ರೌಫ್, ಫರ್ಹಾನ್, ಸೂರ್ಯಕುಮಾರ್ ಯಾದವ್
ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದ ಸಂದರ್ಭದಲ್ಲಿ ಪಾಕ್ ವೇಗಿ ಹ್ಯಾರಿಸ್ ರೌಫ್ ಹಾಗೂ ಬ್ಯಾಟರ್ ಸಾಹಿಬ್ಜಾದಾ ಫರ್ಹಾನ್ ಭಾರತೀಯರನ್ನು ಗುರಿಯಾಗಿರಿಸಿಕೊಂಡು ಪ್ರಚೋದನಕಾರಿ ಸನ್ನೆ ಮಾಡಿದ್ದಾರೆ ಎಂದು ಭಾರತ ಐಸಿಸಿಗೆ ಅಧಿಕೃತ ದೂರು ದಾಖಲಿಸಿದೆ.
ಪಾಕಿಸ್ತಾನದ ಇಬ್ಬರು ಆಟಗಾರರ ವಿರುದ್ಧ ಐಸಿಸಿಗೆ ಇ–ಮೇಲ್ ಮೂಲಕ ಬಿಸಿಸಿಐ ದೂರು ದಾಖಲಿಸಿದೆ ಎಂಬ ಮಾಹಿತಿಯನ್ನು ಬುಧವಾರ ಧೃಡಪಡಿಸಿದೆ.
ಮೈದಾನದಲ್ಲಿ ಫರ್ಹಾನ್ ಹಾಗೂ ರೌಫ್ ಮಾಡಿದ ತಮ್ಮ ಸನ್ನೆಗೆ ಸಂಬಂಧಿಸಿದಂತೆ ಲಿಖಿತ ಉತ್ತರ ನೀಡಲು ನಿರಾಕರಿಸಿದರೆ ಇಬ್ಬರನ್ನು ಐಸಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅವರು ವಿಚಾರಣೆಗೆ ಐಸಿಸಿ ಎಲೈಟ್ ಪ್ಯಾನಲ್ ರೆಫರಿಯಾಗಿರುವ ರಿಚಿ ರಿಚರ್ಡ್ಸನ್ ಮುಂದೆ ಹಾಜರಾಗಬೇಕಾಗುತ್ತದೆ.
ಇತ್ತ. ಸೆ 14 ರಂದು ನಡೆದ ಪಾಕ್ ವಿರುದ್ಧದ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರಿಗೆ ಹಾಗೂ ಬಳಿಕ ನಡೆದ ಆಪರೇಷನ್ ಸಿಂಧೂರ್ನಲ್ಲಿ ಭಾಗಿಯಾದ ಬಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸುವುದಾಗಿ ಹೇಳಿದ್ದರು.
ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸೂರ್ಯಕುಮಾರ್ ಯಾದವ್ ವಿರುದ್ಧ ಪ್ರತೀಕಾರದ ಸಂಕೇತವಾಗಿ ಅಂತರರಾಷ್ಟ್ರೀಯ ಮಾತೃ ಸಂಸ್ಥೆಗೆ ಅಧಿಕೃತ ದೂರು ನೀಡಿತ್ತು. ಪಿಸಿಬಿ ತನ್ನ ಆರೋಪದಲ್ಲಿ ಸೂರ್ಯಕುಮಾರ್ ಯಾದವ್ ಅವರ ಹೇಳಿಕೆಗಳು ರಾಜಕೀಯ ಎಂದು ಆರೋಪಿಸಿದೆ. ಆದರೆ, ಪಿಸಿಬಿ ಯಾವಾಗ ದೂರು ದಾಖಲಿಸಿದೆ ಎಂಬ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.