ಪಾಕಿಸ್ತಾನ ಕ್ರಿಕೆಟ್ ತಂಡ
ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದಿನ (ಬುಧವಾರ) ಯುಎಇ ವಿರುದ್ಧದ ಪಂದ್ಯವನ್ನು ಬರಿಷ್ಕರಿಸುವ ನಿರ್ಧಾರದಿಂದ ಪಾಕಿಸ್ತಾನ ಹಿಂದೆ ಸರಿದಿದೆ ಎಂದು ವರದಿಯಾಗಿದೆ.
ಸತತ ಚರ್ಚೆಗಳ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇಂದು (ಬುಧವಾರ) ಯುಎಇ ವಿರುದ್ಧ ತನ್ನ ತಂಡವನ್ನು ಕಣಕ್ಕಿಳಿಸಲಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಪಾಕಿಸ್ತಾನವನ್ನು ಒಳಗೊಂಡ ಪಂದ್ಯಗಳಿಗೆ ವಿವಾದಿತ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರು ಕರ್ತವ್ಯ ನಿಭಾಯಿಸುವುದಿಲ್ಲ ಎಂದೂ ವರದಿಯಾಗಿದೆ.
ಆ್ಯಂಡಿ ಪೈಕ್ರಾಫ್ಟ್ ಅವರ ಬದಲು ರಿಚಿ ರಿಚರ್ಡ್ಸನ್ ಅವರಿಗೆ ಹೊಣೆ ವಹಿಸಲು ಸೂಚಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ಅಲ್ಲದೆ ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕಾ ದಾಳಿಯ ಸಂತ್ರಸ್ತರು ಹಾಗೂ ಸೇನಾಪಡೆಗಳಿಗೆ ಅರ್ಪಿಸಿದ್ದರು.
ಇದರ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಿದ್ದ ಪಿಸಿಬಿ, ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವಂತೆ ಐಸಿಸಿಗೆ ದೂರು ದಾಖಲಿಸಿತ್ತು. ಆದರೆ ಪಾಕಿಸ್ತಾನದ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ತಳ್ಳಿ ಹಾಕಿತ್ತು.
ಏತನ್ಮಧ್ಯೆ ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ನಿಗದಿಯಾಗಿದ್ದ ಪ್ರತಿಕಾಗೋಷ್ಠಿಯನ್ನು ಪಾಕಿಸ್ತಾನ ತಂಡ ರದ್ದುಗೊಳಿಸಿತ್ತು. ಈ ನಡುವೆ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದರು.
ಒಂದು ವೇಳೆ ಪಾಕಿಸ್ತಾನ ಟೂರ್ನಿಯಿಂದ ಹಿಂದೆ ಸರಿದರೆ ಆರ್ಥಿಕವಾಗಿ ಭಾರಿ ನಷ್ಟ ಅನುಭವಿಸಲಿದ್ದು, ಹಿನ್ನಡೆ ಎದುರಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.