ಆನಂದ್ ಮಹೀಂದ್ರ, ನೌಷಾದ್ ಖಾನ್
ಮುಂಬೈ: ಮಗನ ಕನಸಿಗೆ ಬೆನ್ನಲುಬಾಗಿ ನಿಂತ ಟೀಮ್ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ಅವರ ತಂದೆ ನೌಷಾದ್ ಖಾನ್ ಅವರನ್ನು ಹಾಡಿ ಹೊಗಳಿರುವ ಉದ್ಯಮಿ ಆನಂದ್ ಮಹೀಂದ್ರ, THAR ಕಾರನ್ನು ಉಡುಗೊರೆಯಾಗಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ದೇಶಿ ಕ್ರಿಕೆಟ್ನಲ್ಲಿ ರನ್ಗಳ ಹೊಳೆ ಹರಿಸಿದರೂ ಟೀಮ್ ಇಂಡಿಯಾ ತಂಡದಲ್ಲಿ ಅವಕಾಶ ಸಿಗದೆ ಹತಾಶರಾಗಿದ್ದ ಸರ್ಫರಾಜ್ ಅವರಿಗೆ ಗುರುವಾರ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ದೊರೆಯಿತು.
ಪಂದ್ಯಕ್ಕೂ ಮುನ್ನ ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಅವರಿಗೆ ಕ್ಯಾಪ್ ಕೊಟ್ಟಿದ್ದು, ಅಲ್ಲೇ ಇದ್ದ ತಂದೆ ನೌಷಾದ್ ಮತ್ತು ತಾಯಿ ರುಮಾನಾ ಜಹೂರ್ ಭಾವುಕರಾಗಿದ್ದರು. ಕ್ಯಾಪ್ ಪಡೆದ ನಂತರ ಸರ್ಫರಾಜ್ ಪೋಷಕರನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ಕುರಿತಂತೆ ಎಕ್ಸ್ನಲ್ಲಿ ಬರೆದುಕೊಂಡಿರುವ ಆನಂದ್ ಮಹೀಂದ್ರ, ನೌಷಾದ್ ಅವರನ್ನು ಪ್ರೇರಣೆದಾಯಕ ತಂದೆ ಎಂದು ಕರೆದಿದ್ದಾರೆ.
‘ಧೈರ್ಯ ಮತ್ತು ತಾಳ್ಮೆ... ಮಗುವಿನಲ್ಲಿ ಸ್ಫೂರ್ತಿ ತುಂಬಲು ಒಬ್ಬ ತಂದೆಗೆ ಇದಕ್ಕಿಂತ ಉತ್ತಮ ಗುಣಗಳು ಯಾವುದಿದೆ?. ನೌಷಾದ್ ಖಾನ್ ಅವರಿಗೆ Thar SUV ಉಡುಗೊರೆ ನೀಡುವ ಇಂಗಿತವಿದ್ದು, ಅದನ್ನು ಅವರು ಸ್ವೀಕರಿಸಿದರೆ ಅದು ನನ್ನ ಪುಣ್ಯ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.