ADVERTISEMENT

ಭಾರತದಲ್ಲಿ ಆಡಳಿತ ಅನುಭವದ ಕೊರತೆ; ಜಯ್ ಶಾ ವಿರುದ್ಧ ಅಫ್ರಿದಿ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2022, 4:07 IST
Last Updated 19 ಅಕ್ಟೋಬರ್ 2022, 4:07 IST
ಶಾಹೀದ್ ಆಫ್ರಿದಿ
ಶಾಹೀದ್ ಆಫ್ರಿದಿ   

ಮುಂಬೈ: ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್‌‌ನಲ್ಲಿ ಭಾಗವಹಿಸಲು ಭಾರತ ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಬದಲಾಗಿ ಟೂರ್ನಿಯು ತಟಸ್ಥ ತಾಣದಲ್ಲಿ ಆಯೋಜನೆಯಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಹೇಳಿದ್ದರು.

ಇದನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ, ಭಾರತದಲ್ಲಿ ಆಡಳಿತ ಅನುಭವದ ಕೊರತೆಯಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಎರಡು ತಂಡಗಳ ನಡುವೆ ಉತ್ತಮ ಒಡನಾಟ ಕಂಡುಬಂದಿದೆ. ಇದರಿಂದ ಉಭಯ ದೇಶಗಳ ನಡುವೆ ಉತ್ತಮ ಭಾವನೆ ಉಂಟಾಗಿದೆ. ಹಾಗಿರಬೇಕಾದರೆ ಬಿಸಿಸಿಐ ಕಾರ್ಯದರ್ಶಿ ಟ್ವೆಂಟಿ-20 ವಿಶ್ವಕಪ್ ವೇಳೆ ಇಂತಹ ಹೇಳಿಕೆಯನ್ನಾದರೂ ಏಕೆ ನೀಡುತ್ತಾರೆ ? ಇದು ಭಾರತದಲ್ಲಿ ಕ್ರಿಕೆಟ್ ಆಡಳಿತ ಅನುಭವದ ಕೊರತೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

2023ರ ಏಷ್ಯಾ ಕಪ್‌ಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದರೆ ಪಾಕಿಸ್ತಾನದಲ್ಲಿ ಭಾರತ ಆಡುವುದಿಲ್ಲ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಜಯ್ ಶಾ, ಹೇಳಿಕೆ ನೀಡಿದ್ದರು.

ಇದರಿಂದ ಉಭಯ ದೇಶಗಳ ಮಂಡಳಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದ್ದು, ಎಸಿಸಿ ಸದಸ್ಯ ಸ್ಥಾನ ತ್ಯಜಿಸುವ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.