ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ
– ಪಿಟಿಐ ಚಿತ್ರ
ನವದೆಹಲಿ: ದುಬೈನಲ್ಲಿ ಈಚೆಗೆ ಚಾಂಪಿಯನ್ಸ್ ಟ್ರೋಫಿ ಜಯಿಸಿದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ₹ 58 ಕೋಟಿ ಬಹುಮಾನವನ್ನು ಬಿಸಿಸಿಐ ಘೋಷಿಸಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ರೋಹಿತ್ ಬಳಗವು ನ್ಯೂಜಿಲೆಮಡ್ ವಿರುದ್ಧ ಗೆದ್ದಿತ್ತು. ತಂಡದ ಆಟಗಾರರು, ತರಬೇತಿ ಸಿಬ್ಬಂದಿ, ನೆರವು ಸಿಬ್ಬಂದಿ ಮತ್ತು ರಾಷ್ಟ್ರೀಯ ಪುರುಷರ ತಂಡದ ಆಯ್ಕೆ ಸಮಿತಿಯವರಿಗೆ ಈ ಹಣದಲ್ಲಿ ಪಾಲು ಸಲ್ಲಲಿದೆ.
‘ಒಂದರ ಹಿಂದೆ ಒಂದು ಐಸಿಸಿ ಟ್ರೋಫಿ ಗೆದ್ದಿರುವುದು ತಂಡದ ವಿಶೇಷ ಸಾಧನೆ. ಆಟಗಾರರ ಸಾಧನೆಯನ್ನು ಗುರುತಿಸಿ ಗೌರವಿಸಲು ಈ ಮೊತ್ತವನ್ನು ಘೋಷಿಸಲಾಗಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘2025ರಲ್ಲಿ ಭಾರತವು ಗೆದ್ದ ಎರಡನೇ ಐಸಿಸಿ ಟ್ರೋಫಿ ಇದಾಗಿದೆ. 19 ವರ್ಷದೊಳಗಿನವರ ಮಹಿಳೆಯರ ವಿಶ್ವಕಪ್ ವಿಜಯವೂ ಇದೇ ವರ್ಷ ದಾಖಲಾಗಿದೆ. ಇದು ನಮ್ಮಲ್ಲಿ ಕ್ರಿಕೆಟ್ ಆಟದ ಉತ್ತಮ ಸೌಲಭ್ಯಗಳನ್ನು ತೋರಿಸುತ್ತದೆ’ ಎಂದು ಬಿನ್ನಿ ಹೇಳಿದ್ದಾರೆ.
ಕಳೆದ ಎಂಟು ತಿಂಗಳಲ್ಲಿ ಭಾರತವು ಗೆದ್ದ 3ನೇ ಐಸಿಸಿ ಟ್ರೋಫಿ ಇದಾಗಿದೆ. 2024ರಲ್ಲಿ ರೋಹಿತ್ ನಾಯಕತ್ವದ ತಂಡವು ಟಿ20 ವಿಶ್ವಕಪ್ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.