
supreme c
ನವದೆಹಲಿ: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಆರು ಜನ ಆರೋಪಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು 2022ರಲ್ಲಿ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಮಧ್ಯ ಪ್ರವೇಶಿಸಲು ಬಿಸಿಸಿಐಗೆ ಅನುಮತಿ ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯಾ ಬಾಗಚಿ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತಂತೆ ಇದೇ 16 ರಂದು ಬಿಸಿಸಿಐಗೆ ನ್ಯಾಯಾಲಯಕ್ಕೆ ಸಹಾಯ ಮಾಡಲು ಅವಕಾಶ ಕಲ್ಪಿಸಿದೆ.
ಪ್ರತಿವಾದಿಗಳು ಮುಂದಿನ ನಾಲ್ಕು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ತಿಳಿಸಿದೆ. ಕೇಂದ್ರ ಸರ್ಕಾರವೂ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ಅವಕಾಶ ನೀಡಲಾಗಿದ್ದು ವಿಚಾರಣೆಯನ್ನು ನವೆಂಬರ್ 27ಕ್ಕೆ ನಿಗದಿಪಡಿಸಲಾಗಿದೆ.
ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿತ್ತೆನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣವನ್ನು ಮೂರು ವರ್ಷಗಳ ಹಿಂದೆ ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ವಕೀಲ ಡಿ. ಎಲ್. ಚಿದಾನಂದ ಅವರ ಮೂಲಕ ಸಲ್ಲಿಸಲಾದ ವಿಶೇಷ ಅನುಮತಿ ಅರ್ಜಿಯಲ್ಲಿ ‘ಇದು ಅಗತ್ಯ ಮತ್ತು ಸರಿಯಾದ ನಿಲುವು’ ಎಂದು ಬಿಸಿಸಿಐ ಸಮರ್ಥಿಸಿಕೊಂಡಿದೆ.
‘ಮ್ಯಾಚ್ ಫಿಕ್ಸಿಂಗ್ ಕೃತ್ಯವು ಸ್ಪಷ್ಟವಾಗಿ ವಂಚನೆಯ ಅಪರಾಧವಾಗಿದೆ. ಇದರಲ್ಲಿ ವಂಚನೆ ಎಸಗುವ ಎಲ್ಲ ಅಂಶಗಳೂ ಒಳಗೊಂಡಿವೆ. ಅವುಗಳಲ್ಲಿ ಅಪ್ರಾಮಾಣಿಕತೆ, ಉದ್ದೇಶಪೂರ್ವಕ ಪ್ರಚೋದನೆ, ಹಾನಿಯನ್ನು ಉಂಟುಮಾಡುವ ದುರುದ್ದೇಶಗಳಿವೆ. ಆದ್ದರಿಂದ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 417ರ ಅಡಿಯಲ್ಲಿ ವಂಚನೆ ಆರೋಪ ಹೊರಿಸಬಹುದು’ ಎಂದು ಬಿಸಿಸಿಐ ವಾದಿಸಿದೆ. ಇದರೊಂದಿಗೆ ಕೆಲವು ಪೂರಕ ದಾಖಲೆಗಳನ್ನೂ ನೀಡಿರುವ ಬಿಸಿಸಿಐ. ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆ ನೀಡಲು ಅವಕಾಶವಿದೆ ಎಂದೂ ಪ್ರತಿಪಾದಿಸಿದೆ.
2018 ಮತ್ತು 2019ರಲ್ಲಿ ನಡೆದಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಗಳ ಕೆಲವು ಪಂದ್ಯಗಳಲ್ಲಿ ಮೋಸದಾಟ ನಡೆದ ಆರೋಪಗಳು ಕೇಳಿಬಂದಿದ್ದವು. ಅದರಲ್ಲಿ ಇಬ್ಬರು ಆಟಗಾರರು, ತಂಡವೊಂದರ ಮಾಲೀಕ, ತಂಡದ ಉಸ್ತುವಾರಿ, ಒಬ್ಬ ಕೋಚ್, ಒಬ್ಬ ಬುಕ್ಕಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯ ಒಬ್ಬ ಸದಸ್ಯರ ಮೇಲೆ ಸೆಕ್ಷನ್ 420 ಮತ್ತು 120 ಬಿ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು 2022ರ ಜನವರಿ 10ರಂದು ಹೈಕೋರ್ಟ್ ರದ್ದುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.