಅವರಿಂದ ನಿಜಜೀವನದಲ್ಲಿ ನಿನಗೇನೂ ಉಪಯೋಗವಾಗುವುದಿಲ್ಲ. ನಿನ್ನ ವ್ಯಕ್ತಿತ್ವವನ್ನು ನೀನು ರೂಪಿಸಿಕೊಂಡಾಗ ಮಾತ್ರ ನಿನ್ನನ್ನು ಎಲ್ಲರೂ ಗೌರವಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.